ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು:ಶೋಭಾ ಕರಂದ್ಲಾಜೆಯವರಿಗೆ ಮತ್ತೆ ಒಲಿಯಲಿರುವ ಮಂತ್ರಿಪದವಿ

ಬೆಂಗಳೂರು:ಶೋಭಾ ಕರಂದ್ಲಾಜೆಯವರಿಗೆ ಮತ್ತೆ ಒಲಿಯಲಿರುವ ಮಂತ್ರಿಪದವಿ

Wed, 06 Jan 2010 18:38:00  Office Staff   S.O. News Service
ಬೆಂಗಳೂರು, ಜನವರಿ 6:ಸಚಿವ ಸ್ಧಾನದಿಂದ ಪದಚ್ಯುತರಾದ ಶೋಭಾಕರಂದ್ಲಾಜೆಗೆ  ಮತ್ತೆ ಮಂತ್ರಿ ಸ್ಧಾನ ಒಲಿಯಲಿದೆಯೇ?. 

ಹೌದು. ಹಾಗಂತ ಸುದ್ದಿ ಹಬ್ಬಿದೆ. ಅಂತಹ ತೆರೆಮರೆಯ ಪ್ರಯತ್ನಗಳೂ ಕೂಡ ಮೂರ್ತರೂಪ ಪಡೆಯುತ್ತಿವೆ. ಮಂತ್ರಿಮಂಡಲದ ಆಮೂಲಾಗ್ರ ಪುನರ್ ರಚನೆಯ ಸಂದರ್ಭದಲ್ಲಿ ಶೋಭಾ ಮತ್ತೆ ಸಚಿವರಾಗಿ ಯಡಿಯೂರಪ್ಪ ಸಂಪುಟದಲ್ಲಿ ವಿರಾಜಮಾನರಾಗಲಿದ್ದಾರೆ. 

ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಶೋಭಾಕರಂದ್ಲಾಜೆ ನಡೆಸುತ್ತಿರುವ ತೀವ್ರ ಪ್ರಯತ್ನಗಳು ಇದಕ್ಕೆ ಪುಷ್ಠಿ ನೀಡುತ್ತಿವೆ. ಅಂತೂ ಶೋಭಾ ಮತ್ತೆ ಮಂತ್ರಿಯಾಗಲು ಶುಭ ಮುಹೂರ್ತ ಕೂಡಿ ಬರುತ್ತಿದೆ. 

ರಾಜ್ಯ ಬಿಜೆಪಿ ಪಕ್ಷದ ವಿಶ್ವಸನೀಯ ಮೂಲಗಳು ಈ ವಿಷಯವನ್ನು ದೃಢಪಡಿಸಿದ್ದು, ಮಂತ್ರಿಮಂಡಲಕ್ಕೆ ಸೇರ್ಪಡೆಮಾಡಿಕೊಳ್ಳಲು ಸ್ವತ: ಯಡಿಯೂರಪ್ಪ ಇದೀಗ ವೇದಿಕೆ ಸಿದ್ಧಪಡಿಸುತ್ತಿದ್ದಾರೆ. 

ಇದಕ್ಕೆ ಪೂರಕವಾಗಿ ಶೋಭಾಕರಂದ್ಲಾಜೆ ಅವರು ಕೂಡ ಪ್ರಯತ್ನಗಳನ್ನು ಮುಂದುವರೆಸುತ್ತಿದ್ದು, ಪ್ರಮುಖವಾಗಿ ಲೋಕಸಭೆ ವಿಪಕ್ಷ ನಾಯಕಿ ಸುಷ್ಮಾ ಸ್ವರಾಜ್ ಅವರನ್ನು ಈ ಸಂಬಂಧ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ. 

ಸುಷ್ಮಸ್ವರಾಜ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವ ಶೋಭಾ, ತಮ್ಮ ನಡುವೆ ಇದ್ದ ಭಿನ್ನಾಭಿಪ್ರಾಯವನ್ನು ನಿವಾರಿಸಿಕೊಳ್ಳುವ ಯತ್ನ ನಡೆಸಿದ್ದಾರೆ. ಸ್ವತ: ಸುಷ್ಮಾಸ್ವರಾಜ್ ಅವರೂ ಕೂಡ ಶೋಭಾಕರಂದ್ಲಾಜೆ ಅವರ ಪರವಾಗಿ ಅನುಕಂಪ ವ್ಯಕ್ತಪಡಿಸಿದ್ದಾರೆ. 

ಮಂತ್ರಿಮಂಡಲದಲ್ಲಿದ್ದ ಏಕೈಕ ಮಹಿಳಾ ಸಚಿವೆಯ ಪದತ್ಯಾಗಕ್ಕೆ ಕಾರಣವಾದ ಸುಷ್ಮಾಸ್ವರಾಜ್ ಅವರ ಬಗ್ಗೆ ರಾಜ್ಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಈ ಕಹಿ ಬೆಳವಣಿಗೆಯ ಮಾಹಿತಿ ಸುಷ್ಮಾಸ್ವರಾಜ್ ಅವರಿಗೂ ಕೂಡ ತಲುಪಿದ್ದು, ಮುಂಬರುವ ದಿನಗಳಲ್ಲಿ ಇದು ರಾಜ್ಯದಲ್ಲಿ ತಮ್ಮ ವರ್ಚಸ್ಸಿಗೆ ಧಕ್ಕೆಯಾಗಬಹುದು ಎಂಬ ಆತಂಕವೂ ಕೂಡ ಸುಷ್ಮಾ ಅವರಲ್ಲಿದೆ. 

ಇದೇ ಕಾರಣದಿಂದಾಗಿ ಸುಷ್ಮಾಸ್ವರಾಜ್ ಇದೀಗ ಶೋಭಾಕರಂದ್ಲಾಜೆ ಅವರ ಬಗ್ಗೆ ಮೃದುಧೋರಣೆ ತಳೆದಿದ್ದಾರೆ ಎನ್ನಲಾಗಿದೆ. ಶೋಭಾ ಮತ್ತೊಮ್ಮೆ ಮಂತ್ರಿಮಂಡಲಕ್ಕೆ ಸೇರ್ಪಡೆಯಾದರೆ ಅದನ್ನು ವಿರೋಧಿಸದಿರಲು ನಿರ್ಧರಿಸಿದ್ದಾರೆ ಎಂದು ಇದೇ ಮೂಲಗಳು ತಿಳಿಸಿವೆ. 

ಇದಲ್ಲದೇ ಶೋಭಾ ತಲೆದಂಡಕ್ಕೆ ಪಟ್ಟು ಹಿಡಿದಿದ್ದ ರೇಣುಕಾಚಾರ್ಯ ಇದೀಗ ಮಂತ್ರಿ. ರೇಣುಕಾಚಾರ್ಯ ಅವರಿಗೇ ಬಹಳಷ್ಟು ಪ್ರತಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಅವರು ಇದೀಗ ಮತ್ತೊಮ್ಮೆ ಶೋಭಾ ವಿರುದ್ಧ ತಿರುಗಿ ಬೀಳಲಾರರು. 

ನರ್ಸ್ ಜಯಲಕ್ಷ್ಮಿ ಪ್ರಕರಣದಲ್ಲಿ ಮಹಿಳಾ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿರುವ ರೇಣುಕಾಚಾರ್ಯ ಮತ್ತೊಮ್ಮೆ ಶೋಭಾಕರಂದ್ಲಾಜೆ ಅವರನ್ನು ವಿರೋಧಿಸಿ ಮತ್ತೊಂದು ರೀತಿಯ ಸಮಸ್ಯೆಯನ್ನು ತಂದುಕೊಳ್ಳಲಾರರು. ಅದಕ್ಕಾಗಿ ರೇಣುಕಾಚಾರ್ಯ ಅವರೂ ಕೂಡ ರಾಜೀಗೆ ಮುಂದಾಗಿದ್ದಾರೆ. 

ಇನ್ನು ಗಣಿ ರೆಡ್ಡಿಗಳು ಕೂಡ ಶೋಭಾಕರಂದ್ಲಾಜೆ ಅವರನ್ನು ವಿರೋಧಿಸುವ ಸ್ಧಿತಿಯಲ್ಲಿ ಈಗ ಇಲ್ಲ. ಅವರದೇ ನೂರಾರು ಸಮಸ್ಯೆಗಳು ಅವರನ್ನೇ ಸುತ್ತಿಕೊಂಡಿರುವಾಗ ಶೋಭಾ ವಿಚಾರವಾಗಿ ಹೋರಾಟ ನಡೆಸಿದರೆ ಮಹಿಳಾ ಸಮುದಾಯದಿಂದ ವಿರೋಧ ಎದುರಾಗಬಹುದು. ಒಂದು ವೇಳೆ ರೆಡ್ಡಿ ಸಹೋದರರು ವಿರೋಧ ತೋರಿದರೂ ಕೂಡ ಯಡಿಯೂರಪ್ಪ ಅದನ್ನು ಲೆಕ್ಕಿಸದೇ ಮಂತ್ರಿಮಂಡಲಕ್ಕೆ ಸೇರ್ಪಡೆ ಮಾಡಿಕೊಂಡೇ ತೀರಬೇಕೆಂಬ ನಿಲುವಿಗೆ ಬಂದಿದ್ದಾರೆ. 

ಇನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರನ್ನೂ ಕೂಡ ಭೇಟಿಮಾಡಿರುವ ಶೋಭಾಕರಂದ್ಲಾಜೆ, ಅವರ ಸಿಂಪಥಿ ಪಡೆಯುವಲ್ಲಿ ಸಾಕಷ್ಟು ಮಟ್ಟಿಗೆ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ. 

ಸಂಘಪರಿವಾರವಂತೂ ಯಾವತ್ತೂ ಶೋಭಾಕರಂದ್ಲಾಜೆ ಅವರ ಪರವಾಗಿಯೇ ಇದೆ. ಮೊದಲಿನಿಂದಲೂ ಪರಿವಾರದ ಒಡನಾಟದಲ್ಲೇ ಇರುವ ಶೋಭಾ ಅವರನ್ನು ಮಂತ್ರಿಮಂಡಲಕ್ಕೆ ತೆಗೆದುಕೊಂಡರೆ ಅದಕ್ಕೆ ಧೈರ್ಯವಾಗಿ ನಿಲ್ಲುವ ಸಾಲಿನಲ್ಲಿ ಪರಿವಾರದ ಮುಖಂಡರು ಅಗ್ರ ಪಂಕ್ತಿಯಲ್ಲಿರುತ್ತಾರೆ. ಇದು ಶೋಭಾ ಅವರಿಗೆ ವರದಾನವಾಗಿ ಪರಿಣಮಿಸಲಿದೆ ಎನ್ನಲಾಗಿದೆ. 

ಅಂತೂ ಮುಖ್ಯಮಂತ್ರಿ ಯಡಿಯುರಪ್ಪ ಶೋಭಾಕರಂದ್ಲಾಜೆ ಅವರನ್ನು ಮಂತ್ರಿಮಂಡಲಕ್ಕೆ ತೆಗೆದುಕೊಳ್ಳಲು ತುದಿಗಾಲಲ್ಲಿ ನಿಂತಿದ್ದು, ತೆರೆಮರೆಯಲ್ಲಿ ಪ್ರಯತ್ನ ಮುಂದುವರೆಸಿದ್ದಾರೆ. ಅದಕ್ಕೆ ಪೂರಕವಾಗಿ ಶೋಭಾಕರಂದ್ಲಾಜೆ ಅವರೂ ಕೂಡ ನಡೆದುಕೊಳ್ಳುತ್ತಿದ್ದು, ಮತ್ತೊಮ್ಮೆ ಸಚಿವ ಸ್ಧಾನವನ್ನು  ಶೋಭಾಕರಂದ್ಲಾಜೆ ಅಲಂಕರಿಸಲಿದ್ದಾರೆ ಎಂದು ಇದೇ ಮೂಲಗಳು ತಿಳಿಸಿವೆ. 


Share: