ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಧಾರವಾಡ : ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಚಾಲನೆ

ಧಾರವಾಡ : ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಚಾಲನೆ

Tue, 28 Nov 2023 05:43:09  Office Staff   SO News

ಧಾರವಾಡ : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಜನೋಪಯೋಗಿ ಯೋಜನೆಗಳನ್ನು ಗ್ರಾಮೀಣ ಪ್ರದೇಶದ ಜನರಿಗೆ ತಲುಪಿಸುವಲ್ಲಿ ನೆರವಾಗಿರುವ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮಕ್ಕೆ ಧಾರವಾಡ ಜಿಲ್ಲೆಯ ಬೇಲೂರು ಗ್ರಾಮ ಪಂಚಾಯಿತಿಯಲ್ಲಿ ಚಾಲನೆ ನೀಡಲಾಯಿತು.

ಕೇಂದ್ರ ಸರ್ಕಾರದ ಯೋಜನೆಗಳು ಸಾರ್ವಜನಿಕರಿಗೆ ತಲುಪಿ ಅವರ ಬದುಕಿನಲ್ಲಿ ಗುಣಾತ್ಮಕ ಬದಲಾವಣೆ ಬಂದಿರುವುದನ್ನು ತಿಳಿಸುವುದರೊಂದಿಗೆ, ಕೇಂದ್ರ ಸರ್ಕಾರದ ಯೋಜನೆಗಳಿಂದ ವಂಚಿತರಾಗಿರುವ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಇದಾಗಿದ್ದು, ಈ ಕಾರ್ಯಕ್ರಮವು ಪ್ರತಿದಿನ ಎರಡು ಗ್ರಾಮಗಳಂತೆ ಜಿಲ್ಲೆಯ ಒಟ್ಟು 145  ಗ್ರಾಮ ಪಂಚಾಯತಿಗಳಲ್ಲಿ ಜನವರಿ 18, 2024 ರ ವರೆಗೆ ಜಿಲ್ಲೆಯಲ್ಲಿ ಸಮರ್ಪಕವಾಗಿ ಕೈಗೊಳ್ಳಲಾಗುತ್ತಿದೆ.

ಯಾತ್ರೆಯು ಜಿಲ್ಲೆಯ 145 ಗ್ರಾಮ ಪಂಚಾಯತಗಳ ಮಟ್ಟದಲ್ಲಿ  ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಸೂಕ್ತ ಮಾಹಿತಿ ನೀಡಲಾಗುತ್ತಿದೆ. ಜೊತೆಗೆ  ಚಲನಚಿತ್ರ ಪ್ರದರ್ಶನದ ಮೂಲಕ ಹಾಗೂ ವಿವಿಧ ಇಲಾಖೆಗಳು ತಮ್ಮ ಇಲಾಖೆಯಲ್ಲಿ ಇರುವ ಸರ್ಕಾರದ ಯೋಜನೆಗಳ ಮಾಹಿತಿ ನೀಡಿ ಅದರ ಸದುಪಯೋಗ ಪಡೆದುಕೊಳ್ಳಲು ತಿಳಿಸಲಾಗುತ್ತಿದೆ.

ಜಿಲ್ಲಾ ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಪ್ರಭುದೇವ ಮಾತನಾಡಿ, ಯಾತ್ರೆಯು ಜಿಲ್ಲೆಯ 145 ಗ್ರಾಮ ಪಂಚಾಯತಗಳ ಮಟ್ಟದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಸೂಕ್ತ ಮಾಹಿತಿ ನೀಡಲಾಗುತ್ತಿದೆ. ಜೊತೆಗೆ ಚಲನಚಿತ್ರ ಪ್ರದರ್ಶನದ ಮೂಲಕ ಯೋಜನೆಯ ಲಾಭದ ಬಗ್ಗೆ ತಿಳಿಸಲಾಗುತ್ತಿದೆ. ಜಿಲ್ಲೆಯಲ್ಲಿ ಸುಮಾರು 1.4 ಲಕ್ಷ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ನೀಡಲಾಗಿದೆ ಎಂದರು. ಇದರ ಜೊತೆಗೆ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಫಲಾನುಭವಿ ಸಂತೋಷ  ಮಾತನಾಡಿ, ಈ ಯೋಜನೆ ಅಡಿಯಲ್ಲಿ ರೈತರಿಗೆ ಮೂರು ಲಕ್ಷದವರೆಗೂ ಹಾಗೂ ಕೇಂದ್ರ ಸರ್ಕಾರದಿಂದ ಶೇ.4 ಸಬ್ಸಿಡಿ ನೀಡಲಾಗುತ್ತಿದೆ. ಈ ಯೋಜನೆಯಿಂದ ರೈತರಿಗೆ ಬಹಳ ಅನುಕೂಲವಾಗಿದೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು. 

ಇದೇ ಕಾರ್ಯಕ್ರಮದಲ್ಲಿ ಉಜ್ವಲ ಯೋಜನೆ ನೋಡಲ್ ಅಧಿಕಾರಿ ಸಂಜೀವ ಮಾತನಾಡಿ, ಪ್ರಧಾನಮಂತ್ರಿ ಉಜ್ವಲ ಯೋಜನೆ ಜಿಲ್ಲೆಯಲ್ಲಿ ಈವರೆಗೂ 3,000 ಜನರು ಅನಿಲ್ ಯೋಜನೆ ಲಾಭ ಪಡೆದಿದ್ದಾರೆ ಎಂದು ಗ್ರಾಮಸ್ಥರಿಗೆ ಮಾಹಿತಿ ನೀಡಿದರು ಹಾಗೂ ಇದೆ ಯೋಜನೆಯ ಫಲಾನುಭವಿ,  ಪಾರ್ವತಿ ಹಿರೇಮಠ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಇದೇ ಸಂದರ್ಭದಲ್ಲಿ ನಬಾರ್ಡ್ ಜಿಲ್ಲಾ ಅಭಿವೃದ್ದಿ ಅಧಿಕಾರಿ ಮಯೂರ ಕಾಂಬಳೆ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ನೀಡಿದರು ಹಾಗೂ ರಾಮಪ್ಪ ಮತ್ತು ವೀರೇಶ್ ಎಂಬ ಫಲಾನುಭವಿಗಳು ತಮ್ಮ ಅಭಿಪ್ರಾಯ ಹಂಚಿಕೊಂಡರು. ಸೆಂಟ್ರಲ್ ಕೊ ಆಪರೇಟಿವ್ ಬ್ಯಾಂಕ್ ಲಿ, ಧಾರವಾಡ ಮೂಲಕ ಮೊಬೈಲ್ ಎಟಿಎಂ ವ್ಯಾನ್ ಮತ್ತು ಕೃಷಿ ಇಲಾಖೆಯಿಂದ ಡ್ರೋನ್ ಮೂಲಕ ಔಷದಿ ಸಿಂಪಡಣೆ ಕುರಿತು ರೈತರಿಗೆ ಪ್ರಾತ್ಯೇಕ್ಷಿಕೆ ತೋರಿಸಲಾಯಿತು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಬಿ.ಎಂ. ಸಂದೂರಿ ಹಾಗೂ ಅಭಿವೃದ್ದಿ ಅಧಿಕಾರಿ ಬೆಟದೂರ, ಆಕಾಶವಾಣಿ ಧಾರವಾಡದ ಗ್ರಾಮೀಣ ನೋಡಲ್ ಅಧಿಕಾರಿ ಅರುಣ ಪ್ರಭಾಕರ ಮತ್ತು ಸಿಬ್ಬಂದಿ ಮತ್ತು ಕೇಂದ್ರ ಸಂವಹನ ಇಲಾಖೆಯ ನಗರ ನೋಡಲ್ ಅಧಿಕಾರಿ ಮುರಳೀಧರ ಕಾರಭಾರಿ ಸೇರಿದಂತೆ ವಿವಿಧ ಬ್ಯಾಂಕಿನ ಅಧಿಕಾರಿಗಳು, ಇಲಾಖೆಗಳ ಮುಖ್ಯಸ್ಥರು,  ಮುಂತಾದವರು ಭಾಗವಹಿಸಿದ್ದರು.


Share: