ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ಗೋಹತ್ಯೆ ನಿಷೇಧ ಕಾಯ್ಕೆ ಹಿಂದಕ್ಕೆ ಪಡೆದ ಸರ್ಕಾರ - ಸಾರ್ವಜನಿಕ ಚಳುವಳಿಗೆ ಜಯ

ಬೆಂಗಳೂರು: ಗೋಹತ್ಯೆ ನಿಷೇಧ ಕಾಯ್ಕೆ ಹಿಂದಕ್ಕೆ ಪಡೆದ ಸರ್ಕಾರ - ಸಾರ್ವಜನಿಕ ಚಳುವಳಿಗೆ ಜಯ

Wed, 03 Mar 2010 17:09:00  Office Staff   S.O. News Service

ಬೆಂಗಳೂರು,ಮಾರ್ಚ್ 3: ಸಾರ್ವಜನಿಕರ ತೀವ್ರ ಪ್ರತಿಭಟನೆಗೆ ಮಣಿದ ರಾಜ್ಯ ಬಿಜೆಪಿ ಸರ್ಕಾರ ಉದ್ದೇಶಿತ ಗೋಹತ್ಯಾ ನಿಷೇಧ ಕಾಯ್ದೆಯನ್ನು ಹಿಂದಕ್ಕೆ ಪಡೆದಿದೆ.

 

ವಿಧಾನಸಭೆಯಲ್ಲಿ ಈ ಹಿಂದೆ ಮಂಡಿಸಲಾಗಿದ್ದ ಕರ್ನಾಟಕ ಗೋಹತ್ಯೆ ಪ್ರತಿಬಂಧಕ ಮತ್ತು ಜಾನುವಾರು ಸಂರಕ್ಷಣಾ [ ತಿದ್ದುಪಡಿ ] ವಿಧೇಯಕ, ೨೦೦೯ ರನ್ನು ಅಧಿಕೃತವಾಗಿ ಹಿಂದಕ್ಕೆ ಪಡೆಯುವ ಮೂಲಕ ಸಾರ್ವಜನಿಕರ ಒತ್ತಡಕ್ಕೆ ಕೊನೆಗೂ ಮಣಿದಿರುವುದು ಸ್ಪಷ್ಟವಾಗಿದೆ.

 

 

ಮಧ್ಯಾಹ್ನದ ಭೋಜನ ವಿರಾಮದ ನಂತರ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ, ಸರ್ಕಾರ ಗೋಹತ್ಯಾ ನಿಷೇಧ ಮಸೂದೆಯನ್ನು ಹಿಂದಕ್ಕೆ ಪಡೆಯಲು ನಿರ್ಧರಿಸಿದೆ ಎಂದು ಪ್ರಕಟಿಸಿದರು. ಆದರೆ ಇದಕ್ಕೆ ಸ್ಪಷ್ಟೀಕಿರಣ ಬಯಸಿದ ಕಾಂಗ್ರೆಸ್‌ನ ಉಪನಾಯಕ ಟಿ.ಬಿ.ಜಯಚಂದ್ರ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಯಾವ ಕಾರಣದಿಂದ ಮಸೂದೆಯನ್ನು ಹಿಂದಕ್ಕೆ ಪಡೆಯಲಾಗುತ್ತಿದೆ ಎಂಬುದನ್ನು ಸ್ಪಷ್ಟಪಡಿಸಬೇಕೆಂದು ಪಟ್ಟುಹಿಡಿದರು.

 

 

ಸಭಾಧ್ಯಕ್ಷರು ಮಾತನಾಡಿ, ಸದನದ ಕಾರ್ಯಕಲಾಪದ ೧೦೭ ನೇ ನಿಯಮದ ಪ್ರಕಾರ ಹಿಂದಕ್ಕೆ ಪಡೆಯಲು ಅವಕಾಶವಿದೆ. ಅದರಂತೆ ಹಿಂದಕ್ಕೆ ಪಡೆಯಬಹುದು ಎಂದು ಹೇಳುತ್ತಿದ್ದಂತೆ ಪಶುಸಂಗೋಪನಾ ಸಚಿವ ರೇವುನಾಯಕ್ ಬೆಳಮಗಿ ಹಿಂದಕ್ಕೆ ಪಡೆಯಲು ಅನುಮತಿ ನೀಡಬೇಕೆಂದು ಕೋರಿದರು.

 

 

ಬಹುಸಂಖ್ಯಾತರ ಭಾವನೆಗಳಿಗೆ ವಿರುದ್ಧವಾಗಿ ಗೋಹತ್ಯಾ ನಿಷೇಧ ಕಾಯ್ದೆಯನ್ನು ಜಾರಿಗೆ ತರಲು ಸರ್ಕಾರ ಮುಂದಾಗಿತ್ತು. ಈ ಮಸೂದೆಗೆ ಶೇ ೯೯ ರಷ್ಟು ಜನರ ವಿರೋಧವಿತ್ತು. ಸರ್ಕಾರ ಸಂಸ್ಸೃತಿಯನ್ನೇ ನಾಶಪಡಿಸಲು ಹೊರಟಿತ್ತು ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.

 

 

ಇದಕ್ಕೆ ಪ್ರತಿಕ್ರಯಿಸಿದ ಕಾನೂನು ಸಚಿವ ಸುರೇಶ್ ಕುಮಾರ್. ಕಾಯ್ದೆಗೆ ಕೆಲವರ ವಿರೋಧ ಇತ್ತು. ಅದೇ ರೀತಿ ಬಹಳಷ್ಟು ಮಂದಿ ಪರವಾಗಿಯೂ ಇದ್ದರು. ಸರ್ಕಾರ ಎಲ್ಲವನ್ನೂ ಮನಗಂಡು ಹಿಂದಕ್ಕೆ ಪಡೆಯುತ್ತಿದೆ ಎಂದು ಸ್ಪಷ್ಟಪಡಿಸಿದರು. ಮಸೂದೆ ಹಿಂದಕ್ಕೆ ಪಡೆಯುವ ಸರ್ಕಾರದ ತೀರ್ಮಾನಕ್ಕೆ ಸದನ ಅನುಮೋದನೆ ನೀಡಿತು.


Share: