ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಟೋಲ್ ವಸೂಲಿ ವಿಚಾರದಲ್ಲಿ ಗೊಂದಲ: ಎಸ್‌ಡಿಪಿಐ ಕಳವಳ

ಟೋಲ್ ವಸೂಲಿ ವಿಚಾರದಲ್ಲಿ ಗೊಂದಲ: ಎಸ್‌ಡಿಪಿಐ ಕಳವಳ

Tue, 11 Jul 2023 01:16:58  Office Staff   SOnews

ಭಟ್ಕಳ: ಹೆದ್ದಾರಿ ಟೋಲ್ ಪ್ಲಾಜಾಗಳಲ್ಲಿ ಟೋಲ್ ವಸೂಲಿ ಮಾಡುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಮಾಂಕಾಳ್ ವೈದ್ಯ ಹಾಗೂ ಜಿಲ್ಲಾಧಿಕಾರಿಗಳು ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಎಸ್ ಡಿಪಿಐ ಉತ್ತರಕನ್ನಡ ಜಿಲ್ಲಾಧ್ಯಕ್ಷ ತೌಫಿಕ್ ಬ್ಯಾರಿ ಆರೋಪಿಸಿದರು.

ಅವರು, ಭಟ್ಕಳದ ನವಾಯತ್ ಕಾಲೋನಿಯಲ್ಲಿರುವ ಪಕ್ಷದ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ರಾ.ಹೆ.66 ಅಪೂರ್ಣ ಕಾಮಗಾರಿಯನ್ನು ಎತ್ತಿ ಹಿಡಿದು ಸಚಿವ ಮಾಂಕಾಳ್ ವೈದ್ಯ ಹಾಗೂ ಜಿಲ್ಲಾಧಿಕಾರಿ ನೀಡಿರುವ ವ್ಯತಿರಿಕ್ತ ಹೇಳಿಕೆಗಳನ್ನು ಟೀಕಿಸಿದರು.

ಉ.ಕ.ಜಿಲ್ಲೆಯ ಎರಡೂ ಹಾಗೂ ಶಿರೂರಿನ ಒಂದು ಟೋಲ್ ಪ್ಲಾಜಾಗಳಲ್ಲಿ  ಟೋಲ್ ಸಂಗ್ರಹವನ್ನು ಸ್ಥಗಿತಗೊಳಿಸುವಂತೆ ಸಚಿವರು ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದ್ದರು, ಆದರೆ ಜಿಲ್ಲಾಧಿಕಾರಿಗಳು ಮಾಧ್ಯಮ ಹೇಳಿಕೆಗಳ ಮೂಲಕ ಹಾಗೆ ಮಾಡುವುದು ತಮ್ಮ  ಅಧಿಕಾರದ ವ್ಯಾಪ್ತಿಯಲ್ಲಿಲ್ಲ ಎಂಬಂತಹ ಹೇಳಿಕೆಗಳು ವರದಿಯಾಗಿದ್ದವು. ವ್ಯತಿರಿಕ್ತ ಹೇಳಿಕೆಗಳು ಸಾರ್ವಜನಿಕರನ್ನು ಕಂಗೆಡಿಸಿದ್ದು, ಇಂತಹ ಗೊಂದಲಮಯ ಹೇಳಿಕೆಗಳ ಮೂಲಕ ಸಾರ್ವಜನಿಕರಿಗೆ ಯಾವ ಸಂದೇಶ ರವಾನೆ ಮಾಡುತ್ತಿದ್ದೀರಿ  ಎಂದು ಬ್ಯಾರಿ ಪ್ರಶ್ನಿಸಿದರು.

13 ವರ್ಷಗಳಿಂದ ಸಮಸ್ಯೆ ಮುಂದುವರಿದಿದ್ದು, ಮಳೆಗಾಲದಲ್ಲಿ ಶಂಶುದ್ದೀನ್ ವೃತ್ತ ಮತ್ತು ರಂಗಿನಕಟ್ಟೆ ಹೊಳೆಗಳಾಗಿ ಮಾರ್ಪಾಡಾಗುತ್ತಿದೆ. ಸಮಸ್ಯೆಗೆ ಹೆದ್ದಾರಿ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಿದರೆ ಸಾಲದು, 13 ವರ್ಷಗಳ ಕಾಲ ಶಾಸಕರಾಗಿ ಆಯ್ಕೆಯಾಗಿರುವ ಎಲ್ಲರೂ ಇದಕ್ಕೆ ಹೊಣೆಗಾರರಾಗಿದ್ದಾರೆ. ಈಗ ಸಚಿವರಾಗಿರುವ ಮಾಂಕಾಳ ವೈದ್ಯರೇ ಅಂದು ಶಾಸಕರಾಗಿದ್ದರು ಎನ್ನುವುದನ್ನು ಮರೆತಂತಿದೆ ಎಂದ ಅವರು, ಸಚಿವ ವೈದ್ಯರೂ ಕೂಡ ಇದಕ್ಕೆ ನೇರ ಹೊಣೆಯಾಗಿದ್ದಾರೆ ಎಂದು ಆರೋಪಿಸಿದರು.

ಭಟ್ಕಳವು ಶರಬಿ ಹೊಳೆ (ಒಳಚರಂಡಿ ವ್ಯವಸ್ಥೆ)ಗೆ ಸಂಬಂಧಿಸಿದಂತೆ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದೆ ಮತ್ತು ಹಲವಾರು ಮನವಿಗಳ ಹೊರತಾಗಿಯೂ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಭಟ್ಕಳದಲ್ಲಿ ಬೀದಿ ನಾಯಿಗಳ ಕಾಟದಿಂದ ಸಾರ್ವಜನಿಕರು ಹಾಗೂ ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿದೆ. ಪುರಸಭೆ ಇದಕ್ಕೆ ಯೋಜನೆಯನ್ನು ರೂಪಿಸಬೇಕು, ಅಲ್ಲದೆ ಯುಜಿಡಿ ಕಾಮಾಗಾರಿ ಅಸರ್ಮಪಕವಾಗಿದ್ದು ಈ ಎಲ್ಲ ಸಮಸ್ಯೆಗಳಿಗೆ  ತಾಲೂಕಾಡಳಿತ, ಪುರಸಭೆ, ಜಿಲ್ಲಾಧಿಕಾರಿ ನೇರ ಹೊಣೆ ಯಾಗುತ್ತಾರೆ ಎಂದು ಬ್ಯಾರಿ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಭಟ್ಕಳ ವಿಧಾನಸಭಾ ಕ್ಷೇತ್ರದ ಎಸ್.ಡಿ.ಪಿ.ಐ. ಅಧ್ಯಕ್ಷ ಸಾಕಿಬ್ ಶೇಖ್, ಹಾಗೂ ಲಾಯಿಖ್ ಉಪಸ್ಥಿತರಿದ್ದರು.


Share: