ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಜೂ.21ರಂದು ವಿಶ್ವ ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಕುರಿತು ಪೂರ್ವಭಾವಿ ಸಭೆ

ಜೂ.21ರಂದು ವಿಶ್ವ ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಕುರಿತು ಪೂರ್ವಭಾವಿ ಸಭೆ

Fri, 17 Jun 2022 06:02:06  Office Staff   SO NEWS

ಭಟ್ಕಳ: ಜಿಲ್ಲೆಯಲ್ಲಿ ಮೂರು ಕಡೆಗಳಲ್ಲಿ ಜೂ.21ರಂದು ವಿಶ್ವ ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದ್ದು ಮುರ್ಡೇಶ್ವದಲ್ಲಿ ಯೋಗ ದಿನಾಚರಣೆ ಆಚರಿಸುವ ಕುರಿತು ಪೂರ್ವಭಾವಿ ಸಭೆ ಮುರ್ಡೇಶ್ವರ ಸಭಾ ಭವನದಲ್ಲಿ ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆಯಿತು. 
ಸಭೆಯಲ್ಲಿ ಮಾತನಾಡಿದ ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್. ಅವರು ಮುರ್ಡೇಶ್ವರದಲ್ಲಿ ನಡೆಯಲಿರುವ ವಿಶ್ವ ಯೋಗ ದಿನಾಚರಣೆ ಅತ್ಯಂತ ಅರ್ಥಪೂರ್ಣವಾಗಿ ಆಚರಿಸುವಂತಾಗಬೇಕು. ಎಲ್ಲಾ ಇಲಾಖೆಯ ಮುಖ್ಯಸ್ಥರು, ಸಂಘ ಸಂಸ್ಥೆಗಳ ಸಹಕಾರವನ್ನು ಕೋರಿದರು.  ಪತಂಜಲಿ ಯೋಗ ಕೇಂದ್ರ, ಲಯನ್ಸ್ ಕ್ಲಬ್, ರೋಟರಿ ಕ್ಲಬ್, ಆರೋಗ್ಯ ಭಾರತಿ ಸೇರಿದಂತೆ ಎಲ್ಲಾ ಸಂಘ ಸಂಸ್ಥೆಗಳು ತಮ್ಮ ಸಹಕಾರವನ್ನು ನೀಡುವ ಭರವಸೆಯನ್ನು ನೀಡಿದ್ದು 500 ರಿಂದ 750 ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದರು. 
ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ. ಲಲಿತಾ ಶೆಟ್ಟಿ ಅವರು ಮಾತನಾಡಿ ಆಜಾದಿಕಾ ಅಮೃತ್ ಮಹೋತ್ಸವದ ವರ್ಷವಾದ್ದರಿಂದ ಜಿಲ್ಲೆಯಲ್ಲಿ ಕಾರವಾರ, ಶಿರಸಿಯ ಸೋಂದಾ, ಮುರ್ಡೇಶ್ವರದಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಮಾಡಲಾಗುತ್ತಿದ್ದು ಆಯುಷ್ ಇಲಾಖೆಯಿಂದ ಜಿಲ್ಲೆಯ ಪುರಾಣ ಪ್ರಸಿದ್ಧ ಮೂರು ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಮಾಹಿತಿ ಬಂದಂತೆ ಪುರಾಣ ಪ್ರಸಿದ್ಧ ಪುಣ್ಯ ಕ್ಷೇತ್ರ ಮುರ್ಡೇಶ್ವರವನ್ನು ಆಯ್ಕೆ ಮಾಡಿಕೊಂಡಿದ್ದೇವೆ ಎಂದರು. ಕಾರವಾರ, ಮುರ್ಡೇಶ್ವರ ಹಾಗೂ ಶಿರಸಿಯ ಪುರಾಣ ಪ್ರಸಿದ್ಧ ಸೋಂದಾದಲ್ಲಿ ಜಿಲ್ಲೆಯಲ್ಲಿ ಮೂರು ಕಡೆಗಳಲ್ಲಿ ಯೋಗ ದಿನಾಚರಣೆಯನ್ನು ಆಯೋಜಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಡಾ. ಸುಮಂತ್ ಬಿ.ಇ., ದೇವಸ್ಥಾನದ ವ್ಯವಸ್ಥಾಪಕ ಮಂಜುನಾಥ ಶೆಟ್ಟಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಾಸಂತಿ ದೈಮನೆ, ಲಯನ್ಸ್ ಕ್ಲಬ್ ವತಿಯಿಂದ ಎಂ.ವಿ.ಹೆಗಡೆ, ರಾಮದಾಶ ಶೇಟ್, ಡಾ. ರಾಘವೇಂದ್ರ ರಾವ್,  ವಿಶ್ವನಾಥ ಕಾಮತ್, ಡಾ. ಕಿಣಿ, ಡಾ. ವಾದಿರಾಜ ಭಟ್ಟ,  ಡಾ. ಕುಮಾರ ಹೆಬಳೆ, ನೇತ್ರಾಣಿ ಅಡ್ವಂಚರ್ಸ್‍ನ ಗಣೇಶ ಹರಿಕಂತ್ರ, ಭಾರತ್ ಸ್ವಾಭಿಮಾನ್ ಸಂಘಟನೆಯ ದುರ್ಗಾದಾಸ ನಾಯ್ಕ, ಆರೋಗ್ಯ ಭಾರತಿಯ ದೇವೇಂದ್ರ,  ಡಾ. ಭಾರತಿ, ಡಾ. ಪ್ರವೀಣ ಜಿ.ಎಸ್., ಪತಂಜಲಿ ಶಿರಾಲಿಯ ಮೋಹನ ದೇವಾಡಿಗ, ಯೋಗ ಗುರು ಗೋವಿಂದ ಎನ್. ಹೆಬಳೆ ಸೇರಿದಂತೆ ಅಧಿಕಾರಿಗಳು, ನಾಗರೀಕರು ಉಪಸ್ಥಿತರಿದ್ದರು.


Share: