ಬೆಂಗಳೂರು, ಜನವರಿ 6:ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ವಿಮೆ ಕಲ್ಪಿಸುವ ಸುವರ್ಣ ಸುರಕ್ಷಾ ಆರೋಗ್ಯ ವಿಮಾ ಯೋಜನೆ ಇನ್ನೂ ಕಾಗದದ ಮೇಲೆಯೇ ಇದ್ದು, ರಾಜ್ಯದ ಜನರಿಗೆ ಇದುವರೆವಿಗೂ ಯೋಜನೆ ಲಾಭ ದೊರೆತಿಲ್ಲ.
ರಾಜ್ಯದ ಉತ್ತರ ಕರ್ನಾಟಕ ಭಾಗದ ಐದು ಜಿಲ್ಲೆಗಳಲ್ಲಿ ಈ ಯೋಜನೆಯನ್ನು ಜಾರಿಗೊಳಿಸಿದ್ದು, ಬರುವ ವರ್ಷದಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಈ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಮುಂದಾಗಿದೆ. ಆದರೆ ಮೂಲಭೂತವಾಗಿ ಈ ಯೋಜನೆಯ ಅನುಷ್ಠಾನಕ್ಕೆ ಹಲವಾರು ಅಡ್ಡಿ ಆತಂಕಗಳು ವ್ಯಕ್ತವಾಗಿವೆ.
ಮುಖ್ಯಮಂತ್ರಿ ಯಡಿಯೂರಪ್ಪ ಈ ಬಾರಿಯ ಬಜೆಟ್ನಲ್ಲಿ ಯೋಜನೆಯನ್ನು ಜಾರಿಗೆ ತಂದಿದ್ದು, ಮತ್ತೊಂದು ಬಜೆಟ್ ಮಂಡಿಸಲು ಇನ್ನು ಕೇವಲ ಎರಡು ತಿಂಗಳು ಮಾತ್ರ ಬಾಕಿ ಉಳಿದಿದೆ. ಇಂತಹ ಪರಿಸ್ಧಿತಿಯಲ್ಲಿ ಪ್ರಾಯೋಗಿಕವಾಗಿಯೇ ಯೋಜನೆ ಜಾರಿಯಾಗದೇ ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸುವುದಾದರೂ ಹೇಗೆ ಎಂಬ ಚಿಂತೆ ಆರೋಗ್ಯ ಇಲಾಖೆಯನ್ನು ಕಾಡುತ್ತಿದೆ.
ಯೋಜನೆಯಡಿ ಯಾವ ಯಾವ ರೋಗಗಳಿಗೆ ಚಿಕಿತ್ಸೆ ನೀಡಬೇಕು. ಶಸ಼ಚಿಕಿತ್ಸೆಯಾದರೆ ಯಾವ ಪ್ರಯಾಣದಲ್ಲಿ ಹಣ ನಿಗದಿ ಮಾಡಬೇಕು. ಹೃದಯ ಶಸ಼ಚಿಕಿತ್ಸೆಗೆ, ಕಿಡ್ನಿ ತೊಂದರೆಯಾದರೆ ಇಂತಿಷ್ಟು ಎಂಬ ಯಾವುದೇ ಮಾನದಂಡವನ್ನು ಆರೋಗ್ಯ ಇಲಾಖೆ ಇದುವರೆವಿಗೂ ನಿಗದಿಪಡಿಸಿಲ್ಲ.
ಸುವರ್ಣ ಸುರಕ್ಷಾ ಆರೋಗ್ಯ ವಿಮಾ ಯೋಜನೆಯಡಿ ಚಿಕಿತ್ಸೆ ನೀಡಲು ಆಸ್ಪತ್ರೆಗಳೇ ಸೇರ್ಪಡೆಯಾಗಿಲ್ಲ. ಯಾವ ಯಾವ ಆಸ್ಪತ್ರೆಗಳನ್ನು ಸೇರ್ಪಡೆಗೊಳಿಸಬೇಕು ಎಂಬ ಯಾವುದೇ ಸಿದ್ಧತೆಗಳು ಕೂಡ ನಡೆದಿಲ್ಲ. ಬಜೆಟ್ನಲ್ಲಿ ಘೋಷಣೆಯಾದ ಸ್ಧಿತಿಯಲ್ಲಿಯೇ ಈ ಯೋಜನೆ ಇದೆ.
ಇಂತಹ ಪ್ರಮುಖ ಯೋಜನೆಯನ್ನು ತ್ವರಿತಗೊಳಿಸುವ ನಿಟ್ಟಿನಲ್ಲಿ ಈ ತಿಂಗಳ ೨೯ ರಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಇಲಾಖಾ ಅಧಿಕಾರಿಗಳ ಸಭೆ ಕರೆದಿದ್ದಾರೆ. ಅಲ್ಲಿ ಯೋಜನೆ ಸ್ಪಷ್ಟ ಸ್ವರೂಪ ಪಡೆಯಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಇದಲ್ಲದೇ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲು ೩೦೦ ಕೋಟಿ ರೂ ಹೆಚ್ಚುವರಿ ನೆರವು ನೀಡಬೇಕೆಂದು ಆರೋಗ್ಯ ಇಲಾಖೆಯಿಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪ್ರಸ್ತಾವನೆಯೂ ಕೂಡ ಸಲ್ಲಿಕೆಯಾಗಿದೆ.
ಹೆಚ್ಚುವರಿ ನೆರವು ನೀಡಿದರೆ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಎಲ್ಲರಿಗೂ ಈ ವಿಮಾ ಯೋಜನೆಯಡಿ ಸೂಕ್ತ ಚಿಕಿತ್ಸೆ ದೊರೆಯಲಿದೆ. ಅದಕ್ಕಾಗಿ ಆರೋಗ್ಯ ಇಲಾಖೆ ಹಣಕಾಸು ವರ್ಷದ ಕೊನೆಯಲ್ಲಿ ತರಾತುರಿಯಲ್ಲಿ ಯೋಜನೆ ಜಾರಿಗೆ ಸಿದ್ಧತೆ ನಡೆಸಿದೆ.