ಭಟ್ಕಳ: ತಾಲೂಕಿನ ಮೂಡಭಟ್ಕಳ ಡಾ. ಚಿತ್ತರಂಜನ್ ಸರ್ಕಲ್ನಲ್ಲಿ ಅಂಡರ್ಪಾಸ್ ನಿರ್ಮಾಣ ಮಾಡಬೇಕೆನ್ನುವ ಜನರ ಬೇಡಿಕೆಗೆ ಮನ್ನಣೆ ನೀಡದೇ ರಾಷ್ಟಿಯ ಹೆದ್ದಾರಿಯನ್ನು ಯಥಾಸ್ಥಿತಿಯಲ್ಲಿ ಅಗಲೀಕರಣ ಮಾಡಿಕೊಂಡು ಹೋಗಲು ಐ.ಆರ್.ಬಿ. ಕಂಪೆನಿ ಮುಂದಾಗಿದ್ದನ್ನು ಶುಕ್ರವಾರ ತಡೆದು ಪ್ರತಿಭಟನೆ ಮಾಡಿದ್ದ ನಾಗರೀಕರು ಇಂದು ಕೋಟಾ ಶ್ರೀನಿವಾಸ ಪೂಜಾರಿ ಅವರು ಭಟ್ಕಳಕ್ಕೆ ಬರುವ ಸಂದರ್ಭದಲ್ಲಿ ನಿಲ್ಲಿಸಿ ಮಾತನಾಡಿ ಸಮಸ್ಯೆಗೆ ಶಾಶ್ವತ ಪರಿಹಾರ ವದಗಿಸಿಕೊಡುವಂತೆ ಆಗ್ರಹಿಸಿದ ಪ್ರಸಂಗ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನಾಗರೀಕರು ಕಳೆದ ೯ ವರ್ಷಗಳಿಂದ ನಾವು ಇಲ್ಲಿ ಅಂಡರ್ ಪಾಸ್ ಬೇಕು ಎನ್ನುವ ಬೇಡಿಕೆಯನ್ನು ಜಿಲ್ಲಾಡಳಿತ, ಐ.ಆರ್.ಬಿ. ಮತ್ತು ರಾಷ್ಟಿಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸುತ್ತಲೇ ಬಂದಿದ್ದೇವೆ. ಆದರೂ ನಮ್ಮ ಬೇಡಿಕೆಗೆ ಮನ್ನಣೆಯನ್ನು ಕೊಡದೇ ರಾಷ್ಟಿಯ ಹೆದ್ದಾರಿಯನ್ನು ಈಗಿದ್ದ ಹಾಗೆಯೇ ಅಗಲೀಕರಣ ಮಾಡಿಕೊಂಡು ಹೋಗಲು ಐ.ಆರ್.ಬಿ. ಅಧಿಕಾರಿಗಳು ತಯಾರಿ ನಡೆಸಿದ್ದಾರೆ.
ಇದ್ದ ಸ್ಥಿತಿಯಲ್ಲಿಯೇ ಹೆದ್ದಾರಿ ಅಗಲೀಕರಣ ಮಾಡಿಕೊಂಡು ಹೋದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಅಂಡರ್ ಪಾಸ್ ತೀರಾ ಅಗತ್ಯ ಎಂದು ಮನವರಿಕೆ ಮಾಡಿಕೊಟ್ಟರು. ತಕ್ಷಣ ಜನರ ಬೇಡಿಕೆಯಂತೆ ಜಿಲ್ಲಾಧಿಕಾರಿಗಳಿಗೆ ದೂರವಾಣಿ ಮೂಲಕ ಮಾತನಾಡಿದ ಕೋಟಾ ಶ್ರೀನಿವಾಸ ಪೂಜಾರಿ ಅವರು ಭಟ್ಕಳದಲ್ಲಿ ಈ ಭಾಗದ ನಾಗರೀಕರ ಸಭೆಯನ್ನು ನಡೆಸಿ ಅವರ ಬೇಡಿಕೆಯಂತೆ ಅಂಡರ್ಪಾಸ್ ಮಾಡಿಕೊಡುವ ಕುರಿತು ವಿಚಾರ ಮಾಡಿ ಸಾಧ್ಯವಾದಲ್ಲಿ ಆ ಕುರಿತು ಬರವಣಿಗೆಯಲ್ಲಿ ನೀಡಿ ಕೆಲಸವನ್ನು ಮುಂದುವರಿಸಲು ಐ.ಆರ್.ಬಿ.ಯವರಿಗೆ ಅನುವು ಮಾಡಿಕೊಡುವಂತೆಯೂ ಸೂಚಿಸಿದರೆನ್ನಲಾಗಿದೆ.
ಈ ಸಂದರ್ಭದಲ್ಲಿ ಶಾಸಕ ಸುನಿಲ್ ನಾಯ್ಕ,ಸಹಾಯಕ ಆಯುಕ್ತ ಮಮತಾದೇವಿ ಜಿ.ಎಸ್.ಮಾಜಿ ಶಾಸಕ ಜೆ.ಡಿ.ನಾಯ್ಕ ಉಪಸ್ಥಿತರಿದ್ದರು. ನೂರಾರು ಸಂಖ್ಯೆಯಲ್ಲಿದ್ದ ನಾಗರೀಕರು ನಾಳೆ ಸಭೆಯ ನಂತರ ಮುಂದಿನ ತೀರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಿದರು.