ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಚತುಷ್ಪಥ ರಾ.ಹೆದ್ದಾರಿ ಅವ್ಯವಸ್ಥೆ. ಜಿಲ್ಲಾಧಿಕಾರಿ ಅಸಹಾಯಕತೆ

ಚತುಷ್ಪಥ ರಾ.ಹೆದ್ದಾರಿ ಅವ್ಯವಸ್ಥೆ. ಜಿಲ್ಲಾಧಿಕಾರಿ ಅಸಹಾಯಕತೆ

Mon, 25 Sep 2023 04:43:35  Office Staff   SO News

ಕಾರವಾರ: ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಕಷ್ಟು ಅಪಘಾತಗಳಾಗುತ್ತಿವೆ. ಅವ್ಯವಸ್ಥೆ ಇದ್ದರೂ ಅದನ್ನ ಸರಿಪಡಿಸಲು  ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗುತ್ತಿಲ್ಲ.

 ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಗುತ್ತಿಗೆ ಕಂಪನಿ ಪಡೆದ ಐಆರ್‌ಬಿ ಕಡೆಯಿಂದಲೂ ಯಾವುದೇ ನಿರೀಕ್ಷಿತ ಸ್ಪಂದನೆ ಸಿಗುತ್ತಿಲ್ಲ. ಹೀಗಾಗಿ  ಹೆದ್ದಾರಿ ಕಾಮಗಾರಿ ಕುಂಟುತ್ತಾ ಸಾಗುವಂತಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾಧಿ ಕಾರಿ ಗಂಗೂಬಾಯಿ ಮಾನಕ‌ರ ಅಸಹಾಯಕತೆ  ತೋಡಿಕೊಂಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾ.ಹೆ.66ರ ಪ್ರಗತಿ ಹಾಗೂ ಸಮಸ್ಯೆಗಳ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ವರದಿ ಕೇಳಿದ್ದೇನೆ. ಈವರೆಗೆ ಕಾರವಾರದ ಸುರಂಗಕ್ಕೆ ಫಿಟ್ಟೆಸ್ ಸರ್ಟಿಫಿಕೇಟ್ ನೀಡದಿರುವುದರಿಂದ ಸಂಚಾರಕ್ಕೆ ಅವಕಾಶ ನೀಡಿಲ್ಲ. ಗುತ್ತಿಗೆ ಕಂಪನಿ ಐಆರ್‌ಬಿ ಸರಿಯಾಗಿ ರಸ್ತೆ ನಿರ್ಮಾಣ ಮಾಡಿಲ್ಲ. ರಸ್ತೆಗಳು ಅಪೂರ್ಣವಾಗಿದೆ. ಸಂಪರ್ಕ ರಸ್ತೆ, ಸೇತುವೆಗಳನ್ನ ಮಾಡಿಲ್ಲ, ಚರಂಡಿಗಳ ನಿರ್ಮಾಣವಾಗಿಲ್ಲ ಎಂಬ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳಿವೆ. ರಸ್ತೆ ಗುಣಮಟ್ಟದ ಬಗ್ಗೆಯೂ ದೂರುಗಳಿವೆ. 2014ರಲ್ಲಿ ಪ್ರಾರಂಭವಾದ ಹೆದ್ದಾರಿ ಕಾಮಗಾರಿ 9 ವರ್ಷ ಕಳೆಯುತ್ತಿದ್ದರೂ ಪೂರ್ಣಗೊಳಿದಿರುವುದು ಬೇಸರದ ಸಂಗತಿ ಎಂದು ಹೇಳಿದ್ದಾರೆ.

ಎನ್‌ಎಚ್‌ಎಐ ಹಾಗೂ ಐಆರ್‌ ಬಿ ಹೆದ್ದಾರಿ ಇಲಾಖೆ ರಸ್ತೆ ಸುರಕ್ಷತೆ ಕ್ರಮಗಳನ್ನ ಕೂಡ ಕೈಗೊಂಡಿಲ್ಲ. ಜಿಲ್ಲಾಡಳಿತಕ್ಕೆ ಹಾಗೂ ಜನರಿಗೆ ಸಮಸ್ಯೆ ಉಂಟಾಗುತ್ತಿದೆ. ಯಾವುದೇ ಇಲಾಖೆಯು ಜಿಲ್ಲಾಡಳಿತಕ್ಕೆ ಸಂಬಂಧಪಡುತ್ತದೆ ಅಥವಾ ಸಣ್ಣಪುಟ್ಟ ನಿಯಂತ್ರಣದ ಅಧಿಕಾರ ಜಿಲ್ಲಾಧಿಕಾರಿಗೆ ಇರುತ್ತದೆಂದು ಸರ್ಕಾರ ಹೇಳುತ್ತದೆ. ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಮ್ಮ ನಿಯಂತ್ರಣಕ್ಕೆ ಬರುತ್ತಿಲ್ಲ. ಅವರ ಅಧಿಕಾರಿಗಳು ಜಿಲ್ಲಾಡಳಿತದ ಸಭೆಗೆ ಬರುತ್ತಿಲ್ಲ. ಈ ಬಗ್ಗೆ ಮೇಲಾಧಿಕಾರಿಗಳಿಗೂ ತಿಳಿಸಿದ್ದೇವೆ. ನಮಗೆ ಐಆರ್‌ಬಿ ಕಡೆಯಿಂದಲೂ ಸ್ಪಂದನೆ ಇಲ್ಲ. ಅವರ ಮೇಲೆ ಕ್ರಮ ಕೈಗೊಳ್ಳಲು ಆಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಹೆದ್ದಾರಿಯ ಶೇ 75ರಷ್ಟು ಕಾಮಗಾರಿ ಪೂರ್ಣಗೊಂಡರೆ ಮಾತ್ರ ಟೋಲ್ ಸಂಗ್ರಹಿಸಲು ಮತ್ತು ದರ ಏರಿಕೆಗೆ ಅವಕಾಶ ಇರುತ್ತದೆ. ಆದರೆ ಅಲ್ಲಲ್ಲಿ ರಸ್ತೆಗಳನ್ನ ಮಾಡಿ, ಕಾರವಾರದ ಸುರಂಗವನ್ನೂ ತೋರಿಸಿ ಕಾಮಗಾರಿಯಲ್ಲಿ ಪ್ರಗತಿಯಾಗಿದೆ ಎಂದು ಅವರು ಟೋಲ್ ಸಂಗ್ರಹಿಸುತ್ತಿದ್ದಾರೆ. ರಸ್ತೆಯ ಉದ್ದ ಹಾಗೂ ಗುಣಮಟ್ಟಕ್ಕೆ ಹೋಲಿಸಿದರೆ ಐಆರ್‌ಬಿ ಪಡೆಯುತ್ತಿರುವ ಟೋಲ್ ದರ ಹೆಚ್ಚಿದೆ. ಅವರು ಕಾನೂನಾತ್ಮಕವಾಗಿ ದಾಖಲೆಗಳನ್ನೆಲ್ಲ ತೋರಿಸಿ ಹೆದ್ದಾರಿ ಕಾಮಗಾರಿಗೆ ಅನುಮೋದನೆ ಪಡೆದುಕಂಡಿದ್ದಾರೆ. ಆದರೆ ವಾಸ್ತವವಾಗಿ ಅಗ್ರಿಮೆಂಟ್‌ನಂತೆ ಅವರು ಇಲ್ಲಿ ನಡೆದುಕೊಳ್ಳುತ್ತಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿದರು.


Share: