ಕಲಬುರಗಿ :ಭಾರತವು ಪ್ರಸ್ತುತ ಅಂತರಾಷ್ಟ್ರೀಯ ಮಟ್ಟದ ಆರ್ಥಿಕ ರ್ಯಾಂಕಿಂಗ್ನಲ್ಲಿ ಐದನೇ ಸ್ಥಾನದಲ್ಲಿದ್ದು, ಮೂರನೇ ಸ್ಥಾನಕ್ಕೆ ಏರಲು ಪ್ರಯತ್ನಿಸುತ್ತಿದೆ. ಇದಕ್ಕಾಗಿ ದೇಶದ ಪ್ರತಿಯೊಬ್ಬ ಪ್ರಜೆ ತಮ್ಮದೆಯಾದ ಕೊಡುಗೆ ನೀಡಬೇಕು ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಾಧಿಪತಿಗಳಾಗಿರುವ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.
ಗುಲಬರ್ಗಾ ವಿ.ವಿ.ಯ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ನಡೆದ ವಿಶ್ವವಿದ್ಯಾಲಯದ 41ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಸಾಧಕರಿಗೆ ಗೌರವ ಡಾಕ್ಟರೇಟ್ ಮತ್ತು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದ ರಾಜ್ಯಪಾಲರು ಭಾರತವೂ ಸ್ವಾತಂತ್ರ್ಯದ ಅಮೃತ ಮಹೋತ್ಸವ ಇತ್ತೀಚೆಗೆ ಆಚರಿಸಿಕೊಂಡಿದೆ. ಕಳೆದ 75 ವರ್ಷದ ಅವಧಿಯಲ್ಲಿ ಅನೇಕ ಕ್ಷೇತ್ರದಲ್ಲಿ ಭಾರತ ಅನನ್ಯ ಪ್ರಗತಿ ಕಂಡಿದೆ. ಮುಂದಿನ 25 ವರ್ಷ ನಮಗೆಲ್ಲ ಕರ್ತವ್ಯದ ಕಾಲವಾಗಿದ್ದು, ಸ್ವಾತಂತ್ರ್ಯದ ಶತಮಾನೋತ್ಸವ ಸಂದರ್ಭದಲ್ಲಿ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿಸಲು ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಕರೆ ನೀಡಿದರು.
ನಮ್ಮ ಪೂರ್ವಜರು ಭಾರತವನ್ನು “ಸೋನೇಕಿ ಚಿಡಿಯಾ” ಎಂದು ಕರೆದಿದ್ದನ್ನ ಸ್ಮರಿಸಿದ ಅವರು, ವಿಶ್ವ ಗುರುವಿನತ್ತ ಭಾರತ ಹೆಜ್ಜೆ ಇಟ್ಟಿದೆ. ಇಂದಿನ ವಿದ್ಯಾರ್ಥಿಗಳೇ ಮುಂದಿನ ಭವಿಷ್ಯವಾಗಿದ್ದಾರೆ. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಮಾನವ ಅಭಿವೃದ್ಧಿ ಹೊಂದಬೇಕಿದೆ. ನಮ್ಮ ದೇಶ ಸಭ್ಯ, ಸಂಸ್ಕøತಿಗೆ ಹೆಸರುವಾಸಿ. ಇಡೀ ವಿಶ್ವವನ್ನು "ವಸುದೈವ ಕುಟುಂಬ" ಪರಿಕಲ್ಪನೆಯಲ್ಲಿ ನೋಡುತ್ತದೆ. ಭಾರತ ಸೇರಿದಂತೆ ವಿಶ್ವ ಕಲ್ಯಾಣವೇ ನಮ್ಮ ಆಶಯವಾಗಿದೆ ಎಂದರು.
ಪರಿಸರ ಸಂರಕ್ಷಿಸಿ:
ಇತ್ತೀಚೆಗೆ ಪರಿಸರ ಮಾಲಿನ್ಯ ಹೆಚ್ಚಾಗಿ ಕಾಣುತ್ತಿದೆ. ಇದನ್ನು ತಡೆಗಟ್ಟಲು ಪರಿಸರ ಸಂರಕ್ಷಣೆಗೆ ಎಲ್ಲರು ಕೈಜೋಡಿಸಬೇಕು. ಜೂನ್ 21ಕ್ಕೆ ವಿಶ್ವ ಯೋಗ ದಿನ ಆಚರಿಸಲಾಗುತ್ತಿದ್ದು, ಇದರಲ್ಲಿ ಭಾಗವಹಿಸುವ ಮೂಲಕ ನಿಮ್ಮ ಆರೋಗ್ಯದ ಜೊತೆಗೆ ಪರಿವಾರ, ಸಮಾಜದ ಸ್ವಾಸ್ಥ್ಯ ಮತ್ತು ಆರೋಗ್ಯವಂತ ದೇಶ ನಿರ್ಮಿಸುವ ಅಗತ್ಯತೆ ಇದೆ ಎಂದು ಪ್ರತಿಪಾದಿಸಿದರು.
ಮೂವರಿಗೆ ಗೌರವ ಡಾಕ್ಟರೇಟ್ ಪ್ರದಾನ:
ಶಿಲ್ಪಕಲಾ ಕ್ಷೇತ್ರದಲ್ಲಿ ಗಣನೀಯ ಸೇವೆಗೆ ಕಲಬುರಗಿ ಜಿಲ್ಲೆಯ ನಾಡೋಜ ಮಾನಯ್ಯ ಬಡಿಗೇರ್, ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರದಲ್ಲಿನ ಸಾಧನೆಗೆ ತಾತ್ಯಾರಾವ ಕಾಂಬ್ಳೆ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಸಾಧನೆಗೆ ಬೆಂಗಳೂರು ಮೂಲದ ಎನ್.ಎಸ್.ಶ್ರೀನಾಥ ಅವರಿಗೆ ರಾಜ್ಯಪಾಲರು ಮತ್ತು ಮುಖ್ಯ ಅತಿಥಿಗಳು ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.

ಇದೇ ಸಂದರ್ಭದಲ್ಲಿ 26,590 ಸ್ನಾತಕ ಪದವಿ, 4,171 ಸ್ನಾತಕೋತ್ತರ ಪದವಿ ಸೇರಿ 30,761 ಅಭ್ಯರ್ಥಿಗಳಿಗೆ ಪದವಿ ಘೋಷಿಸಲಾಯಿತು. 129 ಅಭ್ಯರ್ಥಿಗಳಿಗೆ ಪಿ.ಎಚ್.ಡಿ. ಹಾಗೂ 72 ವಿದ್ಯಾರ್ಥಿಗಳಿಗೆ 165 ಚಿನ್ನದ ಪದಕ ಪ್ರದಾನ ಮಾಡಿದರೆ 23 ವಿದ್ಯಾರ್ಥಿಗಳಿಗೆ 15 ಚಿನ್ನದ ಪದಕವನ್ನು ನಗದು ಬಹುಮಾನಕ್ಕೆ ಪರಿವರ್ತಿಸಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ, ಗುಲಬರ್ಗಾ ವಿ.ವಿ ಕುಲಪತಿ ಪೆÇ್ರ. ದಯಾನಂದ ಅಗಸರ್, ಕುಲಸಚಿವ ಡಾ.ಬಿ.ಶರಣಪ್ಪ, ಮೌಲ್ಯಮಾಪನ ಕುಲಸಚಿವ ಪೆÇ್ರ.ಜ್ಯೋತಿ ಧಮ್ಮಪ್ರಕಾಶ ಸೇರಿದಂತೆ ವಿವಿಧ ಅಕಾಡೆಮಿಕ್, ಸಿಂಡಿಕೇಟ್ ಸದಸ್ಯರು, ವಿವಿಧ ನಿಕಾಯದ ಡೀನ್, ಅಧಿಕಾರಿಗಳು, ಬೋಧಕ-ಬೋಧಕೇತರ ವೃಂದ, ಪದವಿ ಪಡೆದ ವಿದ್ಯಾರ್ಥಿಗಳು ಅವರ ಕುಟುಂಬ ವರ್ಗದವರು ಭಾಗವಹಿಸಿದ್ದರು.