ಹೊಸದಿಲ್ಲಿ: ಬ್ರಿಟಿಷ್ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಶನ್ (ಬಿಬಿಸಿ)ನ ಸಾಕ್ಷ್ಯಚಿತ್ರವು ಭಾರತದ ಘನತೆ, ಅದರ ನ್ಯಾಯಾಂಗ ಮತ್ತು ಪ್ರಧಾನಿ ನರೇಂದ್ರ ಮೋದಿಯ ವರ್ಚಸ್ಸಿಗೆ ಹಾನಿ ಮಾಡಿದೆ ಎಂದು ಆರೋಪಿಸಿ ಸಲ್ಲಿಸಲಾಗಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿ ದಿಲ್ಲಿ ಹೈಕೋರ್ಟ್ ಸೋಮವಾರ ಬಿಬಿಸಿಗೆ ಸಮನ್ಸ್ ನೀಡಿದೆ.
ಗುಜರಾತ್ನ ಸರಕಾರೇತರ ಸಂಘಟನೆ 'ಜಸ್ಟಿಸ್ ಫಾರ್ ಟ್ರಯಲ್' ಸಲ್ಲಿಸಿದ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಸಚಿನ್ ದತ್ತ, ಆರೋಪಗಳಿಗೆ ಉತ್ತರಿಸುವಂತೆ ಬಿಬಿಸಿ (ಯುಕೆ) ಮತ್ತು ಬಿಬಿಸಿ (ಭಾರತ)ಕ್ಕೆ ನೋಟಿಸ್ ಜಾರಿಗೊಳಿಸಿದರು.
ಬಿಬಿಸಿ (ಭಾರತ)ಯು ಸ್ಥಳೀಯ ಕಾರ್ಯನಿರ್ವಹಣಾ ಕಚೇರಿಯಾಗಿದೆ ಮತ್ತು ಬಿಬಿಸಿ (ಯುಕೆ)ಯು ಸಾಕ್ಷ್ಯಚಿತ್ರವನ್ನು ಬಿಡುಗಡೆಗೊಳಿಸಿದೆ ಎಂದು ಮಾನನಷ್ಟ ಮೊಕದ್ದಮೆಯಲ್ಲಿ ಹೇಳಲಾಗಿದೆ. ಬಿಬಿಸಿಯು ಇಂಡಿಯಾ: ದಿ ಮೋದಿ ಕ್ವೆಶ್ಚನ್” ಎಂಬ ಸಾಕ್ಷ್ಯಚಿತ್ರವನ್ನು ಎರಡು ಭಾಗಗಳಲ್ಲಿ ಬಿಡುಗಡೆಗೊಳಿಸಿದೆ.
ದೂರುದಾರ ಎನ್ಜಿಒ ಪರವಾಗಿ ಹಾಜರಾದ ಹಿರಿಯ ವಕೀಲ ಹರೀಶ್ ಸಾಳ್ವೆ, ಬಿಬಿಸಿಯ ಸಾಕ್ಷ್ಯಚಿತ್ರವು ಭಾರತ ಮತ್ತು ನ್ಯಾಯಾಂಗ ಸೇರಿದಂತೆ ಇಡೀ ವ್ಯವಸ್ಥೆಯನ್ನು ಅವಮಾನಿಸಿದೆ' ಎಂದು ವಾದಿಸಿದರು.
ಸಾಕ್ಷ್ಯಚಿತ್ರವು ಪ್ರಧಾನಿ ವಿರುದ್ಧ ನಿಂದನಾತ್ಮಕ ಹೇಳಿಕೆಗಳನ್ನು ನೀಡಿದೆ ಎಂಬುದಾಗಿಯೂ ಅವರು ವಾದಿಸಿದರು.
ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಾಲಯವು ಸೆಪ್ಟೆಂಬರ್ 15ಕ್ಕೆ ನಿಗದಿಪಡಿಸಿತು.