ಬೆಂಗಳೂರು, ನ.12:ತಮ್ಮ ಬಣದ ಇಬ್ಬರಿಗೆ ಸಂಪುಟದಲ್ಲಿ ಸ್ಥಾನ ನೀಡಲೇಬೇಕೆಂಬ ರೆಡ್ಡಿ ಬಣದ ಪಟ್ಟು ಹಾಗೂ ತಮ್ಮೊಂದಿಗೆ ಇನ್ನೂ ಇಬ್ಬರಿಗೆ ಸ್ಥಾನ ನೀಡಲೇಬೇಕೆಂಬ ಜಗದೀಶ್ ಶೆಟ್ಟರ್ ಅವರ ಷರತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ.
ಹೈಕಮಾಂಡ್ ಸೂತ್ರದಂತೆ ನಾಲ್ಕು ಬೇಡಿಕೆಗಳನ್ನು ಸುಸೂತ್ರವಾಗಿ ಈಡೇರಿಸಿದ ಯಡಿಯೂರಪ್ಪ ಅವರಿಗೆ ಈಗ ನಿಜಕ್ಕೂ ಸತ್ವ ಪರೀಕ್ಷೆ.
ಸಚಿವ ಸಂಪುಟಕ್ಕೆ ತಾವೊಬ್ಬರೇ ಸೇರ್ಪಡೆಯಾಗಲು ಬಿಲ್ಕುಲ್ ಒಪ್ಪುವುದಿಲ್ಲ ಎಂಬುದು ಜಗದೀಶ್ ಶೆಟ್ಟರ್ ಅವರ ಪಟ್ಟು. ಅದಕ್ಕೆ ಮುಖ್ಯಕಾರಣ ತಾವೊಬ್ಬರೇ ಸಂಪುಟ ಸೇರಿದರೆ, ರಾಜ್ಯದಲ್ಲಿ ಇಷ್ಟು ದಿನ ನಡೆದ ರಾಜಕೀಯ ಪ್ರಹಸನಗಳಿಗೆ ತಾವೇ ಕಾರಣ ಎಂಬಂತೆ ಬಿಂಬಿತವಾಗುವುದು. ಆ ಆರೋಪ ಹೊರಲು ಶೆಟ್ಟರ್ ಸಿದ್ದರಿಲ್ಲ.
ಸಿ.ಟಿ. ರವಿ ಹಾಗೂ ಎಸ್.ಕೆ. ಬೆಳ್ಳುಬ್ಬಿ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಬೇಕೆಂಬ ಬೇಡಿಕೆಯನ್ನು ಶೆಟ್ಟರ್ ಮುಂದಿಟ್ಟಿದ್ದಾರೆ. ಹಾಗೆಯೇ ರೆಡ್ಡಿಗಳ ಆಪ್ತ, ಮೈಸೂರಿನ ರಾಮದಾಸ್ ಹಾಗೂ ಹೊನ್ನಾಳಿಯ ಎಂ.ಪಿ. ರೇಣುಕಾಚಾರ್ಯ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕೆಂಬುದು ರೆಡ್ಡಿಗಳ ಬೇಡಿಕೆ.
ಆರಂಭದಿಂದಲೂ ಮೈಸೂರು ಜಿಲ್ಲೆ ಉಸ್ತುವಾರಿ ಹೊತ್ತಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ವಿರೋಧಿಸಿಕೊಂಡು ಬಂದಿದ್ದ ರಾಮದಾಸ್ ಭಿನ್ನಮತೀಯ ಚಟುವಟಿಕೆ ಪ್ರಾರಂಭವಾಗುವ ಮುನ್ನವೇ ರೆಡ್ಡಿಗಳ ಆಪ್ತರಾಗಿದ್ದರು. ಹೀಗಾಗಿ ರಾಮದಾಸ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂಬ ಪಟ್ಟು ರೆಡ್ಡಿಗಳದು ಎನ್ನಲಾಗಿದೆ.
ಈ ಕಾರಣದಿಂದಾಗಿ ಭಿನ್ನಮತದಿಂದ ನಲುಗಿ ಹೋಗಿದ್ದ ರಾಜ್ಯ ಬಿಜೆಪಿಯಲ್ಲಿ‘ದೆಹಲಿ ಒಪ್ಪಂದ’ದ ಬಳಿಕ ಎಲ್ಲವೂ ಸರಿ ಹೋಯಿತು ಎನ್ನುತ್ತಿದ್ದಂತೆಯೇ ಸಚಿವ ಸಂಪುಟ ಪುನಾರಚನೆ ವಿಚಾರದಲ್ಲಿ ಮತ್ತೊಂದು ಕಗ್ಗಂಟು ಎದುರಾಗಿದೆ.
ಸಂಪುಟದಲ್ಲಿ ಬದಲಾವಣೆಯಿಲ್ಲ: ಈ ಕಗ್ಗಂಟು ಪರಿಹರಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಶೆಟ್ಟರ್, ಜನಾರ್ದನ ರೆಡ್ಡಿ ಅವರು ಗುರುವಾರ ಸರಣಿ ಮಾತುಕತೆ ನಡೆಸಿದರು. ಅಂತಿಮವಾಗಿ ಸಂಜೆ ಗುರುವಾರ ರಾತ್ರಿ ಮುಖ್ಯಮಂತ್ರಿಗಳ ನಿವಾಸದಲ್ಲಿ ಸಭೆ ಸೇರಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಪಕ್ಷದ ರಾಜ್ಯಾಧ್ಯಕ್ಷ ಸದಾನಂದ ಗೌಡ ಅವರು ಸಚಿವ ಸಂಪುಟ ವಿಸ್ತರಣೆ ಮತ್ತು ಸೇರ್ಪಡೆ ಕುರಿತಂತೆ ಸುಧೀರ್ಘವಾಗಿ ಚರ್ಚಿಸಿದರು. ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸದಾನಂದಗೌಡ ಸಚಿವ ಸಂಪುಟದಲ್ಲಿ ಯಾವುದೇ ಬದಲಾವಣೆ ಇಲ್ಲ, ಶೆಟ್ಟರ್ ಸಚಿವ ಸಂಪುಟ ಸೇರುತ್ತಾರೆ ಎಂದು ತಿಳಿಸಿದರು.
ಬೊಮ್ಮಾಯಿ ಕೆಳಗಿಳಿಯಲಿ- ರೆಡ್ಡಿ-ಶೆಟ್ಟರ್ ಪಟ್ಟು: ತಮ್ಮ ಬೆಂಬಲಿಗರಿಗೆ ಸ್ಥಾನ ನೀಡಬೇಕು ಎಂಬುದರ ಜತೆಗೆ, ಉತ್ತರ ಕರ್ನಾಟಕದ ಕನಿಷ್ಠ ಇಬ್ಬರು ಸಚಿವರನ್ನು ಕೈ ಬಿಡಬೇಕು ಎಂಬ ಬಗ್ಗೆಯೂ ರೆಡ್ಡಿ ಮತ್ತು ಶೆಟ್ಟರ್ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.
ವಿಶೇಷವಾಗಿ ಬಸವರಾಜ ಬೊಮ್ಮಯಿ ಅವರನ್ನು ಕಡ್ಡಾಯವಾಗಿ ಸಂಪುಟದಿಂದ ಕೈ ಬಿಡಬೇಕು ಎಂಬ ಷರತ್ತು ವಿಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದಲ್ಲದೆ, ನಿರಾಣಿ, ಲಕ್ಷ್ಮಣ ಸವದಿ ಅವರ ಹೆಸರೂ ಕೈ ಬಿಡಬೇಕೆಂಬ ರೆಡ್ಡಿ-ಶೆಟ್ಟರ್ ಅವರ ಪಟ್ಟಿಯಲ್ಲಿವೆ. ಹಾಲಿ ಸಚಿವ ಸಂಪುಟದಲ್ಲಿ ಶೋಭಾ ಕರಂದ್ಲಾಜೆ ಮತ್ತು ವಿ.ಸೋಮಣ್ಣ ಅವರ ರಾಜೀನಾಮೆಯಿಂದ ಸಂಪುಟದ ಎರಡು ಸ್ಥಾನಗಳು ಖಾಲಿಯಾಗಿವೆ. ಇದರ ಜತೆಗೆ ಇನ್ನೊಂದೆರಡು ಬಲಿ ಪಡೆದು ತಾವು ಸೂಚಿಸಿದವರಿಗೆ ನೀಡಬೇಕೆಂಬುದು ರೆಡ್ಡಿ- ಶೆಟ್ಟರ್ ಅವರ ಪಟ್ಟು.
----
೧೬ರಂದು ಜಗದೀಶ್ ಶೆಟ್ಟರ್ ಪದತ್ಯಾಗ, ೧೭ರಂದು ಸಂಪುಟಕ್ಕೆ
ಬೆಂಗಳೂರು: ಜಗದೀಶ್ ಶೆಟ್ಟರ್ ನ.೧೬ಕ್ಕೆ ವಿಧಾನಸಭಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದು, ೧೭ರಂದು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಗುರುವಾರ ಬೆಳಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ, ಸಭಾಧ್ಯಕ್ಷ ಜಗದೀಶ್ ಶೆಟ್ಟರ್ ಮನೆಗೆ ತೆರಳಿ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ತಾವು ನ. ೧೬ರಂದು ಸಭಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಷಯವನ್ನು ಶೆಟ್ಟರ್ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ಮಾರನೇ ದಿನವೇ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಇಂಗಿತವನ್ನು ಮುಖ್ಯಮಂತ್ರಿಗಳು ವ್ಯಕ್ತಪಡಿಸಿದರು ಎನ್ನಲಾಗಿದೆ.
ಆದರೆ, ಸಂಜೆಯ ವೇಳೆಗೆ ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದಗೌಡರು ಶೆಟ್ಟರ್ ಅವರು ಸೆ. ೧೭ರಂದು ರಾಜೀನಾಮೆ ನೀಡಲಿದ್ದು, ನ. ೧೮ರಂದು ಹೈಕಮಾಂಡ್ ವರಿಷ್ಠರ ಸಮ್ಮುಖದಲ್ಲಿ ಸಂಪುಟ ಸೇರಲಿದ್ದಾರೆ ಎಂದು ತಿಳಿಸಿದರು.
ನ.೧೮ರಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆ: ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನ. ೧೮ರಂದು ನಡೆಯಲಿದ್ದು, ಬಿಜೆಪಿ ಬಿಕ್ಕಟ್ಟು ಶಮನದ ಸಂಧಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸುಷ್ಮಾ ಸ್ವರಾಜ್ ಪಾಲ್ಗೊಳ್ಳುತ್ತಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಕೂಡ ಸಭೆಗೆ ಬರುವ ಸಾಧ್ಯತೆಗಳಿವೆ. ಅನಂತ ಕುಮಾರ್ ಸೇರಿದಂತೆ ಇನ್ನೂ ಕೆಲವು ರಾಷ್ಟ್ರೀಯ ನಾಯಕರು ಸಭೆಯಲ್ಲಿ ಪಾಲ್ಗೊಳ್ಳುತ್ತಾರೆ.‘ದೆಹಲಿ ಒಪ್ಪಂದ’ದಂತೆ ರಾಜ್ಯ ಸರ್ಕಾರಕ್ಕೆ ರಚನೆ ಆಗಲಿರುವ ಸಮನ್ವಯ ಸಮಿತಿಗೆ ಸುಷ್ಮಾ ಅವರೇ ಮುಖ್ಯಸ್ಥರಾಗುವ ಹಿನ್ನೆಲೆಯಲ್ಲಿ ಶಾಸಕಾಂಗ ಸಭೆಗೆ ಮುನ್ನ ಸಮನ್ವಯ ಸಮಿತಿ ರಚನೆ ಮಾಡಿ ಸಮಿತಿಯ ಮೊದಲ ಸಭೆಯನ್ನು ಅಂದೇ ನಡೆಸುವ ಸಾಧ್ಯತೆ ಇದೆ.
ಅಧಿವೇಶನ ಡಿ.೧೦ರಿಂದಲ್ಲ, ೧೪ರಿಂದ
ಬೆಂಗಳೂರು: ಡಿಸೆಂಬರ್ ೧೦ರಿಂದ ಆರಂಭವಾಗಬೇಕಿದ್ದ ವಿಧಾನಮಂಡಲದ ಚಳಿಗಾಲದ ಅಧಿವೇಶನ ಡಿ.೧೪ರಿಂದ ಆರಂಭವಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಗುರುವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ಉತ್ತರ ಕರ್ನಾಟಕದ ನೆರೆ ಪೀಡಿತ ಪ್ರದೇಶಗಳಲ್ಲಿ ಸಂತ್ರಸ್ತರ ನೆರವಿಗೆ ಹಲವಾರು ಕಾರ್ಯಕ್ರಮಗಳು ನಿಗದಿ ಆಗಿರುವುದರಿಂದ ಈ ಮುಂದೂಡಿಕೆ ಎಂದು ಹೇಳಿದರು.‘ಅಲ್ಲದೆ, ಡಾ| ವೀರೇಂದ್ರ ಹೆಗ್ಗಡೆ ಅವರೂ ಕೆಲವು ಪ್ರದೇಶಗಳಲ್ಲಿ ಮನೆ ನಿರ್ಮಾಣ ಕಾರ್ಯಕ್ರಮ ಆಯೋಜಿಸಿದ್ದಾರೆ. ಅದರಲ್ಲಿ ನಾನು, ಸಚಿವರು ಮತ್ತು ಸ್ಥಳೀಯ ಶಾಸಕರು ಪಾಲ್ಗೊಳ್ಳಬೇಕಾಗಿದೆ. ಈ ಕಾರಣದಿಂದ ಅಧಿವೇಶನವನ್ನು ಡಿಸೆಂಬರ್ ೧೪ರಿಂದ ೨೪ರವರೆಗೆ ಮಾರ್ಪಾಡು ಮಾಡಲಾಗಿದೆ’ ಎಂದು ಹೇಳಿದರು.
ಸೌಜನ್ಯ: ಕನ್ನಡಪ್ರಭ