ಉಡುಪಿ: ದಿನಾಂಕ: ೧೩/೦೨/೨೦೧೦ ರಂದು ಶ್ರೀ ರಾಮಸೇನೆಯವರು ಕರೆ ನೀಡಿದ್ದ ಕರ್ನಾಟಕ ಬಂದ್ ವೇಳೆ ಉಡುಪಿ ಜಿಲ್ಲೆಯ ಹಲವೆಡೆ ನಡೆದ ಕಲ್ಲು ತೂರಾಟ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಆರೋಪಿತರುಗಳನ್ನು ಪತ್ತೆ ಮಾಡಿ ಬಂಧಿಸುವಲ್ಲಿ ಉಡುಪಿ ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿರುತ್ತಾರೆ. ದಿನಾಂಕ ೧೩/೦೨/೨೦೧೦ ರಂದು ಉಡುಪಿ ನಗರದ ಬ್ರಹ್ಮಗಿರಿಯಲ್ಲಿರುವ ಮಾಜಿ ಕೇಂದ್ರ ಸಚಿವರಾದ ಶ್ರೀ ಆಸ್ಕರ್ ಫೆರ್ನಾಂಡಿಸ್ರವರ ಮನೆಗೆ ಕಲ್ಲುತೂರಾಟ ನಡೆಸಿದ್ದ ಮತ್ತು ಅಲಂಕಾರ್ ಟಾಕೀಸ್ನ ಎದುರು ಮಹಾದೇವಿ ಟ್ರಾವೆಲ್ಸ್ ಬಸ್ಸಿಗೆ ಕಲ್ಲು ತೂರಾಟ ನಡೆಸಿ ಗಾಜುಗಳನ್ನು ಪುಡಿ ಮಾಡಿದ ಆರೋಪದ ಮೇಲೆ ಶ್ರೀ ರಾಮ ಸೇನೆಯ ಜಿಲ್ಲಾ ವಕ್ತಾರನಾದ ಮಧುಕರ ಮುದ್ರಾಡಿ (೩೫) ಬಿನ್ ಆನಂತಕೃಷ್ಣ, ಭಗವತಿ ಕೃಪಾ, ತೆಂಕಪೇಟೆ, ಉಡುಪಿ, ಶ್ರೀ ರಾಮ ಸೇನೆಯ ರಾಜ್ಯ ಸಂಚಾಲಕರಾದ ಜಿತೇಶ್ (೩೧) ಬಿನ್ ದಿವಂಗತ ಮಂಜಪ್ಪ, ೪ನೇ ಅಡ್ಡರಸ್ತೆ, ಲಕ್ಷ್ಮೀಂದ್ರನಗರ, ಮಣಿಪಾಲ ಹಾಗೂ ಶ್ರೀ ರಾಮ ಸೇನೆಯ ಜಿಲ್ಲಾ ಸಂಚಾಲಕನಾದ ಸುರೇಶ್ ಆಚಾರ್ಯ (೩೨) ಬಿನ್ ದಿವಂಗತ ಶೀನ ಆಚಾರ್ಯ, ತಾಂಗದಗಡಿ, ಉಡುಪಿ ಎಂಬವರನ್ನು ನಗರ ಪೊಲೀಸರು ದಿನಾಂಕ ೧೬/೦೨/೨೦೧೦ ರಂದು ಬೆಳಿಗ್ಗೆ ೦೯:೦೦ ಗಂಟೆಗೆ ಬೀಡಿನಗುಡ್ಡೆಯ ಬಳಿ ಬಂಧಿಸಿರುತ್ತಾರೆ. ಆರೋಪಿತರಿಂದ ಕೃತ್ಯಕ್ಕೆ ಬಳಸಿದ ೧) ಟಾಟಾ ಸುಮೋ-೧, ೨) ಮೋಟಾರ್ ಸೈಕಲ್-೧, ೩) ಕಬ್ಬಿಣದ ರಾಡ್-೧, ೪) ಕ್ರಿಕೆಟ್ ಸ್ಟಂಪ್-೧, ೫) ಮೊಬೈಲ್ ಹ್ಯಾಂಡ್ಸೆಟ್-೬. ಇವುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಆರೋಪಿತರು ವಿಚಾರಣೆಯ ವೇಳೆ ದಿನಾಂಕ ೧೩/೦೨/೨೦೧೦ ರಂದು ಕಾಪು ಠಾಣಾ ವ್ಯಾಪ್ತಿಯ ಕಟಪಾಡಿಯಲ್ಲಿ ಮಾಜಿ ಸಚಿವರಾದ ಶ್ರೀ ವಸಂತ್ ವಿ.ಸಾಲ್ಯಾನ್ರವರ ಮನೆ ಹಾಗೂ ವಾಹನದ ಮೇಲೂ ಮತ್ತು ಮಣಿಪಾಲ ಠಾಣಾ ವ್ಯಾಪ್ತಿಯ ಇಂದ್ರಾಳಿ ಪೆಟ್ರೋಲ್ ಬಂಕ್ನ ಬಳಿ ನಿಲ್ಲಿಸಿದ್ದ ವಿಶಾಲ್ ಬಸ್ನ ಮೇಲೂ ಈಗಾಗಲೇ ದಿನಾಂಕ ೧೪/೦೨/೨೦೧೦ ರಂದು ದಸ್ತಗಿರಿಯಾಗಿ ನ್ಯಾಯಾಂಗ ಬಂಧನದಲ್ಲಿರುವ (ಕೆಳಚಿತ್ರದಲ್ಲಿರುವ)ರೋಹಿತ್ ಕುಮಾರ್ (೨೨) ಬಿನ್ ಸದಾನಂದ, ಅಟ್ಟೆಗೋಳಿ ಮನೆ, ಕಯ್ಯಾರ, ಉಪ್ಪಳ, ಕಾಸರಗೋಡು ಮತ್ತು ತಲೆಮರೆಸಿಕೊಂಡಿರುವ ಅಶೋಕ್ ಪೂಜಾರಿ ಎಂಬವರೊಂದಿಗೂ ಸೇರಿ ಕಲ್ಲು ತೂರಾಟ ನಡೆಸಿದ ಬಗ್ಗೆ ತಿಳಿಸಿರುತ್ತಾರೆ.
ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ದಿನಾಂಕ ೨೬/೦೨/೨೦೧೦ ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿರುತ್ತದೆ. ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಪ್ರವೀನ್ ಮಧುಕರ್ ಪವಾರ್ ಮತ್ತು ಪೊಲೀಸ್ ಉಪಾಧೀಕ್ಷಕರಾದ ಶ್ರೀ ಜಯಂತ್ ಶೆಟ್ಟಿ ಇವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆಯನ್ನು ಉಡುಪಿ ವೃತ್ತದ ವೃತ್ತ ನಿರೀಕ್ಷಕರಾದ ಶ್ರೀ ಎಸ್.ವಿ. ಗಿರೀಶ್ ಮತ್ತು ಪೊಲೀಸ್ ಉಪ ನಿರೀಕ್ಷಕರುಗಳಾದ ಶ್ರೀ ಮಾರುತಿ ಜಿ.ನಾಯಕ್ ಮತ್ತು ಸ್ವರ್ಣ ಜಿ.ಎಸ್ ಹಾಗೂ ಸಿಬ್ಬಂದಿಯವರಾದ ಎ.ಎಸ್.ಐ ಜಿ. ಕೊರಗಪ್ಪ, ಹೆಚ್.ಸಿ. ಕೇಶವ ಗೌಡ, ಸುರೇಶ್ ಭಾರಧ್ವಜ್, ಪಿ.ಸಿ.ಯವರಾದ ದಯಾನಂದ, ಸುಧೀರ್, ಮಹಿಳಾ ಸಿಬ್ಬಂದಿಯಾದ ಜ್ಯೋತಿ ಹೆಚ್.ಎಲ್.ರವರು ನಡೆಸಿರುತ್ತಾರೆ.
ಚಿತ್ರ, ವರದಿ: ಮೊಹಮ್ಮದ್ ಇಬ್ರಾಹಿಂ ಎಂ.ಹೆಚ್.