ದೇಶದಲ್ಲಿ ಹೊಸ ಆರ್ಥಿಕ ನೀತಿಗಳು ರೈತರನ್ನು ಕೊಲ್ಲುತ್ತಿವೆ. ದೇಶದಲ್ಲಿ ಆಹಾರಧಾನ್ಯಗಳ ಕೊರತೆ ಉಂಟಾಗಿದೆ. ಈಗ ಆಹಾರವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಬೇಕಾದ ಸನ್ನಿವೇಶ ನಿರ್ಮಾಣವಾಗಿದೆ. 2 ಲಕ್ಷಕ್ಕಿಂತ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃಷಿ ಉತ್ಪನ್ನ ಕುಸಿದಿದೆ. ಅವಶ್ಯಕ ವಸ್ತುಗಳ ಬೆಲೆಗಳು ಏರುತ್ತಿವೆ. ಕಿಸಾನ್ ಸಭಾದ ಅಂದಿನ ಮುಖಂಡರಾಗಿದ್ದ ಕಾಂ. ಹರಕಿಷನ್ ಸಿಂಗ್ ಸುರ್ಜಿತ್ ಅವರು ಈ ಕುರಿತು ಚಿದಂಬರಂ ಅವರನ್ನು ಎಚ್ಚರಿಸಿದಾಗ, ಚಿದಂಬರಂ ``ನೀವು ಹಳೆಯ ಕಾಲದ ವ್ಯಕ್ತಿ. ರೈತರ ಜೇಬಲ್ಲಿ ದುಡ್ಡಿದ್ದರೆ ಅವರು ಹೆದರಬೇಕಿಲ್ಲ. ಯಾವುದನ್ನೂ ಬೇಕಾದರೂ ಖರೀದಿಸಬಹುದು." ಎಂದಿದ್ದರು. ಈಗ ಆಹಾರ ವಸ್ತುಗಳನ್ನು ಹೊರಗಿನಿಂದ ಆಮದು ಮಾಡಿಕೊಳ್ಳಬೇಕಾಗಿದೆ. ಆದರೆ ದುಡ್ಡು ಇಲ್ಲದಂತಾಗಿದೆ. ಕೃಷಿ ಬಿಕ್ಕಟ್ಟಿಗೆ ರೈತರ ಆತ್ಮಹತ್ಯೆಗಳಿಗೆ ಕಾರಣ ಕಂಡುಹಿಡಿಯಲು ನೇಮಿಸಲಾದ ಡಾ|| ಸ್ವಾಮಿನಾಥನ್ ಆಯೋಗ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರೂ ಕೂಡ ಕೇಂದ್ರ ಸರ್ಕಾರ ಅದರ ಜಾರಿಗೆ ಮುಂದಾಗದೇ ಈ ಸಮಿತಿಯ ಶಿಫಾರಸ್ಸಿನ ಅಧ್ಯಯನಕ್ಕೆಂದು ಮತ್ತೊಂದು ಆಯೋಗವನ್ನು ನೇಮಿಸಿ ಕಾಲಹರಣ ಮಾಡುತ್ತಿದೆ ಎಂದು ಅಖಿಲ ಭಾರತ ಕಿಸಾನ್ ಸಭಾ ಪ್ರಧಾನ ಕಾರ್ಯದರ್ಶಿ ಕೆ.ವರದರಾಜನ್ ಅವರು ಕಟುವಾಗಿ ಟೀಕಿಸಿದರು. ಅವರು ಕೆ ಪಿ ಆರ್ ಎಸ್ (ಕರ್ನಾಟಕ ಪ್ರಾಂತ್ಯ ರೈತ ಸಂಘ) ೧೪ ನೇ ರಾಜ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡುತ್ತಿದ್ದರು.
ಸ್ವಾಮಿನಾಥನ್ ಆಯೋಗದ ಶಿಫಾರಸ್ಸಿನ ಅಧ್ಯಯನಕ್ಕೆ 15 ಉಪಸಮಿತಿ ರಚಿಸಲಾಗಿದೆ. ಈ ಉಪಸಮಿತಿಗಳು 6 ತಿಂಗಳಿಗೊಮ್ಮೆ ಸಭೆ ಸೇರಿ ಟೀ ಕುಡಿದು ಮುಂದಿನ ಬಾರಿ ಗಂಭೀರವಾದ ಸಭೆಯನ್ನು ನಡೆಸೋಣ ಎಂದು ಸಭೆ ಮುಂದೂಡುತ್ತಿವೆ ಎಂದು ಸ್ವತಃ ಉಪಸಮಿತಿಯೊಂದರ ಸದಸ್ಯರಾದ ವರದರಾಜನ್ ತಿಳಿಸಿದರು.
ಕೇಂದ್ರ ಸರ್ಕಾರವು ಇದ್ದಕ್ಕಿದ್ದಂತೆ ಬಿ.ಟಿ. ಬದನೆ ಬೆಳೆಗೆ ಅನುಮತಿ ನೀಡಿರುವುದಾಗಿ ಘೋಷಿಸಿತು. ತಜ್ಞರ ಒಪ್ಪಿಗೆ ಪಡೆಯಲಾಗಿದೆಯೇ? ಎಂದು ಕಿಸಾನ್ ಸಭಾ ಪ್ರಶ್ನಿಸಿದಾಗ ಹೌದೆಂದು ತಜ್ಞರ ಹೆಸರು ಹೇಳಲಾಯಿತು. ತಜ್ಞರ ಪಟ್ಟಿ ಪರಿಶೀಲಿಸಿದರೆ, ಅದರಲ್ಲಿ ಇಬ್ಬರು ದೈತ್ಯ ಅಮೇರಿಕನ್ ಬಹುರಾಷ್ಟ್ರೀಯ ಬೀಜ ಕಂಪನಿ ಮಾನ್ಸೆಂಟೊ ಕಂಪನಿಗೆ ಸೇರಿದವರಾಗಿದ್ದರು. ಇದರ ವಿರುದ್ಧ ಕಿಸಾನ್ ಸಭಾ ನಡೆಸಿದ ತೀವ್ರ ಪ್ರತಿಭಟನೆಯಿಂದಾಗಿ ಕೇಂದ್ರ ಸರ್ಕಾರ ಬಿಟಿ ಬದನೆ ಬೆಳೆಯುವ ಅನುಮತಿಗೆ ತಾತ್ಕಾಲಿಕವಾಗಿ ತಡೆಹಾಕಿದೆ. ವಿದರ್ಭದಲ್ಲಿ ಬಿ.ಟಿ. ಹತ್ತಿ ಬೆಳೆದ ದೊಡ್ಡ ಸಂಖ್ಯೆಯ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆಂದು ವರದರಾಜನ್ ಹೇಳಿದರು.
ರೈತರಿಂದ, ಸಣ್ಣ ಹಿಡುವಳಿದಾರರಿಂದ ಭೂಮಿ ಕಸಿದುಕೊಂಡು ಕಾರ್ಪೊರೇಷನ್ ಕಂಪನಿಗಳಿಗೆ ಒಪ್ಪಿಸುವ ಕೆಲಸ ಈಗ ನಡೆಯುತ್ತಿದೆ. ಇಂತಹ ರೈತ ವಿರೋಧಿ ನೀತಿಯಲ್ಲಿ ಬದಲಾವಣೆ ತರಲು ಕಿಸಾನ್ ಸಭಾ ತೀವ್ರ ಆಂದೋಲನ ರೂಪಿಸಲಿದೆ ಎಂದು ವರದರಾಜನ್ ಹೇಳಿದರು. ಮಾಜಿ ಶಾಸಕರು, ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷರೂ ಆದ ಜಿ.ವಿ.ಶ್ರೀರಾಮರೆಡ್ಡಿಯವರು ಮಾತನಾಡಿ ರಾಜ್ಯ ಬಿಜೆಪಿ ಸರ್ಕಾರ ರೈತರ ಮೇಲೆ ಪ್ರಮಾಣ ಮಾಡಿ ಅಧಿಕಾರಕ್ಕೇರಿದ ಮೇಲೆ ಒಂದೇ ಒಂದು ರೈತಪರ ನೀತಿ ಜಾರಿ ಮಾಡಿಲ್ಲ. ಅದಕ್ಕೆ ವಿರುದ್ಧವಾಗಿ ರೈತರ ಮೇಲೆ ನಿರಂತರವಾಗಿ ಗೋಲಿಬಾರ್, ಲಾಠಿ ಪ್ರಹಾರ ನಡೆಸುತ್ತಾ ಬರುತ್ತಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಂತರೈತ ಸಂಘದ ರಾಜ್ಯ ಅಧ್ಯಕ್ಷ ಮಾರುತಿ ಮಾನ್ಪಡೆಯವರು ಮಾತನಾಡಿ ಕೇರಳದಲ್ಲಿ ರೈತರ ಆತ್ಮಹತ್ಯೆಗೆ ಪರಿಹಾರವಾಗಿ ರೈತರ ಬ್ಯಾಂಕ್ ಸಾಲ ಮನ್ನಾ ಅಲ್ಲದೆ ರೈತರ ಖಾಸಗಿ ಸಾಲವನ್ನು ತೀರಿಸುವ ವ್ಯವಸ್ಥೆ ಮಾಡಿದ್ದರಿಂದ ಅಲ್ಲಿ ರೈತರ ಆತ್ಮಹತ್ಯೆ ತೀವ್ರವಾಗಿ ಇಳಿಮುಖವಾಗಿದೆ. ಎಲ್ ಡಿ ಎಫ್ ಸರ್ಕಾರದ ಇಂತಹ ನೀತಿಯನ್ನು ರಾಜ್ಯದಲ್ಲಿಯೂ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.
ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾದ ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯರವರು ಎಲ್ಲರನ್ನು ಸ್ವಾಗತಿಸಿ ಮಾತನಾಡಿ ರೈತರಿಗೆ ವಿದ್ಯುತ್, ಗೊಬ್ಬರ, ಬೀಜ ಏನೂ ಸಮರ್ಪಕವಾಗಿ ದೊರೆಯುತ್ತಿಲ್ಲ. ಪರ್ಯಾಯ ಕೃಷಿ ನೀತಿಗಾಗಿ ಹೋರಾಟ ನಡೆಯಬೇಕೆಂದರು. ಎ.ಪಿ.ಎಂ.ಸಿ. ಅಧ್ಯಕ್ಷರಾದ ಮುನೇಗೌಡರು ಸಮ್ಮೇಳನಕ್ಕೆ ಶುಭ ಕೋರಿದರು. ಪ್ರಾಂತ ರೈತ ಸಂಘ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಬಯ್ಯಾರೆಡ್ಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಚಂದ್ರತೇಜಸ್ವಿ ಸ್ವಾಗತಿಸಿ ಯಾದವಶೆಟ್ಟಿ ವಂದಿಸಿದರು. ಕಿಸಾನ್ ಸಭಾ ಅಖಿಲ ಭಾರತ ಕೇಂದ್ರದ ಪರವಾಗಿ ವಿಜುಕೃಷ್ಣನ್ ಹಾಜರಿದ್ದರು.
ಸೌಜನ್ಯ: ಜನಶಕ್ತಿ