ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಚಿಕ್ಕಮಗಳೂರು: ದತ್ತಜಯಂತಿ: ಎಂಟು ನಿಯಮಗಳ ಪಾಲನೆಗೆ ಜಿಲ್ಲಾಡಳಿತದ ಸೂಚನೆ

ಚಿಕ್ಕಮಗಳೂರು: ದತ್ತಜಯಂತಿ: ಎಂಟು ನಿಯಮಗಳ ಪಾಲನೆಗೆ ಜಿಲ್ಲಾಡಳಿತದ ಸೂಚನೆ

Sun, 29 Nov 2009 14:10:00  Office Staff   S.O. News Service
ಚಿಕ್ಕಮಗಳೂರು, ನ.29: ದತ್ತಜಯಂತಿ ಅಂಗವಾಗಿ ಸಂಘಪರಿವಾರ ಆಯೋಜಿಸಿರುವ ಕಾರ್ಯಕ್ರಮಗಳಲ್ಲಿ ಮತ್ತು ಮೆರವಣಿಗೆಗಳಲ್ಲಿ ೮ ಅಂಶಗಳ ಸೂಚನೆಯನ್ನು ಪಾಲಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ನಾಗರಾಜ್ ಸಂಘಟಕರಿಗೆ ಆದೇಶಿಸಿದ್ದಾರೆ.
 
ಅವು ಈ ಕೆಳಕಂಡಂತಿವೆ:
 
* ನ.೩೦ರ ಮಧ್ಯಾಹ್ನ ೨ ಗಂಟೆಯ ನಂತರ ಮೆರವಣಿಗೆಯನ್ನು ಗಣಪತಿ ದೇವಸ್ಥಾನದಿಂದ ಪ್ರಾರಂಭಿಸಿ ಕೆ.ಇ.ಬಿ. ರಸ್ತೆ, ಬಸವನಹಳ್ಳಿ ರಸ್ತೆ, ಹನಮಂತಪ್ಪ ವೃತ್ತ, ಎಂ.ಜಿ ರಸ್ತೆ, ಅಂಚೆಕಛೇರಿ ರಸ್ತೆ,  ತೊಗರಿಹಂಕಲ್ ವೃತ್ತ ಮೂಲಕ ಬೋಳರಾಮೇಶ್ವರ ದೇವಸ್ಥಾನದ ಆವರಣವನ್ನು ಸೇರಿ ಸಂಜೆ ೭ ಗಂಟೆ ಒಳಗೆ ಸಭೆ, ಸಮಾರಂಭವನ್ನು ಮುಕ್ತಾಯಗೊಳಿಸತಕ್ಕದ್ದು.
* ಮೆರವಣಿಗೆ ಹಾದಿಯಲ್ಲಿ ಸಿಡಿಮದ್ದು ಸಿಡಿಸಬಾರದು
* ಮೆರವಣಿಗೆ ಸಾಗುವಾಗ ಯಾವುದೇ ಪ್ರಚೋದನಕಾರಿ ಬ್ಯಾನರ್ ಹಿಡಿಯಬಾರದು
* ಮೆರವಣಿಗೆಯಲ್ಲಿ ಉದ್ರೇಕಕಾರಿ, ಪದ್ರಚೋದನಕಾರಿ ಹಾಗೂ ಇತೃ‌ಎ ಕೋಮಿಗೆ ನೋವುಂಟು ಮಾಡುವ ಶಬ್ದ ಬಳಸಿ ಘೋಷಣೆ ಕೂಗಬಾರದು.
* ಧ್ವನಿವರ್ಧಕ ಬಳಸುವುದಾದರೆ ಸಂಬಂಧಿಸಿದ ಇಲಾಖೆಯಿಂದ ಅನುಮತಿ ಪಡೆದಿರಬೇಕು.
* ಮೆರವಣಿಗೆ ಯಾತ್ರೆಯ ಪೂರ್ಣ ಭಾಗವನ್ನು ವಿಡಿಯೋ ಚಿತ್ರೀಕರಣ ಮಾಡಲಾಗುತ್ತದೆ.
* ಮೆರವಣಿಗೆ ಸಾಗುವ ದಾರಿಯಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ಕಾರ್ಯನಿರ್ವಾಹಕ ದಂಡಾಧಿಕಾರಿಗಳ ಸೂಚನೆಗಳನ್ನು ಪಾಲಿಸಬೇಕು.
* ಡಿ.೧ ರಂದು ಬೆಳಿಗ್ಗೆ ೬ ಗಂಟೆಯಿಂದ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾಕ್ಕೆ ವಾಹನಗಳನ್ನು ಬಿಡಲಾಗುವುದು. ಮಧ್ಯಾಹ್ನ ೨ಗಂಟೆವರೆಗೆ ವಾಹನಗಳು ಏಕಮುಖ ರಸ್ತೆಯಲ್ಲಿ ಮೇಲ್ಮುಖವಾಗಿ ಹತ್ತಬೇಕು. ೨ ಗಂಟೆಯ ನಂತರ ಏಕಮುಖ ರಸ್ತೆಯಲ್ಲಿ ವಾಹನಗಳು ಕೆಳಗಿಳಿಯಲು ಅವಕಾಶವಿದೆ.


ರಾಜ್ಯದ ಜನರ ಅತ್ಯಂತ ಕುತೂಹಲ ಕೆರಳಿಸಿರುವ ಶ್ರೀ ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ಸಂಘಪರಿವಾರವು ಆಯೋಜಿಸಿರುವ ಈ ಬಾರಿಯ ದತ್ತಜಯಂತಿ ಆಚರಣೆಗೆ ಕ್ಷಣಗಣನೆ ಆರಂಭವಾಗಿದೆ. 
 
ಇದೇ ಮೊದಲ ಬಾರಿಗೆ ದತ್ತಜಯಂತಿ ಕಾರ್ಯಕ್ರಮದ ವೇಳೆಯಲ್ಲಿ ದತ್ತಮಾಲಾ ಅಭಿಯಾನವನ್ನು ಏರ್ಪಡಿಸಲಾಗಿದ್ದು ಗಮನಸೆಳೆದಿದೆ. ಗಿರಿಗೆ ಬರುವ ಜನರ ಸಂಖ್ಯಾಬಲದಲ್ಲಿ ಹೆಚ್ಚಳ ತೋರಿಸಲು ಸಂಘಪರಿವಾರದ ಮುಖಂಡರು ಈ ಕ್ರಮವನ್ನು ಅನುಸರಿಸಿದ್ದಾರೆ ಎನ್ನಲಾಗುತ್ತಿದೆ. ಹಿಂದಿನ ವರ್ಷಗಳಲ್ಲಿ ಎರಡು ಬಾರಿ ಪ್ರತ್ಯೇಕ ಕಾರ್ಯಕ್ರಮಗಳನ್ನು ಮಾಡಲಾಗುತ್ತಿತ್ತು. ಅಕ್ಟೋಬರ್‌ನಲ್ಲಿ ದತ್ತಮಾಲೆ ನಡೆದರೆ ಡಿಸಂಬರ್‌ನಲ್ಲಿ ದತ್ತಜಯಂತಿ ನಡೆಯುತ್ತಿತ್ತು. ಆದರೆ ಈ ಬಾರಿ ಒಂದೇ ಸಮಯದಲ್ಲಿ ಈ ಎರಡೂ ಕಾರ್ಯಕ್ರಮಗಳನ್ನು ನಡೆಸಲು ಸಂಘಪರಿವಾರದ ಮುಖಂಡರು ತೀರ್ಮಾನಿಸಿದ್ದಾರೆ. 
 
ವಿವಾದಿತ ಬಾಬಾಬುಡನ್‌ಗಿರಿಯಲ್ಲಿ ಸಂಘಪರಿವಾರವು ಆಚರಣೆಗೆ ತಂದಿರುವ ದತ್ತಜಯಂತಿ, ದತ್ತಮಾಲೆ, ಸಂಕೀರ್ತನಾ ಯಾತ್ರೆ, ಶೋಭಾಯಾತ್ರೆ, ಅನುಸೂಯಾ ಜಯಂತಿಯಿಂದ ಸಧ್ಯದ ಮಟ್ಟಿಗೆ ಜನಸಾಮಾನ್ಯರು ದೂರ ಉಳಿಯುತ್ತಿದ್ದಾರೆ ಎಂಬುದು ಇದರಿಂದ ಮನದಟ್ಟಾಗುತ್ತಿದೆ. ಸಂಘಪರಿವಾರವು ವರ್ಷಕ್ಕೊಂದರಂತೆ ಹೊಸ ಆಚರಣೆಗಳನ್ನು ಜಾರಿಗೆ ತರುತ್ತಿದೆ. ಇದರಿಂದ ಜನಸಾಮಾನ್ಯರಿಗೆ ಅಷ್ಟೇ ಅಲ್ಲದೆ ಜಿಲ್ಲಾಡಳಿತ ಮತ್ತು ಸರ್ಕಾರವು ಉಭಯಸಂಕಟಕ್ಕೆ ಈಡಾಗುತ್ತಿದೆ.
 
ಏಕತೆಯ ಪ್ರತೀಕ, ಸೌಹಾರ್ದ ಪರಂಪರೆ ಬಿಂಬಿಸುವ ತಾಣ ಹಾಗೂ ಸರ್ವಧರ್ಮಿಯರ ಪವಿತ್ರ ಸ್ಥಳವಾಗಿರುವ ಸದರಿ ಗಿರಿಯ ಗುಹೆಯ ಬಳಿ ಸಂಘಪರಿವಾರವು ವಿವಾದವನ್ನು ಸೃಷ್ಠಿಸಿರುವುದು ಅದರಿಂದ ಬಿಜೆಪಿಯು ಲಾಭ ಗಳಿಸುತ್ತಿರುವುದು, ಜನಸಾಮಾನ್ಯರು ಕಿರುಕುಳ ಅನುಭವಿಸುತ್ತಿರುವುದು ಇಂದು-ನಿನ್ನೆಯ ವಿಚಾರವಲ್ಲ. ಈ ವಿವಾದದ ಕುರಿತಾಗಿ ಜಾತ್ಯತೀತ ಮತ್ತು ಪ್ರಗತಿಪರ ಸಂಘಟನೆಗಳು ಅನೇಕ ತೆರನಾದ ಚಳವಳಿಗಳನ್ನು ಮಾಡಿಕೊಂಡು ಬಂದಿವೆ. ಕೆಲವು ತಿಂಗಳ ಹಿಂದೆ ಕರ್ನಾಟಕ ಕೋಮು ಸೌಹಾರ್ದ ವೇದಿಕೆಯು ಸರ್ವೋಚ್ಛ ನ್ಯಾಯಾಲಯದಲ್ಲಿ ಮೊಕದ್ದಮೆಯನ್ನು ಹೂಡಿ ವಿವಾದಿತ ಸ್ಥಳದಲ್ಲಿ ಸಂಘಪರಿವಾರದ ಹೊಸ ಆಚರಣೆಗಳಿಗೆ ಅವಕಾಶ ನೀಡದಿರುವಂತೆ ತಡೆಯಾಜ್ಞೆ ತಂದಿದೆ. 
 
ಅದರ ಭಾಗವಾಗಿ ೧೯೮೯ರಲ್ಲಿ ಧಾರ್ಮಿಕ ದತ್ತಿ ಆಯುಕ್ತರು ಹೊರಡಿಸಿದ್ದ ಸೂಚನೆಗಳನ್ನು ಜಿಲ್ಲಾಡಳಿತವು ಪಾಲಿಸಲು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. 
 
ಈ ಬೆಳವಣಿಗೆಗಳನ್ನು ಅರಿತಿರುವ ಜನಸಾಮಾನ್ಯರು ದತ್ತಜಯಂತಿ ಆಚರಣೆಯಲ್ಲಿ ವಿವಾದ ಸೃಷ್ಟಿಯಾಗಿರುವುದರಿಂದ ಅಲ್ಲಿಗೆ ಬರುವುದನ್ನು ಕ್ರಮೇಣ ಕಡಿಮೆಗೊಳಿಸುತ್ತಿರುವುದು ಕಂಡುಬರುತ್ತಿದೆ. ಇದು ಸಂಘಪರಿವಾರವನ್ನು ಪೇಚಿಗೆ ಸಿಲುಕಿಸಿರುವುದಂತೂ ಸ್ಪಷ್ಟವಾಗಿದೆ. ಅದನ್ನು ತಿಳಿದಿರುವ ಸಂಘ ಪರಿವಾರವು ಜನರ ಮನಸ್ಸನ್ನು ಸೆಳೆದು ದತ್ತಪೀಠದ ಪರಿಕಲ್ಪನೆಯನ್ನು ಸೃಷ್ಟಿಸಿ ನಿರಂತರ ಹೋರಾಟ ಮಾಡಿಕೊಂಡು ಬರಲು ನಾನಾ ತರಹದ ಕಸರತ್ತು ನಡೆಸುತ್ತಿದೆ. ಜನಜಾಗೃತಿ ಜಾಥಾ, ಯಾತ್ರೆ, ಪೂಜೆ, ಭಜನೆ, ಹೋಮ, ಹವನ ಮಾಡಿದಂತೆಲ್ಲ ಅದರ ಕೋಮು ಸೌಹಾರ್ದ ಕೆಡಿಸುವ ಅಜೆಂಡಾವನ್ನು ಒಪ್ಪಿಕೊಳ್ಳಲು ಜಿಲ್ಲೆಯ ಜನರಿಗಂತೂ ಸುತಾರಾಂ ಒಪ್ಪಿಗೆಯಿಲ್ಲ. ಹೀಗಾಗಿ ಹೊರಜಿಲ್ಲೆಗಳಿಂದಲೂ ಮಾಲಾಧಾರಿಗಳ ರೂಪದಲ್ಲಿ ದತ್ತಜಯಂತಿ ಆಚರಣೆಗೆ ಜನರನ್ನು ಕರೆತರಲು ಮುಂದಾಗಿದೆ. 
 
ಇದಕ್ಕೆ ಪೂರಕವಾಗಿ ಬಿರುಸಿನ ಚಟುವಟಿಕೆ ನಡೆಯತೊಡಗಿದೆ. ಇಡೀ ಜಿಲ್ಲೆಯನ್ನು ಕೇಸರಿ, ಧ್ವಜ, ಬ್ಯಾನರ್‍ಸ್, ಬಂಟಿಂಗ್ಸ್, ವಿದ್ಯುತ್ ದೀಪಗಳಿಂದ ಅಲಂಕಾರಗೊಳಿಸಲಾಗುತ್ತಿದೆ. ಜಿಲ್ಲಾ ಕೇಂದ್ರದಲ್ಲಿ ಮತ್ತು ಇನ್ನಿತರ ತಾಲ್ಲೂಕು ಕೇಂದ್ರಗಳ ಪಟ್ಟಣ ಪ್ರದೇಶಗಳಲ್ಲಿ ವಿದ್ಯುತ್ ಮತ್ತು ದೂರವಾಣಿಯ ಪ್ರತಿ ಕಂಬಗಳಿಗೂ ಕೇಸರಿ ಧ್ವಜ ಕಟ್ಟುತ್ತಿರುವುದು ಎಲ್ಲೆಡೆಯೂ ಕಂಡುಬಂದಿದೆ, ಜಿಲ್ಲಾಡಳಿತ ನಿಷೇಧ ವಿಧಿಸಿದ್ದರೂ ಕೆಲವೆಡೆ ಪ್ರಚೋದನಕಾರಿ ಬರಹಗಳುಳ್ಳ ಬ್ಯಾನೆರ್‌ಗಳು ರಾರಾಜಿಸತೊಡಗಿವೆ. 
 
ಇತ್ತೀಚೆಗೆ ಮೂಡಿಗೆರೆ ಪಟ್ಟಣದಲ್ಲಿ ಸಂಘಪರಿವಾರದ ಮುಖಂಡರು ದಲಿತ ಯುವಕ ಬಾಬುನನ್ನು ಬಳಸಿಕೊಂಡು ವಿದ್ಯುತ್ ಕಂಬಗಳಿಗೆ ಬ್ಯಾನರ್ ಕಟ್ಟಿಸುತ್ತಿದ್ದಾಗ ವಿದ್ಯುತ್ ತಂತಿ ಸ್ಪರ್ಶದಿಂದ ಆತ ಮೃತಪಟ್ಟಿದ್ದ ಇದರಿಂದ ಕುಪಿತಗೊಂಡಿರುವ ದಲಿತ ಸಂಘಟನೆಗಳು, ಜಾತ್ಯತೀತ ಪಕ್ಷಗಳು ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟವು ತೀವ್ರ ವಿರೋಧ ವ್ಯಕ್ತಪಡಿಸಿದ್ದು ಮೃತ ಬಾಬುಗೆ ಶ್ರದ್ಧಾಂಜಲಿ ಸಲ್ಲಿಸಿ ಡಿ.೧ರಂದು ಮೂಡಿಗೆರೆ ಬಂದ್‌ಗೆ ಕರೆ ನೀಡಿವೆ. ಬಳಿಕ ಎಚ್ಚೆತ್ತುಕೊಂಡ ಮೆಸ್ಕಾಂ ಪಟ್ಟಣದ ಎಲ್ಲ ವಿದ್ಯುತ್ ಕಂಬಗಳಿಂದ ಬ್ಯಾನರ್‍ಸ್, ಬಂಟಿಂಗ್ಸ್ ಮತ್ತು ಧ್ವಜಗಳನ್ನು ತೆರವುಗೊಳಿಸಿದೆ. ಇದು ಜಿಲ್ಲೆಯ ಇತಿಹಾಸದಲ್ಲೇ ಇಂತಹ ಕ್ರಮ ಮೊದಲ ಬಾರಿಗೆ ಮೂಡಿಗೆರೆಯಲ್ಲಿ ನಡೆದಿದೆ ಎನ್ನಲಾಗಿದೆ. 
 
ಈ ಬಾರಿ ದತ್ತಜಯಂತಿ ಕಾರ್ಯಕ್ರಮದ ಪ್ರಯುಕ್ತ ಜಿಲ್ಲಾಡಳಿತವು ಸುಮಾರು ೩೫೦೦ ಪೊಲೀಸ್ ಸಿಬ್ಬಂದಿಗಳನ್ನು ಬಿಗು ಬಂದೋಬಸ್ತ್‌ಗಾಗಿ ವ್ಯವಸ್ಥೆ ಮಾಡಿದೆ. ಹೊರಜಿಲ್ಲೆಗಳಿಂದ ಮೀಸಲು ಪಡೆಯ ತುಕಡಿಗಳನ್ನು ಕರೆಸಲಾಗಿದೆ. ೯ ಡಿವೈ‌ಎಸ್ಪಿ, ೩೬ ಸಿಪಿ‌ಐ, ೧೮ ಬಿ‌ಎಸ್‌ಐ, ೧೪೫ ಎ‌ಎಸ್‌ಐ, ೪೪೮ ಎಚ್‌ಸಿ, ೧೩೯೬ ಪಿಸಿ, ೮೨ ಡಬ್ಲೂಪಿಸಿ, ೫೦೦ ಹೋಂಗಾರ್ಡ್, ೧೮ ಕೆ‌ಎಸ್‌ಆರ್‌ಪಿ ಅಲ್ಲದೆ ೨೦ ಡಿ‌ಎ‌ಆರ್ ತುಕಡಿಗಳನ್ನು ಕರೆಸಲಾಗಿದೆ ಮತ್ತು ಕೆಲವು ನಿಬಂಧನೆಗಳನ್ನು ಸಂಘಟಕರಿಗೆ ಪಾಲಿಸಲು ಸೂಚನೆ ನೀಡಲಾಗಿದೆ.
 
 ಆದರೆ ಈ ಬಾರಿ ಸುಪ್ರೀಂ ಕೋರ್ಟ್ ತಡೆಯಾಜ್ಞೆ ಇರುವ ಪ್ರದೇಶಗಳಲ್ಲಿ ಕಾನೂನು ಉಲ್ಲಂಘಿಸದಂತೆ ಜಿಲ್ಲಾಡಳಿತ ಮತ್ತು ಸರಕಾರ ಹೇಗೆ ಎಚ್ಚರ ವಹಿಸುತ್ತದೆ ಎಂಬುದನ್ನು ಕಾದು ನೋಡಬೇಕು.
-ಅಜೀಜ್ ಕಿರುಗುಂದ


Share: