ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಜೈಪುರ: ಒಂದೇ ದಿನಗಲ್ಲಿ 150 ಕೋಟಿ ರೂ. ತೈಲ ಅಗ್ನಿಗಾಹುತಿ

ಜೈಪುರ: ಒಂದೇ ದಿನಗಲ್ಲಿ 150 ಕೋಟಿ ರೂ. ತೈಲ ಅಗ್ನಿಗಾಹುತಿ

Sat, 31 Oct 2009 18:33:00  Office Staff   S.O. News Service
ಜೈಪುರ, ಅಕ್ಟೋಬರ್ 31: ರಾಜಸ್ಥಾನ ರಾಜಧಾನಿ ಜೈಪುರದ ಇಂಡಿಯನ್ ಆಯಿಲ್ ಕಾರ್ಪೋರೇಷನ್ (ಐ‌ಒಸಿ)ನ ತೈಲ ಸಂಗ್ರಹಾಗಾರದಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ೧೦ ಕೋಟಿ ಲೀಟರ್ ತೈಲ ದಹನವಾಗಿದೆ. ಇದರ ಮೊತ್ತ ೧೫೦ ಕೋಟಿ ರುಪಾಯಿ. ದುರಂತದಲ್ಲಿ ಒಟ್ಟಾರೆ ೯ ಮಂದಿ ಸಾವನ್ನಪ್ಪಿದ್ದಾರೆ. ೪೦ ಮಂದಿ ಗಾಯಗೊಂಡಿದ್ದಾರೆ. ತೈಲ ಸಂಗ್ರಹಾಗಾರದಲ್ಲಿ ಸೋರಿಕೆಯಾಗಿ ಗುರುವಾರ ರಾತ್ರಿ ೭.೩೦ರ ವೇಳೆಗೆ ಬೆಂಕಿ ಹೊತ್ತಿಕೊಂಡಿತು. ಅದು ಕ್ಷಣಾರ್ಧದಲ್ಲಿ ವ್ಯಾಪಿಸಿತು. ತೈಲವೆಲ್ಲಾ ಖಾಲಿಯಾಗಿ ಬೆಂಕಿ ತಾನಾಗೇ ನಂದಿ ಹೋಗುವವರೆಗೂ  ಯಾವುದೇ ಕಾರ್ಯಾಚರಣೆ ನಡೆಸಲು ಅಸಾಧ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದುರಂತದಲ್ಲಿ ಮಡಿದವರ ಕುಟುಂಬದವರಿಗೆ ಇಂಡಿಯನ್ ಆಯಿಲ್ ಕಾರ್ಪೋರೇಷನ್ ತಲಾ ೧೦ ಲಕ್ಷ ರು. ಗಂಭೀರವಾಗಿ ಗಾಯಗೊಂಡವರಿಗೆ ೨ ಲಕ್ಷ ರು. ಪರಿಹಾರ ಘೋಷಿಸಿದೆ. ರಾಜಸ್ಥಾನ ಸರ್ಕಾರ ಮೃತರ ಕುಟುಂಬಕ್ಕೆ ೧ ಲಕ್ಷ ಹಾಗೂ ಗಂಭೀರ ಗಾಯಗೊಂಡವರಿಗೆ ೫೦ ಸಾವಿರ ರು. ಪರಿಹಾರ ಪ್ರಕಟಿಸಿದೆ. 

ದೇಶದ ನಿತ್ಯ ಬಳಸುವ ೧೦ನೇ ೧ ಭಾಗದಷ್ಟು ತೈಲ ದಹನ 
 
ಭಾರತ ವರ್ಷವೊಂದಕ್ಕೆ ೫.೫ ಲಕ್ಷ ಕೋಟಿ ರು. ಮೌಲ್ಯದ ಪೆಟ್ರೋಲಿಯಂ ಉತ್ಪನ್ನಗಳನ್ನು ಬಳಸುತ್ತದೆ. ನಿತ್ಯದ ಲೆಕ್ಕದಲ್ಲಾದರೆ ಈ ಪ್ರಮಾಣ ೧೫೦೦ ಕೋಟಿ ರುಪಾಯಿ. ಜೈಪುರದ ಐ‌ಒಸಿ ಘಟಕದಲ್ಲಿ ೧೫೦ ಕೋಟಿ ರು. ಮೌಲ್ಯದ ಇಂಧನ ಭಸ್ಮವಾಗಿದೆ. ಅಂದರೆ, ದೇಶ ನಿತ್ಯ ಬಳಸುವ ತೈಲದ ೧೦ನೇ ಒಂದು ಭಾಗದಷ್ಟು ತೈಲ ದಹನವಾದಂತಾಗಿದೆ. 

ತೈಲ ಬಳಕೆ: ಭಾರತ|ಚೀನಾ ಕ್ಯಾಲಿಫೋರ್ನಿಯಾ! 
 
ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾ ಹಾಗೂ ಭಾರತ ಒಟ್ಟಾಗಿ ಪ್ರತಿ ವರ್ಷ ಬಳಸುವ ತೈಲದ ಪ್ರಮಾಣ ೨೦ ಬಿಲಿಯನ್ ಗ್ಯಾಲನ್. ಇದು ಅಮೆರಿಕದ ಒಂದು ರಾಜ್ಯ ಕ್ಯಾಲಿಫೋರ್ನಿಯಾದಲ್ಲಿ ಖರ್ಚಾಗುವ ತೈಲಕ್ಕೆ ಸಮ! 

ಸೌಜನ್ಯ: ಕನ್ನಡಪ್ರಭ

Share: