ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಮಂಗಳೂರು: ನರಿಂಗಾನ ಅಲ್ ಮದೀನಾ ಶಾಲಾ ದಶಮಾನೋತ್ಸವ ಸಮಾರಂಭ

ಮಂಗಳೂರು: ನರಿಂಗಾನ ಅಲ್ ಮದೀನಾ ಶಾಲಾ ದಶಮಾನೋತ್ಸವ ಸಮಾರಂಭ

Sun, 10 Jan 2010 03:05:00  Office Staff   S.O. News Service
ಮಂಗಳೂರು, ಜ.೯: ನರಿಂಗಾನ ಅಲ್ ಮದೀನಾ ಶಾಲಾ ದಶಮಾನೋತ್ಸವದ ಸಮಾರೋಪ ಸಮಾರಂಭ ಶಾಸಕ ಯು.ಟಿ.ಖಾದರ್ ಅಧ್ಯಕ್ಷತೆಯಲ್ಲಿ ಇಂದು ಸಂಜೆ ನಡೆಯಿತು.

ಅಲ್ ಮದೀನಾ ಶಿಕ್ಷಣ ಸಂಸ್ಥೆಯ ಸಾಧನೆಗೆ ಕಾರಣರಾದ ಅಬ್ಬಾಸ್ ಮುಸ್ಲಿಯಾರ್‌ರ ತ್ಯಾಗ, ಪರಿಶ್ರಮವನ್ನು ಶಾಸಕ ಖಾದರ್ ಶ್ಲಾಘಿಸಿದರು. ಅಲ್ ಮದೀನಾ ಪ್ರದೇಶದ ಅಭಿವೃದ್ಧಿಗೆ ಅಗತ್ಯವಾದ ಅಲ್ಪಸಂಖ್ಯಾತರ ವಸತಿ ಶಾಲೆ ಅಗತ್ಯವಿದೆ. ಅದಕ್ಕೆ ತನ್ನಿಂದಾಗುವ ಸಹಾಯ ನೀಡುವುದಾಗಿ ತಿಳಿಸಿದರು.

ಸಮಾಜದಲ್ಲಿ ಸತ್ಪ್ರಜೆಯಾಗಿ ಬಾಳಲು ಇಂದಿನ ಕಾಲದಲ್ಲಿ ಶಿಕ್ಷಣ ಮುಖ್ಯ. ಈ ನಿಟ್ಟಿನಲ್ಲಿ ಅಲ್ ಮದೀನಾ ಸಂಸ್ಥೆಯ ಕೊಡುಗೆ ಮಹತ್ವದಾಗಿದೆ ಎಂದು ಖಾದರ್ ಶ್ಲಾಘಿಸಿದರು.

ಅಲ್ ಮದೀನಾ ಪ್ರದೇಶಕ್ಕೆ ಶಾದಿ ಮಹಲ್ : ಅಲ್ ಮದೀನಾ ಪ್ರದೇಶದಲ್ಲಿ ಶಾದಿ ಮಹಲ್ ನಿರ್ಮಿಸಲು ಈಗಾಗಲೇ ನಿರ್ಧರಿಸಲಾಗಿದೆ. ಜೊತೆಗೆ ಈ ಪ್ರದೇಶದಲ್ಲಿ ಅಲ್ಪಸಂಖ್ಯಾತರ ವಸತಿ ಶಾಲೆಯೊಂದನ್ನು ತೆರೆಯುವ ಉದ್ದೇಶ ಹೊಂದಲಾಗಿದೆ. ಈ ಬಗ್ಗೆ ಸ್ಥಳೀಯ ಶಾಸಕರ, ಸಚಿವರ ಸಹಕಾರ ಅಗತ್ಯ ಎಂದು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್.ಬಿ. ಅಬೂಬಕ್ಕರ್ ತಿಳಿಸಿದರು.

ಶಿಕ್ಷಣದಿಂದ ಸಾಮಾಜಿಕ ಬದಲಾವಣೆಯಾಗಬೇಕು. ಸಮಾಜದಲ್ಲಿ ಬಹಳ ಹಿಂದೆ ಶಿಕ್ಷಣದಿಂದ ವಂಚಿತರಾದ ವ್ಯಕ್ತಿಗಳು ಶೋಷಣೆಗೂ ಒಳಗಾಗಿದ್ದರು. ಸ್ವಾಭಿಮಾನಿಗಳಾಗಿ ಬದುಕಲು ಸಾಧ್ಯವಿಲ್ಲದ ಪರಿಸ್ಥಿತಿ ಇತ್ತು. ಆದರೆ, ಕಡ್ಡಾಯ ಶಿಕ್ಷಣ ಜಾರಿಗೆ ಬಂದ ನಂತರ ಪರಿಸ್ಥಿತಿ ಬದಲಾಗಿದೆ ಎಂದು ಬಂಟ್ವಾಳ ಶಾಸಕ ರಮಾನಾಥ ರೈ ತಿಳಿಸಿದರು.

ಶಿಕ್ಷಣ ಮರೀಚಿಕೆಯಾದ ವರ್ಗಕ್ಕೆ ಈಗಿನ ಕಾಲಘಟ್ಟದಲ್ಲಿ ಸಾಕಷ್ಟು ಅವಕಾಶಗಳಿವೆ. ಈ ಅವಕಾಶಗಳನ್ನು ಸಮಾಜದ ದುರ್ಬಲ, ದಲಿತ, ಅಲ್ಪಸಂಖ್ಯಾತ ವರ್ಗಗಳು ಬಳಸಿಕೊಂಡು ಉನ್ನತ ಸ್ಥಾನಕ್ಕೆ ಏರಬೇಕು ಎಂದು ರಮಾನಾಥ ರೈ ತಿಳಿಸಿದರು.

ಸಮಾರಂಭದಲ್ಲಿ ಜಿಲ್ಲಾ ಪಂಚಾಯತ ಸದಸ್ಯ ಎ.ಸಿ.ಭಂಡಾರಿ, ಬಂಟ್ವಾಳ ತಾಲೂಕು ಪಂಚಾಯತ್ ಸದಸ್ಯ ಉಮ್ಮರ್ ಫಜೀರ್, ಇಬ್ರಾಹಿಂ ಪಜೀರ್, ಅನ್ವರ್ ರೀಕೋ ಉಪಸ್ಥಿತರಿದ್ದರು.

ಅಲ್ ಮದೀನಾ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸಾಧುಕುಂಞ ಮಾಸ್ಟರ್ ಸ್ವಾಗತಿಸಿದರು. ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್‌ನ ಅಧ್ಯಕ್ಷ ಪಿ.ಎಂ. ಅಬ್ಬಾಸ್ ಮುಸ್ಲಿಯಾರ್ ದುವಾ ನೆರವೇರಿಸಿದರು. ವ್ಯವಸ್ಥಾಪಕ ಅಬ್ದುಲ್ ರಹಿಮಾನ್ ಮದನಿ ಪಡನ್ನ ಉಪಸ್ಥಿತರಿದ್ದರು.

ಪಿ.ಎಂ. ಅಬ್ಬಾಸ್ ಮುಸ್ಲಿಯಾರ್‌ರ ಸಾಧನೆ : ನರಿಂಗಾನದ ಗ್ರಾಮಾಂತರ ಪ್ರದೇಶದಲ್ಲಿ ದಾನಿಗಳ ಬಳಿ ಯಾಚಿಸಿ ಅಲ್ ಮದೀನಾ ಪೂರ್ವ ಪ್ರಾಥಮಿಕ, ಪ್ರಾಥಮಿಕ ಹಾಗು ಧಾರ್ಮಿಕ ಕೇಂದ್ರ ತೆರೆಯಲು ಕಾರಣರಾದ ಶೈಖುನಾ ಅಲ್ ಹಾಜ್ ಪಿ.ಎಂ. ಅಬ್ಬಾಸ್ ಮುಸ್ಲಿಯಾರ್‌ರ ಪರಿಶ್ರಮದ ಬಗ್ಗೆ ಎಲ್ಲ ಗಣ್ಯರು ಶ್ಲಾಘನೆ ವ್ಯಕ್ತಪಡಿಸಿದರು

Share: