ಬೆಂಗಳೂರು, ನವೆಂಬರ್ 1: ‘ರಾಜಕಾರಣದಲ್ಲಿ ಏರುಪೇರು ಸಹಜ. ಇದಕ್ಕೆ ಧೃತಿಗೆಡಬೇಡಿ ಯಡಿಯೂರಪ್ಪನವರೇ, ನಿಮ್ಮೊಂದಿಗೆ ನಾವಿದ್ದೇವೆ.’
-ಹೀಗಂತ ರೇಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಭರವಸೆ ನೀಡಿ ಅಚ್ಚರಿ ಮೂಡಿಸಿದರು.
ಭಾನುವಾರ ಮೇರುನಟ ಡಾ| ರಾಜಕುಮಾರ್ ಅಂಚೆ ಚೀಟಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಸ್ತುತ ನಡೆದಿರುವ ರಾಜಕೀಯ ಬೆಳವಣಿಗೆಗಳು ಬಿಜೆಪಿ ಪಕ್ಷದ ಆಂತರಿಕ ವಿಚಾರ. ಇದರಲ್ಲಿ ನಾವಾಗಲಿ ಅಥವಾ ಕಾಂಗ್ರೆಸ್ ಆಗಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಅಭಯ ನೀಡಿದರು. ನೆರೆ ಪರಿಸ್ಥಿತಿ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರ ಎಲ್ಲಾ ರೀತಿಯ ಬೆಂಬಲ ನೀಡಲಿದೆ ಎಂದೂ ಅವರು ತಿಳಿಸಿದರು. ಅನಂತರ ಡಾ| ರಾಜಕುಮಾರ್ ಅವರ ಗುಣಗಾನ ಮಾಡಿದ ಮುನಿಯಪ್ಪ, ರಾಜಕುಮಾರ್ ಅವರನ್ನು ನಟ ಎಂದು ಗುರುತಿಸುವುದಕ್ಕಿಂತ ಮಾನವೀಯ ಸಂದೇಶಗಳ ಪ್ರಚಾರಕ ಎಂದು ಪರಿಗಣಿಸಬೇಕು ಎಂದು ಹೇಳಿದರು.
ಸೌಜನ್ಯ: ಕನ್ನಡಪ್ರಭ