ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಮೈಸೂರು: ಸಮಾಜದಲ್ಲಿ ಮೇಲು-ಕೀಳು ಭಾವ ಹುಟ್ಟು ಹಾಕುತ್ತಿರುವ ಸರಕಾರ: ಗೋಹತ್ಯೆ ನಿಷೇಧ ಕಾಯ್ದೆ ಕುರಿತು ಡಾ.ಅರವಿಂದ ಮಾಲಗತ್ತಿ ವ್ಯಾಖ್ಯಾನ

ಮೈಸೂರು: ಸಮಾಜದಲ್ಲಿ ಮೇಲು-ಕೀಳು ಭಾವ ಹುಟ್ಟು ಹಾಕುತ್ತಿರುವ ಸರಕಾರ: ಗೋಹತ್ಯೆ ನಿಷೇಧ ಕಾಯ್ದೆ ಕುರಿತು ಡಾ.ಅರವಿಂದ ಮಾಲಗತ್ತಿ ವ್ಯಾಖ್ಯಾನ

Mon, 12 Apr 2010 02:39:00  Office Staff   S.O. News Service
ಮೈಸೂರು, ಎ.೧೧:  ಗೋಹತ್ಯೆ ನಿಷೇಧ ಕಾಯ್ದೆ ಮೂಲಕ ಸರಕಾರವೇ ಸಮಾಜದಲ್ಲಿ ಮೇಲು-ಕೀಳು ಎಂಬ ಭೇದ-ಭಾವವನ್ನು ಹುಟ್ಟುಹಾಕುತ್ತಿದೆ ಎಂದು ಸಾಹಿತಿ ಹಾಗೂ ಮೈಸೂರು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ.ಅರವಿಂದ ಮಾಲಗತ್ತಿ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರು ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನೆ ಮತ್ತು ವಿಸ್ತರಣ ಕೇಂದ್ರ ಹಾಗೂ ‘ನಿಜದನಿ’ ಪ್ರಕಾಶನದ ಸಂಯುಕ್ತ ಆಶ್ರಯದಲ್ಲಿ ನಗರದಲ್ಲಿ ಇಂದು ಏರ್ಪಡಿಸಲಾಗಿದ್ದ ದಲಿತ ಮಹಾಕವಿ, ಚಳವಳಿಗಾರ ದಿ.ಮುಳ್ಳೂರು ನಾಗರಾಜ್‌ರವರ ಪ್ರಥಮ ವಾರ್ಷಿಕ ಸ್ಮರಣೆ ಹಾಗೂ ‘ಮುಳ್ಳೂರ ವಚನಗಳು’ ಕೃತಿ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಗೋವು ಮಾತ್ರ ಶ್ರೇಷ್ಠ. ಇತರ ಪ್ರಾಣಿಗಳು ಕನಿಷ್ಠ. ಆದ್ದರಿಂದ ಗೋಹತ್ಯೆ ಮಾಡಬಾರದು ಮತ್ತು ಮಾಂಸಾಹಾರಿಗಳು ಇತರ ಪ್ರಾಣಿಗಳನ್ನು ತಿನ್ನಬಹುದು, ಗೋವನ್ನು ತಿನ್ನಬಾರದು. ಒಂದು ವೇಳೆ ತಿಂದರೆ ಅವರು ಸಮಾಜದಲ್ಲಿ ಕೀಳು ದರ್ಜೆಗೆ ಸೇರಿದ ದವರಾಗುತ್ತಾರೆ ಎಂಬುದು ಸರಕಾರದ ನಿಲುವಾಗಿದ್ದು, ಇದು ಅನ್ನದಲ್ಲಿ ವಿಷ ಬಿತ್ತುವ ಪರಿಕಲ್ಪನೆ ಎಂದರು.

ಪರಿಶಿಷ್ಟ ಜಾತಿಯಲ್ಲಿ ಎಡ-ಬಲ ಎಂಬುದು ಮುಠ್ಠಾಳತನದ, ರಾಕ್ಷಸಿ ಪ್ರವೃತ್ತಿಯ ಮತ್ತು ಭ್ರಮಾತ್ಮಕ ಅಪಕಲ್ಪನೆಯಾಗಿದ್ದು, ಜಾತಿಯ ಹೆಸರಿನಲ್ಲಿ ಒಳಜಾತಿಗಳ ವಿಂಗಡಣೆ ಸರಿಯಲ್ಲ ಎಂದು ಅವರು ಹೇಳಿದರು.

ದಿ.ಮುಳ್ಳೂರು ನಾಗರಾಜ್‌ರವರು ದಲಿತ ವರ್ಗದಿಂದ ಬಂದವರಾಗಿದ್ದರೂ ಜಾತಿಯ ಪರಿಧಿಯನ್ನು ಮೀರಿ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಿದ್ದಾರೆ. ಆದ್ದರಿಂದ ಅವರನ್ನು ಕವಿ ಎಂದರೆ ಸಾಕು, ದಲಿತ ಕವಿ ಎನ್ನಬಾರದು ಎಂದು ಪ್ರತಿಪಾದಿಸಿದರು.

ದಲಿತ ಸಾಹಿತ್ಯ ಕ್ಷೇತ್ರದಲ್ಲಿ ದೇವನೂರು ಮಹಾದೇವ ಮತ್ತು ಸಿದ್ದಲಿಂಗಯ್ಯರವರ ಮಾದರಿಗಿಂತ ಮುಳ್ಳೂರು ನಾಗರಾಜ್‌ರ ಮಾದರಿ ವಿಶಿಷ್ಟವಾದುದು. ದೇವನೂರರ ಬರವ ಣಿಗೆಯಲ್ಲಿ ಬದುಕಿನ ಸಂಕೀರ್ಣ ತನವನ್ನು ಅಭಿವ್ಯಕ್ತಿಸುವ ಕ್ರಮ ಓದುಗರ ಗಮನವನ್ನು ಸೆಳೆಯುವಂತಿದ್ದರೆ, ಮುಳ್ಳೂರರ ಸಾಹಿತ್ಯ ಪ್ರಬುದ್ಧತೆಯಿಂದ  ಕೂಡಿದ್ದಾಗಿದೆ ಎಂದು ಮಾಲಗತ್ತಿ ವ್ಯಾಖ್ಯಾನಿಸಿದರು.

ದೇವನೂರು ಮತ್ತು ಸಿದ್ದಲಿಂಗಯ್ಯ ನವರಿಗಿಂತ ಮುಳ್ಳೂರು ಒಳ್ಳೆಯ ಸಾಹಿತಿಯಾಗಿದ್ದು, ಹೆಚ್ಚು ಬರವಣಿಗೆಯನ್ನು ಕೊಟ್ಟವರಾಗಿದ್ದಾರೆ. ಮುಳ್ಳೂರರ ಸಾಹಿತ್ಯದಲ್ಲಿ ಸಿಟ್ಟು ಮನೆ ಮಾಡಿರುತ್ತದೆ ಎಂದರು.

‘ಮುಳ್ಳೂರ ವಚನಗಳು’ ಕೃತಿಯಲ್ಲಿ ೬೦೪ ವಚನಗಳಿದ್ದು, ಎಲ್ಲವೂ ಮೌಲ್ಯಿಕ ವಾಗಿವೆ. ಸಾಂಪ್ರದಾಯಿಕ ಮಾದರಿಯ ವಚನ ಸಾಹಿತ್ಯಕ್ಕಿಂತ ಮುಳ್ಳೂರರ ವಚನ ಗಳು ವಿಭಿನ್ನ ವಾಗಿವೆ.ಈ ವಚನಗಳಲ್ಲಿ ಹೇಳುವ ಮತ್ತು ಕೇಳುವ ಎರಡೂ ಕೆಲಸವನ್ನು ಕವಿಯೇ ನಿರ್ವಹಿ ಸುತ್ತಿರುವುದು ವಿಶೇಷ ವಾಗಿದೆ ಎಂದು ಅವರು ಹೇಳಿದರು.

ಕೃತಿ ಬಿಡುಗಡೆ ಮಾಡಿ ಮಾತನಾ ಡಿದ ಸಾಹಿತಿ ಡಾ.ಮೂಡ್ನಕೂಡು ಚಿನ್ನಸ್ವಾಮಿ, ದಲಿತ ಸಾಹಿತಿಗಳು ಬುದ್ಧ ಮಾರ್ಗದಲ್ಲಿ ಬರೆಯುವುದನ್ನು ರೂಢಿಸಿಕೊಳ್ಳಬೇಕು. ಅದಕ್ಕಾಗಿ ಬೌದ್ಧ ಸಾಹಿತ್ಯವನ್ನು ಅಧ್ಯಯನ ಮಾಡಬೇಕು. ಹೀಗಾದರೆ ಭವಿಷ್ಯದಲ್ಲಿ ‘ಬೌದ್ಧೀಯ ದಲಿತ ಸಾಹಿತ್ಯ’ ಎಂಬ ಹೊಸ ಪರಂಪರೆಯನ್ನೇ ಹುಟ್ಟುಹಾಕಬಹುದು ಎಂದು ಸಲಹೆ ನೀಡಿದರು.

ಕೃತಿ ಕುರಿತು ಡಾ.ವಿ. ಮುನಿವೆಂಕಟಪ್ಪ ಮಾತನಾಡಿದರು. ಶಾಸಕ ಹಾಗೂ ಮಾಜಿ ಕೇಂದ್ರ ಸಚಿವ ವಿ.ಶ್ರೀನಿವಾಸ ಪ್ರಸಾದ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣ ಕೇಂದ್ರದ ನಿರ್ದೇಶಕ ಡಾ.ಜೆ.ಸೋಮಶೇಖರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. 

‘ನಿಜದನಿ’ ಪ್ರಕಾಶನದ ಶಾಂತರಾಜು ಉಪಸ್ಥಿತರಿದ್ದರು. ಪತ್ರಕರ್ತ ಮುಳ್ಳೂರು ರಾಜು ಕಾರ್ಯಕ್ರಮ ನಿರ್ವಹಿಸಿದರು. ಕಲಾವಿದ ಸಿ.ಎಂ.ನರಸಿಂಹಮೂರ್ತಿ ಮತ್ತು ತಂಡದವರು ಹೋರಾಟದ ಗೀತೆಗಳನ್ನು ಹಾಡಿದರು

Share: