ಉಡುಪಿ, ಮಾರ್ಚಿ 10: ಜಾತಿ-ಮತ, ಬೇಧ-ಭಾವ, ಉಚ್ಚ-ನೀಚ, ಮೇಳು-ಕೀಳು, ವರ್ಗ-ವರ್ಣ, ಬಿಳಿಯ-ಕರಿಯನೆಂಬ ಅಸಮಾನತೆಯ ಅಂಧಕಾರದೊಳಗೆ ಬಿದ್ದು ತೊಳಲಾಡುತ್ತಿದ್ದ ಅಂದಿನ ಸಮಾಜದಲ್ಲಿ ಮಾನವೀಯತೆಯ ಸಂದೇಶವನ್ನು ನೀಡಿ ಅದನ್ನು ಅರೇಬಿಯಾದಲ್ಲಿ 1400 ವರ್ಷಗಳ ಹಿಂದೆ ಪ್ರವಾದಿ ಮುಹಮ್ಮದ್(ಸ)ರವರು ಅನುಷ್ಟಾನಕ್ಕೆ ತಂದಿದ್ದರು. ಸಮಾಜದಲ್ಲಿ ಬೇರು ಬಿಟ್ಟಿರುವ ಅಸಮಾನತೆಯ ವಿರುದ್ಧ ಕೈ ಕಟ್ಟಿ ಕುಳಿತಿರುವುದು ಸತ್ಯವಿಷ್ವಾಸಿಯ ಲಕ್ಷಣವಲ್ಲ. ಎಂದು ಲಾಲ್ ಹುಸೈನ್ ಕಂದಗಲ್ರವರು ಕೊಳಂಬೆಯಲ್ಲಿ ಸೀರತ್ ಆಚರಣೆಯ ಪ್ರಯುಕ್ತ ಹಮ್ಮಿಕೊಂಡ ಕಾರ್ಯಕ್ರಮದ ಸಮಾರೋಪ ಭಾಷಣದಲ್ಲಿ ಹೇಳಿದರು.

ಮುಂದುವರಿಯುತ್ತಾ ಅವರು "ಅನಾಗರಿಕ ಕಾಲದಲ್ಲಿ ಇದ್ದಂತಹ ಕೆಡುಕುಗಳು ಇಂದಿನ ನಾಗರಿಕ ಕಾಲದಲ್ಲಿಯೂ ತೀವ್ರವಾಗಿ ಹರಡುತ್ತಿದೆ, ಇದನ್ನು ನಿವಾರಿಸುವ ಪ್ರಮುಖ ಜವಾಬ್ದಾರಿ ಪ್ರವಾದಿ ಮುಹಮ್ಮದ್ (ಸ) ರವರ ಆದರ್ಶಗಳನ್ನು ಅನುಸರಿಸುವವರ ಮೇಲೆ ಕಡ್ಡಾಯವಾಗಿದ್ದು, ಪ್ರವಾದಿಯವರ ಜೀವನವು ಮಾದರಿಯಾಗಬೇಕಾಗಿದೆ ಎಂದರು.
ದಿಕ್ಸೂಚಿ ಭಾಷಣ ಮಾಡಿದ ಅಕ್ಬರ್ ಅಲಿ ಉಡುಪಿ ಇವರು, ಪ್ರವಾದಿ ಮುಹಮ್ಮದ್(ಸ)ರವರನ್ನು ಹೆಚ್ಚು ಪ್ರೀತಿಸುವವರಲ್ಲಿ, ಅವರನ್ನು ಹೆಚ್ಚು ಅನುಸರಿಸುವವರಲ್ಲಿ, ಅವರ ಸಂದೇಶಗಳನ್ನು ಹೆಚ್ಚು ಪ್ರಚಾರ ಮಾಡುವವರಲ್ಲಿ, ಅವರ ಜೀವನ ಚರಿತ್ರೆಯ ಬಗ್ಗೆ ಜನರಿಗೆ ತಿಳಿಯುವಂತೆ ಸಾಹಿತ್ಯಗಳನ್ನು ರಚಿಸುವುದರಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಪ್ರಥಮ ಸ್ಥಾನದಲ್ಲಿ ಇದೆ. ಇಂದು ಮುಸ್ಲಿಮ್ ಸಮುದಾಯವು ಪ್ರವಾದಿ ಮುಹಮ್ಮದ್(ಸ) ಯಾವ ಕೆಲಸವನ್ನು ನೆರವೇರಿಸಲು ಆದೇಶಿಸಿದ್ದಾರೋ ಅದನ್ನು ನೆರವೇರಿಸದೆ ಕೆಲವು ಸೀಮಿತ ದಿನಗಳಲ್ಲಿ ಮಾತ್ರ ಅವರ ಮೇಲೆ ಪ್ರೇಮವನ್ನು ಪ್ರಕಟಿಸುವುದು ಇಂದು ಕಂಡುಬರುತ್ತಿದೆ. ಸಕಲ ಮಾನವರಿಗಾಗಿ ಸೃಷ್ಟಿಕರ್ತನಿಂದ ಕಳುಹಿಸಲ್ಪಟ್ಟ ಪ್ರವಾದಿ ಮುಹಮ್ಮದ್(ಸ)ರವರ ಸಂದೇಶವನ್ನು ಜಗತ್ತಿನ ಜನರ ಮುಂದೆ ಇಡಬೇಕಾಗಿದೆ.
ಮತ್ತೋರ್ವ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮೌಲಾನ ಮುಹಮ್ಮದ್ ಆದಮ್ ಹೂಡೆ ಇವರು, ಪ್ರವಾದಿ ಮುಹಮ್ಮದ್(ಸ)ರವರ ಮಾರ್ಗದರ್ಶನದಂತೆ ಜೀವನ ಸಾಗಿಸುವುದು ನೈಜ ಸತ್ಯವಿಶ್ವಾಸಿ(ಮೂಮಿನ್)ಯ ಲಕ್ಷಣವಾಗಿದ್ದು ಅದರಂತೆ ನಾವು ಜೀವಿಸಬೇಕು ಎಂದರು.
ಹಾಫಿಝ್ ಮುಹಮ್ಮದ್ ಯೂನುಸ್ರವರ ಕುರ್ಆನ್ ಪಠಣದೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ಯು.ಅನ್ವರ್ ಅಲಿ ಕಾಪು ಸ್ವಾಗತ ಭಾಷಣ ಮಾಡಿ ಕಾರ್ಯಕ್ರಮ ನಿರೂಪಿಸಿದರು. ಮುನೀರ್ ಮುಹಮ್ಮದ್ರವರು ಧನ್ಯವಾದ ನೀಡಿದರು.
ವೇದಿಕೆಯಲ್ಲಿ ಶಾಂತಿನಗರ ಮದೀನ ಮಸೀದಿಯ ಅಧ್ಯಕ್ಷ ಅಬ್ದುಲ್ ಗಫೂರ್ ಸಾಹೇಬ್, ಕಾರ್ಯದರ್ಶಿ ಶಮೀಮ್ ಸಾಹೇಬ್, ನಾಸಿರ್ ಶೇಖ್ ಕುಕ್ಕಿಕಟ್ಟೆ, ಇಸ್ಮಾಯೀಲ್ ಮೀರಾ, ಮುನೀರ್ ಮುಹಮ್ಮದ್ರವರು ಉಪಸ್ಥಿತರಿದ್ದರು.