ಬೆಂಗಳೂರು, ಜನವರಿ 9:ರಾಜ್ಯದಲ್ಲಿ ಚರ್ಚ್ಗಳ ಮೇಲೆ ನಡೆದ ಸರಣಿ ದಾಳಿ ಪ್ರಕರಣಗಳ ಕುರಿತು ವಿಚಾರಣೆ ನಡೆಸಲು ರಾಜ್ಯ ಸರ್ಕಾರ ನೇಮಿಸಿರುವ ನ್ಯಾಯಮೂರ್ತಿ ಬಿ.ಕೆ. ಸೋಮಶೇಖರ್ ಆಯೋಗಕ್ಕೆ ವರದಿ ಸಲ್ಲಿಸಲು ಮತ್ತೊಂದು ಕಾಲಾವಧಿ ವಿಸ್ತರಿಸಬೇಕೆಂಬ ಮನವಿಯನ್ನು ಸಾರಾಸಗಟಾಗಿ ತಳ್ಳಿಹಾಕಿರುವ ರಾಜ್ಯ ಸರ್ಕಾರ, ಈ ಮಾಸಾಂತ್ಯದೊಳಗೆ ವರದಿ ಸಲ್ಲಿಸುವಂತೆ ಹೇಳಿದೆ.
ಸರ್ಕಾರ ಈ ಕುರಿತು ಆದೇಶವೊಂದನ್ನು ಹೊರಡಿಸಿದ್ದು, ನ್ಯಾಯಮೂರ್ತಿ ಬಿ.ಕೆ. ಸೋಮಶೇಖರ್ ಆಯೋಗ ಜನವರಿ ೩೧ ಇಲ್ಲವೆ ಅದಕ್ಕೂ ಮುನ್ನ ತನ್ನ ವರದಿ ಸಲ್ಲಿಸಬೇಕೆಂದು ಹೇಳಿದೆ. ಅಲ್ಲದೇ ಸದ್ಯದ ಪರಿಸ್ಧಿತಿಯಲ್ಲಿ ಆಯೋಗಕ್ಕೆ ಮತ್ತೊಂದು ಕಾಲಾವಧಿಯನ್ನು ವಿಸ್ತರಿಸಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಕಳೆದ ೨೦೦೮ ರ ಸೆಪ್ಟಂಬರ್ನಲ್ಲಿ ದಕ್ಷಿಣ ಕನ್ನಡ, ಬೆಂಗಳೂರು ಸೇರಿದಂತೆ ಹಲವೆಡೆ ನಡೆದ ಚರ್ಚ್ಗಳ ಮೇಲಿನ ಸರಣಿ ದಾಳಿ ಕುರಿತು ವಿಚಾರಣೆ ನಡೆಸಲು ಕರ್ನಾಟಕ, ಆಂಧ್ರಪ್ರದೇಶದ ನಿವೃತ್ತ ನ್ಯಾಯಮೂರ್ತಿ ಬಿ.ಕೆ. ಸೋಮಶೇಖರ್ ಆಯೋಗವನ್ನು ರಚಿಸಿ ಮೂರು ತಿಂಗಳ ಒಳಗಾಗಿ ತನ್ನ ವರದಿ ಸಲ್ಲಿಸುವಂತೆ ಸೂಚಿಸಿತ್ತು.
ಈ ಸಮಿತಿ ರಚನೆಯಾದ ನಂತರ ಐದು ಬಾರಿ ಆಯೋಗದ ಅವಧಿಯನ್ನು ವಿಸ್ತರಿಸಿತ್ತು. ಆದರೆ ಈಗ ಮತ್ತೆ ಕಾಲಾವಕಾಶ ನೀಡುವಂತೆ ಮಾಡಿದ ಮನವಿಗೆ ಸ್ಪಂದಿಸಲು ಸರ್ಕಾರಕ್ಕೆ ಮನಸ್ಸಿದ್ದಂತೆ ಕಾಣುತ್ತಿಲ್ಲ. ಆದರೆ ಸರ್ಕಾರ ವರದಿಗಾಗಿ ಎದುರುನೋಡುತ್ತಿದೆ ಎಂದು ಗೃಹ ಸಚಿವಾಲಯದ ಉನ್ನತ ಮೂಲಗಳು ತಿಳಿಸಿವೆ.
ಕಳೆದ ಡಿಸೆಂಬರ್ ೧೯ ರಿಂದ ಅನ್ವಯವಾಗುವಂತೆ ಆಯೋಗದ ಅವಧಿಯನ್ನು ಒಂದು ವರ್ಷ ವಿಸ್ತರಿಸಬೇಕು. ಇನ್ನೂ ಸಾಕಷ್ಟು ವಿಚಾರಣಾ ಕ್ರಮಗಳು ಬಾಕಿ ಇವೆ ಎಂದು ಆಯೋಗ ಸರ್ಕಾರಕ್ಕೆ ಮನವಿ ಮಾಡಿತ್ತು. ಆದರೆ ಸರ್ಕಾರ ಇದಕ್ಕೆ ಪೂರ್ಣ ಪ್ರಮಾಣದಲ್ಲಿ ಸ್ಪಂದಿಸದೇ ಜನವರಿ ೩೧ ರ ವರೆವಿಗೆ ಮಾತ್ರ ಕಾಲಾವಕಾಶ ನೀಡಿತ್ತು.
ಮೊದಲ ಬಾರಿಗೆ ಸರ್ಕಾರ ೨೦೦೮ ರ ಡಿಸೆಂಬರ್ ನಿಂದ ಮೂರು ತಿಂಗಳ ಕಾಲಾವಕಾಶ ನೀಡಿತ್ತು. ಕ್ರಮೇಣ ಮಾರ್ಚ್ ೧೮ ರ ವರೆವಿಗೆ ಮೂರು ತಿಂಗಳು ಅವಕಾಶ ಕೊಟ್ಟಿತ್ತು. ಅದಾದ ಮೇಲೆ ಜೂನ್ ೧೯ ರಿಂದ ಆರು ತಿಂಗಳ ಕಾಲ ಅವಧಿಯನ್ನು ವಿಸ್ತರಿಸಿತ್ತು.
ಭಜರಂಗಕ್ಕೆ ಸೇರಿದ ಹಲವು ಧಾರ್ಮಿಕ ಮತಾಂಧರು ಚರ್ಚ್ಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಿದ್ದರು. ಮತಾಂತರ ಮಾಡಲಾಗುತ್ತಿದೆ ಎಂದು ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡದಲ್ಲಿ ೨೦೦೮ ರ ಸೆಪ್ಟಂಬರ್ನಲ್ಲಿ ನಿರಂತರ ಚರ್ಚ್ಗಳ ಮೇಲೆ ದಾಳಿ ನಡೆದಿತ್ತು. ಮಂಗಳೂರು ನಗರದಲ್ಲಿ ತೀವ್ರ ಉದ್ವಿಗ್ನ ಪರಿಸ್ಧಿತಿ ನಿರ್ಮಾಣವಾಗಿತ್ತು.
ಚರ್ಚ್ಗಳ ಮೇಲೆ ದಾಳಿಯಾಗುತ್ತಿದ್ದರೂ ಕೂಡ ರಾಜ್ಯ ಸರ್ಕಾರ ದುಷ್ಕರ್ಮಿಗಳ ಮೇಲೆ ಕಠಿಣ ಕ್ರಮ ಕೈಗೊಂಡಿರಲಿಲ್ಲ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸಂವಿಧಾನದ ೩೫೫ ನೇ ವಿಧಿಯನ್ವಯ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿತ್ತು. ಆನಂತರ ಸರ್ಕಾರ ಭಜರಂಗದಳದ ಸಂಚಾಲಕ ಮಹೇಂದ್ರ ಕುಮಾರ್ ಸೇರಿ ಹಲವರನ್ನು ಬಂಧಿಸಿತ್ತು. ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಿತ್ತು.
ಕೋಮುದ್ವೇಷ ಕೆರಳಿಸುತ್ತಿರುವ ಭಜರಂಗದಳ ಸಂಘಟನೆಯನ್ನು ನಿಷೇಧಿಸಬೇಕೆಂದು ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗ ಪ್ರಧಾನಿ ಡಾ: ಮನಮೋಹನ್ ಸಿಂಗ್ ಅವರಿಗೆ ಶಿಫಾರಸ್ಸು ಮಾಡಿತ್ತು. ಈ ಎಲ್ಲಾ ಬೆಳವಣಿಗೆಯ ನಂತರ ರಾಜ್ಯ ಸರ್ಕಾರ ಈ ಕುರಿತು ಸಿಓಡಿ ತನಿಖೆಗೂ ಆದೇಶಿಸಿತ್ತು.