ಬೆಂಗಳೂರು, ಜನವರಿ 6:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಈಗಾಗಲೇ ನಿಗದಿ ಪಡಿಸಿರುವಂತೆ ಚುನಾವಣೆ ನಡೆಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದ್ದು, ಈ ಹಿಂದೆ ಪ್ರಕಟಿಸಿರುವ ವಾರ್ಡ್ ಮೀಸಲಾತಿ ಪ್ರಕಾರವೇ ಫೆಬ್ರವರಿ ೨೧ ರಂದು ಮತದಾನ ನಡೆಸುವಂತೆ ಆದೇಶ ನೀಡಿದೆ.
ಸರ್ಕಾರ ಪ್ರಕಟಿಸಿದ್ದ ಬಿಬಿಎಂಪಿ ವಾರ್ಡ್ ಮೀಸಲಾತಿಯನ್ನು ರದ್ದುಗೊಳಿಸಿದ್ದ ರಾಜ್ಯ ಹೈಕೋರ್ಟ್ನ ತೀರ್ಪನ್ನ ರದ್ದುಮಾಡಿರುವ ಸುಪ್ರೀಕೋರ್ಟ್ ನವಂಬರ್ ೩೧ ರಂದು ಪ್ರಕಟಿಸಿರುವ ಮೀಸಲಾತಿ ಪಟ್ಟಿಯಂತೆ ಚುನಾವಣೆ ನಡೆಸುವಂತೆ ನಿರ್ದೇಶಿಸಿದೆ.
ಯಾವುದೇ ಕಾರಣಕ್ಕೂ ಈ ಹಿಂದೆ ನಿಗದಿಯಾಗಿರುವಂತೆ ಫೆಬ್ರವರಿ ೨೧ ರಂದು ಚುನಾವಣೆ ನಡೆಯಬೇಕು. ಚುನಾವಣೆ ದಿನಾಂಕವನ್ನು ಮತ್ತೆ ಮುಂದೂಡದಂತೆ ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಹಾಗೂ ನ್ಯಾಯಮೂರ್ತಿ ಚೌಹಾಣ್ ರವರನ್ನೊಳಗೊಂಡ ವಿಭಾಗಿಯ ಪೀಠ ಸೂಚಿಸಿದೆ.
ಸುಪ್ರೀಂ ಕೋರ್ಟ್ನ ಇಂದಿನ ತೀರ್ಪಿನಿಂದಾಗಿ ಪಾಲಿಕೆ ಚುನಾವಣೆ ನಡೆಯುವುದೋ ಇಲ್ಲವೋ ಎನ್ನವ ಅನಿಶ್ಚತೆಗಳಿಗೆ ತೆರೆಬಿದ್ದಿದ್ದು, ಚುನಾವಣೆ ನಡೆಸಲು ಇದೀಗ ಹಾದಿ ಸುಗಮವಾಗಿದೆ.
ತೀರ್ಪಿಗೆ ಬದ್ಧ: ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತೀರ್ಪಿನಂತೆ ಸರ್ಕಾರ ನಡೆದುಕೊಳ್ಳಲಿದ್ದು, ಪ್ರಕಟಿತ ವೇಳಾ ಪಟ್ಟಿಯಂತೆ ಚುನಾವಣೆ ನಡೆಯಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.