ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗೆ ಕೇಂದ್ರ ಸರಕಾರ ಅಸ್ತು ಎನ್ನುವುದರ ಮೂಲಕ ಆಂದ್ರ ಪ್ರದೇಶದಾದ್ಯಂತ ವಿವಿಧ ಪ್ರದೇಶದಲ್ಲಿರುವ ಒಂದೇ ಭಾಷಿಕರು ಸಂಘರ್ಷಕ್ಕೆ ಇಳಿಯುವಂತಾಗಿ ಗಂಭೀರ ಸನ್ನಿವೇಶ ಸೃಷ್ಟಿಯಾಗಿದೆ. ಇದು ಅಷ್ಟಕ್ಕೇ ನಿಲ್ಲದೇ ದೇಶದ ಹಲವಾರು ರಾಜ್ಯಗಳನ್ನು ವಿಭಜಿಸುವ ಪ್ರತ್ಯೇಕವಾದಿ ಬೇಡಿಕೆಗಳು ಪುಟಿದೇಳುವಂತೆ ಮಾಡಿದೆ. ಈಗಾಗಲೇ ಗೂರ್ಖಾಲ್ಯಾಂಡ್ ರಚನೆಗಾಗಿ ಹಲವಾರು ಬಂದ್, ಚಳುವಳಿ ನಡೆದಿವೆ. ಅದೇ ರೀತಿ ಪ್ರತೇಕ ವಿದರ್ಭ, ತಮಿಳುನಾಡು, ಹಿಮಾಚಲ, ಇತ್ಯಾದಿಗಳಲ್ಲಿ ಅಂತಹುದೇ ಧ್ವನಿ ಎದ್ದಿವೆ. ಹಿಂದೆ ಭಾಷಾವಾರು ಪ್ರಾಂತ್ಯಗಳ ರಚನೆಗಾಗಿ ನಡೆದ ತ್ಯಾಗ ಬಲಿದಾನಗಳ ಪರಂಪರೆಯನ್ನು ಬಲಿಕೊಡುವ ಷಡ್ಯಂತ್ರಗಳು ನಡೆದಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.
ಈ ಪರಿಣಾಮವು ಕರ್ನಾಟಕದಲ್ಲಿಯೂ ರಾಜ್ಯವನ್ನು ವಿಭಜಿಸುವಂತಹ ಕೂಗಿನಲ್ಲಿ ಧ್ವನಿಸಿದೆ. ಹಿಂದಿನಿಂದ ಕೇಳುತ್ತ ಬಂದಿದ್ದ ಆದರೆ ಈಗ ಜನಬಲವಿಲ್ಲದೆ ಕ್ಷೀಣವಾಗಿದ್ದ ಪ್ರತ್ಯೇಕ ಕೊಡಗು ರಾಜ್ಶ, ಹೈದ್ರಾಬಾದ ಕರ್ನಾಟಕ, ಉತ್ತರ ಕರ್ನಾಟಕ ರಾಜ್ಯಗಳ ಬೇಡಿಕೆಗೆ ಚಾಲನೆ ದೊರೆತಿದೆ. ಇತ್ತೀಚೆಗೆ ತುಳು ರಾಜ್ಯದ ಪ್ರಸ್ತಾಪವೂ ಬಂದಿರುವುದು ಜನತೆಯ ಐಕ್ಯತೆಗೆ ಒದಗುತ್ತಿರುವ ಅಪಾಯದ ಸೂಚನೆಯನ್ನು ನೀಡಿದೆ.
ವಿಶೇಷವಾಗಿ ಪ್ರತ್ಯೇಕ ಹೈದ್ರಾಬಾದ ಕರ್ನಾಟಕ ರಾಜ್ಯ ರಚನೆಯಾಗಬೇಕೆಂದು ಕೆಲವರು ಕೇಳಿದರೆ, ಸಂವಿಧಾನದ 371ನೇ ಕಲಮಿಗೆ ಈ ಪ್ರದೇಶ ಸೇರಿಸಬೇಕೆಂದು ಮತ್ತೊಂದು ಬೇಡಿಕೆಯಾಗಿದೆ. ಇಂತಹ ಪ್ರತ್ಯೇಕತೆಯ ಕೂಗು ಎತ್ತಿದವರು ನೀಡುವ ಕಾರಣ ಈ ಪ್ರದೇಶಗಳು ಹಿಂದುಳಿದಿವೆ ಅಭಿವೃದ್ಧಿ ಕಾಣದಾಗಿವೆ ಎಂಬುದು.
ಈ ಪ್ರದೇಶಗಳು ಇತರೆ ಪ್ರದೇಶಗಳಿಗಿಂತ ಅತ್ಯಂತ ಹಿಂದುಳಿದಿವೆ ಎಂಬುದರಲ್ಲಿ ಅನುಮಾನವಿಲ್ಲ. ಅದೇ ರೀತಿ ಮುಂದುವರಿದ ಪ್ರದೇಶಗಳು ಎನ್ನಲಾಗುವ ದಕ್ಷಿಣ ಕರ್ನಾಟಕದಂತಹ ಕಡೆಗಳಲ್ಲಿಯೂ ಈಗಲೂ ಹಲವಾರು ತಾಲ್ಲೂಕುಗಳು ಹೈದ್ರಾಬಾದ ಕರ್ನಾಟಕ, ಉತ್ತರ ಕರ್ನಾಟಕದ ತಾಲ್ಲೂಕು ಗಳಿಗಿಂತಲೂ ಬೇರೆಯಂತಿಲ್ಲ್ಲದಿರುವುದನ್ನು ಡಾ.ನಂಜುಂಡಪ್ಪ ನವರ ಅಧ್ಯಯನ ವರದಿ ಗುರುತಿಸಿದೆ. ಅಸಮಾನ ಬೆಳವಣಿಗೆ, ಅನಭಿವೃದ್ಧಿ, ಪ್ರಾದೇಶಿಕ ಅಸಮತೋಲನಗಳು ಬಂಡವಾಳಶಾಹಿ ಭೂಮಾಲಕ ವ್ಯವಸ್ಥೆಯ ಅನಿವಾರ್ಯ ಸೃಷ್ಠಿಗಳು ಎಂಬುದನ್ನು ಗಮನಿಸಬೇಕಿದೆ. ಈಗಲೂ ಈ ಪ್ರದೇಶಗಳು ಅಭಿವೃದ್ಧಿ ಸಾಧಿಸಬೇಕಾದರೆ ಕಾರ್ಷಿಕ-ಕೈಗಾರಿಕೆ, ಶಿಕ್ಷಣ, ಸಾಮಾಜಿಕ ರಂಗಗಳಲ್ಲಿ ಮೂಲಭೂತ ಬದಲಾವಣೆ ತರುವಂತಹ ಕ್ರಮಗಳನ್ನು ಕೈಗೊಳ್ಳಬೇಕು. ಆದರೆ ಇಲ್ಲಿಯವರೆಗೂ ಕಾಂಗ್ರೆಸ್ನಿಂದ ಬಿಜೆಪಿವರೆಗಿನ ಆಡಳಿತ ನಡೆಸಿದ ಯಾವ ಸರಕಾರಗಳೂ ಅಂತಹ ಕ್ರಮಗಳನ್ನು ಕೈಗೆತ್ತಿಕೊಂಡಿಲ್ಲ. ಕೇವಲ ತೋರಿಕೆಯ ಅಭಿವೃದ್ಧಿಯನ್ನು ಮಾತ್ರ ಮಾಡುತ್ತಿವೆ. ಮತ್ತು ಅದರ ಹೆಸರಿನಲ್ಲಿ ಆಡಳಿತ ಪಕ್ಷದ ನಾಯಕರು ಕಂಟ್ರಾಕ್ಟ್ದಾರರು ಹಣ ಕೊಳ್ಳೆ ಹೊಡೆಯುತ್ತಿದ್ದಾರೆ.
ಪ್ರತ್ಯೇಕ ರಾಜ್ಯ ರಚನೆಯಾಗಿಬಿಟ್ಟರೆ ಅಭಿವೃದ್ಧಿ ತಾನಾಗಿಯೇ ಆಗುತ್ತದೆ ಎಂಬುದು ಆಧಾರವೇ ಇಲ್ಲದ ಅತ್ಯಂತ ಬೊಗಳೆ ಮಾತು ಎಂಬುದು ಸ್ಪಷ್ಟವಿದೆ. ಈಗಾಗಲೇ ರಚನೆಯಾಗಿರುವ ಜಾರ್ಖಂಡ್, ಉತ್ತರಾಂಚಲ, ಛತ್ತೀಸ್ಘಡ ಗಳಂತಹ ರಾಜ್ಯಗಳ ಅನುಭವವೇನು? ಬಡತನ ದಾರಿದ್ರ್ಯ ತಾಂಡವವಾಡುತ್ತಿದೆ. ಏನಾದರೂ ಅಭಿವೃದ್ಧಿ ಕೈಗೊಳ್ಳಬೇಕೆಂದರೆ ನಿತ್ಯದ ಖರ್ಚುಗಳಿಗಾಗಿ ಕೇಂದ್ರ ಸರಕಾರದ ಮುಂದೆ ಕೈ ಒಡ್ಡಿ ಬೇಡುತ್ತ ನಿಲ್ಲುವುದು ಸಾಮಾನ್ಯವಾಗಿದೆ. ಮಾತ್ರವಲ್ಲ ಜನಪ್ರತಿನಿಧಿಗಳ ಸಂಖ್ಯೆಯು ಕಡಿಮೆಯಾಗಿ ರಾಜಕೀಯ ಅಸ್ಥಿರತೆ ಸದಾ ತಲೆದೋರುತ್ತ ಇದೆ. ಹೀಗೆ ದುರ್ಬಲಗೊಂಡ ಆರ್ಥಿಕ ರಾಜಕೀಯ ಸ್ಥಿತಿಯಲ್ಲಿ ರಾಜ್ಯದ ಸಂಪನ್ಮೂಲಗಳನ್ನು ಮನಸೋ ಇಚ್ಛೆಯಂತೆ ಲೂಟಿ ಮಾಡಲು ಅವಕಾಶ ನೀಡಿದಂತಾಗಿದೆ. ಆದ್ದರಿಂದ ಪ್ರಾದೇಶಿಕ ಅಸಮಾನತೆ, ಹಿಂದುಳಿದಿರುವಿಕೆ ಅನಭಿವೃದ್ಧಿ ತೊಲಗಿಸಲು ಆಯಾ ರಾಜ್ಯ ಹಾಗೂ ಕೇಂದ್ರ ಸರಕಾರಗಳು ವಿಶೇಷವಾದ ನೆರವು, ಮೂಲಭೂತ ಬದಲಾವಣೆ ತರುವ ನೀತಿಗಳು ಹಾಗೂ ಅದರ ಜಾರಿಯೊಂದ ರಿಂದಲೇ ಸಾಧ್ಯ. ಇದಕ್ಕಾಗಿ ಇಡೀ ರಾಜ್ಯದ ಎಲ್ಲಾ ಪ್ರದೇಶಗಳ ಜನತೆಯ ಪ್ರಜಾಸತ್ತಾತ್ಮಕ ಚಳುವಳಿಯ ಬಲದಿಂದಲೇ ಅದನ್ನು ಸಾಧಿಸಲು ಸಾಧ್ಯ.
ಪ್ರತ್ಯೇಕತೆಯ ಕೂಗು ಎಬ್ಬಿಸುವವರ ರಾಜಕೀಯ ಹಿತಾಸಕ್ತಿಯನ್ನು ಗಮನಿಸಬೇಕು. ಹೈದ್ರಾಬಾದ ಕರ್ನಾಟಕದಂತಹ ಕಡೆಗಳಲ್ಲಿ ಪ್ರತ್ಯೇಕ ರಾಜ್ಯದ ಪ್ರಶ್ನೆ ಎತ್ತಿದವರು ಇಲ್ಲಿನ ಅಭಿವೃದ್ಧಿ ತಡೆಯಲು ಕಾರಣವಾಗುವ ಪಾಳೇಗಾರಿ ಜಮೀನ್ದಾರಿ ಶಕ್ತಿಗಳೇ ಆಗಿದ್ದಾರೆ. ರಾಜ್ಯದಲ್ಲಿ ಅಧಿಕಾರದಲ್ಲಿದ್ದವರೇ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಇಂತಹವರನ್ನು ಬೆಂಬಲಿಸಿವೆ. ಬೆನ್ನಿಗೆ ನಿಂತಿವೆ. ತಮ್ಮ ದುಷ್ಟ ಜನವಿರೋಧಿ ವರ್ಗ ನೀತಿಗಳಿಂದಾಗಿಯೇ ಈ ಸ್ಥಿತಿ ಒದಗಿರುವುದನ್ನು ಕಾಣದಂತೆ ಹಾದಿ ತಪ್ಪಿಸುವ ರಾಜಕಾರಣವನ್ನು ಮಾಡಿದ್ದಾರೆ. ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ 371ನೇ ವಿಧಿಗೆ ಒಳಪಡಿಸಲು ಬಿಜೆಪಿ ಕಾಂಗ್ರೆಸ್ ಎರಡೂ ಪಕ್ಷಗಳು ಏನೊಂದೂ ಕ್ರಮವಹಿಸದೇ ಇರುವುದು ಏನನ್ನು ತೋರಿಸುತ್ತದೆ? ಸಮಸ್ಯೆಗಳ ಇತ್ಯರ್ಥ ಈ ಭೂಮಾಲಕ ಬಂಡವಾಳಶಾಹಿ ಪಕ್ಷಗಳಿಗೆ ಬೇಕಿಲ್ಲ ಎಂಬುದನ್ನೇ ಇದು ತೋರಿಸುತ್ತದೆ.
ಆದ್ದರಿಂದ ಪ್ರತ್ಯೇಕತಾ ರಾಜ್ಯ ಎಂಬುದು ವಿಭಜಕತೆಯ ಚಳುವಳಿ. ರಾಜ್ಯದ ಅಥವ ಪ್ರದೇಶದ ಜನತೆಯ ಹಿತಗಳನ್ನು ಕಾಪಾಡದೇ ಒಂದು ಭಾಷೆ ಮಾತಾಡುವ ಜನರ ಒಗ್ಗಟ್ಟನ್ನು ಅದರ ಬಲ, ಭಾಷಾವಾರು ಪ್ರಾಂತಗಳ ಮೂಲ ತತ್ವವನ್ನು ನಾಶಗೊಳಿಸಿ ಸುಲಿಗೆಗಾರರಿಗೆ ಜನರ ಹಾಗೂ ನಾಡಿನ ಸಂಪತ್ತನ್ನು ಸೂರೆ ಮಾಡಲು ಮುಕ್ತ ಅವಕಾಶ ಕಲ್ಪಿಸುವುದಾಗಿದೆ. ಇಂತಹ ವಿಭಜಕ ವಿನಾಶದ ಕೂಗನ್ನು ಎಲ್ಲಾ ಜನತೆ ಒಕ್ಕೊರಲಿನಿಂದ ಖಂಡಿಸಬೇಕು. ಎದುರಿಸಬೇಕು. ಅಭಿವೃದ್ಧಿಯ ಮಂತ್ರ ಪಠಿಸುವ ಬಿಜೆಪಿ ಕಾಂಗ್ರೆಸ್ ಪಕ್ಷಗಳ ಸಕರ್ಾರಗಳು ಈ ಪ್ರದೇಶದ ಅಭಿವೃದ್ಧಿಗೆ ಮೂಲಭೂತ ಕ್ರಮವಹಿಸಲು ಮುಂದಾಗಲಿ. 371 ವಿಧಿಯನ್ನು ಒಪ್ಪಲಿ. ಆದ್ದರಿಂದ ಇಡೀ ರಾಜ್ಯದ ದೇಶದ ಜನತೆಯ ಎಲ್ಲಾ ವಿಭಾಗಗಳ ಪ್ರಜಾಸತ್ಮಾಕ ಚಳುವಳಿಯೊಂದೇ ಹಾದಿ. ಅಂತಹ ಸಮಗ್ರ ಜನಪರ ಅಭಿವೃದ್ಧಿಗಾಗಿ ಚಳುವಳಿ ರಾಜ್ಯದಾದ್ಯಂತ ಬೆಳೆದು ಬರಲಿ.