ಭಟ್ಕಳ, ಜನವರಿ 8: ಭಟ್ಕಳ ಒಂದು ಶಾಂತಿಪ್ರಿಯ ನಾಡಾಗಿದ್ದು ಇದರಲ್ಲಿರುವ ಜನರ ಮನಗಳಲ್ಲಿ ವಿಷಬೀಜ ಬಿತ್ತಿ ಶಾಂತಿ ಕದಡುವವರಿಗೆ ಕ್ರೀಡೆಯ ಮೂಲಕ ನಾವೆಲ್ಲಾ ಸಹೋದರರು ಎಂಬ ಸಂದೇಶ ನೀಡಲು ಜಿಲ್ಲಾ ಮಟ್ಟದ ಕಬಡ್ಡಿ ಕ್ರೀಡಾವಳಿಯನ್ನು ಭಟ್ಕಳದಲ್ಲಿ ಆಯೋಜಿಸಲಾಗಿದೆ.
ನಗರದಲ್ಲಿ ಜನವರಿ 16 ಮತ್ತು 17 ರಂದು ಹಗಲು ಮತ್ತು ರಾತ್ರಿ ನಡೆಯುವ ಈ ಪಂದ್ಯಾವಳಿಯಲ್ಲಿ ಭಾಗವಹಿಸಲು ಜಿಲ್ಲೆಯ ಎಲ್ಲಾ ಕಬಡ್ಡಿ ತಂಡಗಳಿಗೆ ಆಹ್ವಾನ ನೀಡಲಾಗಿದೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ಕಬಡ್ಡಿ ಫೆಡರೇಶನ್ ಅಧ್ಯಕ್ಷರಾದ ಇಮ್ತಿಯಾಜ್ ಉದ್ಯಾವರ್ ತಿಳಿಸಿದ್ದಾರೆ.
ನಗರದ ಶಾಂತಿ ಕದಡುವವರಿಗೆ ನಾವು ಕ್ರೀಡೆಯ ಮೂಲಕ ನಾವೆಲ್ಲಾ ಬ್ರಾತೃರು ಎಂಬ ಸಂದೇಶವನ್ನು ಈ ಪಂದ್ಯಾವಳಿಯ ಮೂಲಕ ನೀಡಲಿದ್ದು ಜಿಲ್ಲೆಯ ಸಕಲ ನಾಗರಿಕರು ಪಂದ್ಯಾವಳಿಯಲ್ಲಿ ಭಾಗವಹಿಸುವ ಮೂಲಕ ಭ್ರಾತೃತ್ವವನ್ನು ಮೆರೆಯಬೇಕೆಂದು ಆಗ್ರಹಿಸಲಾಗಿದೆ.
ಹೋಟೆಲ್ ವೈಭವ್ ಹಿಂಭಾಗದ ಮೈದಾನದಲ್ಲಿ ಆಯೋಜಿಸಲಾಗಿರುವ ಪಂದ್ಯಾವಳಿ ಸಂಜೆ ನಾಲ್ಕು ಘಂಟೆಗೆ ಪ್ರಾರಂಭವಾಗಲಿದ್ದು ರಾತ್ರಿಯವರೆಗೂ ಮುಂದುವರೆಯಲಿದೆ. ಪ್ರತಿ ತಂಡಕ್ಕೆ ಇನ್ನೂರು ರೂ. ಪ್ರವೇಶಧನ ನಿಗದಿಪಡಿಸಲಾಗಿದ್ದು ವಿಜೇತ ಮೂರು ತಂಡಗಳಿಗೆ ಬಹುಮಾನಗಳನ್ನು ಘೋಷಿಸಲಾಗಿದೆ. ಪ್ರಥಮ - ಹದಿನೈದು ಸಾವಿರ, ದ್ವಿತೀಯ - ಏಳು ಸಾವಿರ, ತೃತೀಯ - ಐದು ಸಾವಿರ ನಗದು ಬಹುಮಾನಗಳು ವಿಜೇತರಿಗಾಗಿ ಕಾದಿವೆ.
ಜಿಲ್ಲೆಯ ಇತರೆಡೆಗಳಿಂದ ಆಗಮಿಸುವ ತಂಡಗಳಿಗೆ ವಸತಿ ವ್ಯವಸ್ಥೆಯನ್ನು ಮಾಡಲಾಗಿದ್ದು ಪ್ರತಿ ತಂಡವೂ ತನ್ನ ತಾಲ್ಲೂಕನ್ನು ಪ್ರತಿನಿಧಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ:
Mobile : 9448778242
Mobile : 9448137821
ಈ ಸಂದರ್ಭದಲ್ಲಿ ಜಿಲ್ಲಾ ಕಬಡ್ಡಿ ಫೆಡರೇಶನ್ ಉಪಾಧ್ಯಕ್ಷ ಪ್ರಕಾಶ್ ನಾಯ್ಕ್ ಹಾಗೂ ಸದಸ್ಯರಾದ ವೆಂಕಟೇಶ ನಾಯ್ಕ್, ಮೌಲಾನಾ ಅಜೀಜ್ ಉರ್ ರ್ರಹ್ಮಾನ್ ನದ್ವಿ, ಅಂಜದ್, ಗಣೇಶ್ ನಾಯ್ಕ್, ಈಶ್ವರ ನಾಯ್ಕ್, ಅಬು ಫೈಸಲ್, ಜಾಫರ್ ಹಾಗೂ ಇನ್ನಿತರ ಸದಸ್ಯರು ಉಪಸ್ಥಿತರಿದ್ದರು.