ಕಾರವಾರ: ಜಿಲ್ಲೆಯ ಕಾರವಾರ ತಾಲೂಕು ಪಂಚಾಯತ್ನ ಸಭಾಂಗಣದಲ್ಲಿ "ಮಕ್ಕಳ ಸ್ನೇಹಿ ಗ್ರಾಮ" ಪಂಚಾಯತಿ ಪರಿಕಲ್ಪನೆ ಕುರಿತು ಚೈಲ್ಡಫಂಡ್ ಇಂಡಿಯಾ ಹಾಗೂ ಯುನಿಸೆಫ್ ವತಿಯಿಂದ ತಾಲೂಕಿನ ಎಲ್ಲ ಗ್ರಾಮ ಪಂಚಾಯತಿಯ ಅದ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಗಳಿಗಾಗಿ ಶುಕ್ರವಾರ ಒಂದು ದಿನದ ತರಬೇತಿ ಕಾರ್ಯಗಾರ ನಡೆಸಲಾಯಿತು.
ಯುನಿಸೆಫ್ನ ಸಲಹೆಗಾರರಾದ ಡಾ. ರುಬವೆಲ್ ಎಂ., ಚೈಲ್ಡಫಂಡ್ನ ಯೋಜನಾ ಪ್ರಬಂಧಕರಾದ ಸತೀಶ ಬಾಡ್ಕರ್ ಅವರು ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳ ಬದುಕುವ, ರಕ್ಷಣೆ, ಅಭಿವೃದ್ಧಿ, ಪಾಲ್ಗೊಳ್ಳುವಿಕೆಯ ಹಕ್ಕುಗಳಿಗಾಗಿ ಯುನಿಸೆಫ್ ಸಂಸ್ಥೆ ಭಾರತ ಸೇರಿದಂತೆ 190 ರಾಷ್ಟ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು, ಸಮಾಜದಲ್ಲಿ ಮಕ್ಕಳು ಅಪೌಷ್ಟಿಕತೆಯಿಂದ ಬಳಲುವುದನ್ನು ತಡೆಗಟ್ಟಲು ನಿರಂತರವಾಗಿ ಶ್ರಮಿಸುತ್ತಿದೆ.
ಅಲ್ಲದೇ ಮಕ್ಕಳ, ಮಹಿಳೆಯರ, ಯುವಕ-ಯುವತಿಯರ ಹಕ್ಕು, ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ವಿಷಯಗಳ ಸರ್ವತೋಮುಖ ಅಭಿವೃದ್ಧಿಗಾಗಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಸಹಯೋಗದೊಂದಿಗೆ ಯುನಿಸೆಫ್ ಹಾಗೂ ಚೈಲ್ಡಫಂಡ್ ಇಂಡಿಯಾ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ತಿಳಿಸಿದರು.
ನಂತರ ಪಿಪಿಟಿ ಮೂಲಕ ಗ್ರಾಮ ಪಂಚಾಯತಿ ಮಟ್ಟದಲ್ಲಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ರೂಪಿಸಬಹುದಾದ ಕಾರ್ಯಕ್ರಮಗಳ ಬಗೆಗೆ ತಾಲೂಕಿನ ಎಲ್ಲ ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ ಹಾಗೂ ಅಭಿವೃದ್ಧಿ ಅಧಿಕಾರಿಗಳಿಗೆ ವಿವರಿಸಿದರು.
ಈ ಸಂದರ್ಭದಲ್ಲಿ ತಾಪಂ ವ್ಯವಸ್ಥಾಪಕರಾದ ಅನಿತಾ ಎನ್. ಬಂಡಿಕಟ್ಟೆ, ಸಿಬ್ಬಂದಿ ರಾಮದಾಸ್ ನಾಯ್ಕ್, ರಾಮದಾಸ್ ಗುರವ್, ಗ್ರಾಪಂ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಗಳು, ತಾಲೂಕಾ ಐಇಸಿ ಸಂಯೋಜಕ ಫಕೀರಪ್ಪ ತುಮ್ಮಣ್ಣನವರ, ಚೈಲ್ಡಫಂಡ್ನ ಸಮನ್ವಯ ಅಧಿಕಾರಿ ವೆಂಕಟೇಶ್ ನಾಯ್ಕ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.