ಬೆಂಗಳೂರು,ಜನವರಿ 8: ಪ್ರವಾಹ ಸಂತ್ರಸ್ತರಿಗೆ ಪರಿಹಾರ ಹಾಗೂ ಪುನರ್ ವಸತಿ ಕಲ್ಪಿಸುವಲ್ಲಿ ನಡೆಯುತ್ತಿರುವ ವ್ಯಾಪಕ ಅವ್ಯಹಾರಗಳ ಬಗ್ಗೆ ಮತ್ತೊಮ್ಮೆ ಕೆಂಗಣ್ಣು ಬೀರಿರುವ ರಾಜ್ಯ ಲೋಕಾಯುಕ್ತ, ಭ್ರಷ್ಟಾಚಾರವನ್ನು ಬಯಲಿಗೆಳೆಯಲು ಇದೀಗ ಎರಡನೇ ಹಂತದ ಕಾರ್ಯಾಚರಣೆ ಆರಂಭಿಸಿದೆ.
ನೆರೆ ಸಂತ್ರಸ್ತರ ಹೆಸರಿನಲ್ಲಿ ವಂಚನೆ ಮಾಡಿ ಅಪಾರ ಪ್ರಮಾಣದಲ್ಲಿ ಭಕ್ಷಿಸುತ್ತಿರುವವರ ಭೇಟೆಗೆ ಟೊಂಕಕಟ್ಟಿ ನಿಂತಿರುವ ಲೋಕಾಯುಕ್ತ ಪೊಲೀಸರು, ಸದ್ದಿಲ್ಲದೇ ಅಕ್ರಮಗಳನ್ನು ಪತ್ತೆ ಹಚ್ಚಸಲು ಕಾರ್ಯೋನ್ಮುಖರಾಗಿದ್ದಾರೆ.
ಸಾರ್ವಜನಿಕರು, ಸಂಘ ಸಂಸ್ಧೆಗಳು, ರಾಜಕೀಯ ಪಕ್ಷಗಳ ಮುಖಂಡರಿಂದ ಬರುತ್ತಿರುವ ದೂರುಗಳನ್ನು ಆಧರಿಸಿ ಅಕ್ರಮಗಳನ್ನು ಪತ್ತೆ ಹೆಚ್ಚುವ ಕೆಲಸಕ್ಕೆ ಲೋಕಾಯುಕ್ತ ಪೊಲೀಸರು ಕೈಹಾಕಿದ್ದು, ಕಳೆದ ಎರಡು ದಿನಗಳ ಹಿಂದೆಯೇ ಐದು ಮಂದಿ ತಂಡವನ್ನು ನೆರೆ ಪೀಡಿತ ಪ್ರದೇಶಗಳಿಗೆ ಕಳುಹಿಸಲಾಗಿದೆ.
ಗದಗ, ಧಾರವಾಡ ಹಾಗೂ ಬಿಜಾಪುರದಲ್ಲಿ ಭಾರೀ ಪ್ರಮಾಣದಲ್ಲಿ ಅಕ್ರಮಗಳು ನಡೆಯುತ್ತಿವೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಈ ತಂಡ ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗಡೆ ಪತ್ರಿಕೆಗೆ ತಿಳಿಸಿದ್ದಾರೆ.
ಮೊದಲ ಹಂತದಲ್ಲಿ ಅವ್ಯವಹಾರ ನಡೆದ ಸಂದರ್ಭದಲ್ಲಿ ಲೋಕಾಯುಕ್ತ ನೀಡಿದ ವರದಿಗೆ ರಾಜ್ಯ ಸರ್ಕಾರ ಕ್ರಮ ಕೈಗೊಂಡ ವರದಿಯನ್ನು ಸಲ್ಲಿಸಿತ್ತು. ಈ ವರದಿಯನ್ನೂ ಕೂಡ ಸಲ್ಲಿಸಿತ್ತು. ಮತ್ತೆ ಅಕ್ರಮ ಪತ್ತೆಗೆ ರವಾನಿಸಲಾಗಿರುವ ತಂಡದ ಜೊತೆಗೆ ಎಟಿಆರ್ ವರದಿಯನ್ನು ಕೂಡ ಕಳುಹಿಸಲಾಗಿದೆ. ಸರ್ಕಾರ ಕೈಗೊಂಡ ಕ್ರಮಗಳು ಸಮರ್ಪಕವಾಗಿವೆಯೇ ಎಂಬುದನ್ನು ಪತ್ತೆ ಹಚ್ಚುವುದು ಇದರ ಉದ್ದೇಶವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಕೆಲವೆಡೆ ಪೂರ್ಣ ಬಿದ್ದ ಮನೆಗೆ ಕೇಂದ್ರ ಸರ್ಕಾರದ ನೈಸರ್ಗಿಕ ವಿಕೋಪ ನಿಧಿಯ ಮಾರ್ಗಸ್ರಚಿಯಡಿ ಪರಿಹಾರ ನೀಡುತ್ತಿಲ್ಲ. ಕೇವಲ ಎರಡು ಸಾವಿರ ರೂಪಾಯಿ ಪರಿಹಾ ನೀಡಿ ಕೈತೊಳೆದುಕೊಳ್ಳಲಾಗಿದೆ. ಈ ಕುರಿತು ದೂರುಗಳು ಬಂದಿವೆ.
ಇದಲ್ಲದೇ ಇನ್ನೂ ಹಲವಾರು ದೂರುಗಳು ಬರುತ್ತಲೇ ಇವೆ. ಆದರೆ ತನಿಖೆ ನಡೆಸಲು ನಮ್ಮಲ್ಲಿ ಸಿಬ್ಬಂದಿ ಕೊರತೆಯಿದೆ. ಆದರೂ ಭಕ್ಷಕರನ್ನು ಪತ್ತೆ ಹಚ್ಚಲು ಪ್ರಯತ್ನಗಳಂತೂ ಮುಂದುವರೆದಿವೆ ಎಂದು ನ್ಯಾಯಮೂರ್ತಿ ಸಂತೋಷ್ ಹೆಗಡೆ ತಿಳಿಸಿದರು.
ತನಿಖೆಗೆ ತೆರಳಿರುವ ತಂಡ ಬಹುತೇಕ ಸೋಮವಾರ ನಗರಕ್ಕೆ ಬರುವ ನಿರೀಕ್ಷೆಯಿದ್ದು, ತನ್ನ ವರದಿ ಸಲ್ಲಿಸಲಿದೆ. ನಂತರ ಸರ್ಕಾರಕ್ಕೆ ಸೂಕ್ತ ಕ್ರಮಕ್ಕಾಗಿ ಶಿಫಾರಸ್ಸು ಮಾಡುವುದಾಗಿ ಅವರು ಸ್ಪಷ್ಟಪಡಿಸಿದರು.