ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನವು ಕರ್ನಾಟಕದಲ್ಲಿ ಶಿಶು ಮರಣ ದರವನ್ನು ೨೦೧೦ರ ವೇಳೆಗೆ ಈಗಿನ ೪೭ರಿಂದ(ಪ್ರತಿ ಸಾವಿರ ಜನನಕ್ಕೆ) ಮೂವತ್ತಿಕ್ಕಿಳಿಸುವ ಹಾಗೂ ೨೦೧೨ರ ವೇಳೆಗೆ ೨೫ಕ್ಕಿಳಿಸುವ ಗುರಿಯನ್ನು ಹೊಂದಿದೆ. ಇದಕ್ಕೆ ಸಂಬಂಧಿಸಿದಂತೆ , ಶಿಶು ಮರಣಕ್ಕೆ ಮುಖ್ಯವಾದ ಕಾರಣಗಳನ್ನು ಹಾಗೂ ಲಭ್ಯವಿರುವ ಮಾಹಿತಿಯನ್ನು ಈ ಕೆಳಕಂಡ ಅಂಶಗಳಿಂದ ವಿವರಿಸಲಾಗಿದೆ.
ಜನನದ ಸಮಯದಲ್ಲಿ ತಾಯಿಯ ವಯಸ್ಸು-
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-೩ರ ಪ್ರಕಾರ ತಾಯಿ ಯ ವಯಸ್ಸು ಮಗುವಿನ ಜನನದ ಸಮಯ ದಲ್ಲಿ ೨೦ ಹಾಗೂ ಅದಕ್ಕಿಂತ ಕೆಳಗಿದ್ದಾಗ, ಶಿಶು ಮರಣ ದರವು ಹೆಚ್ಚಾಗಿದೆ. ತಾಯಿಯ ವಯಸ್ಸು ಹೆಚ್ಚಾದಂತೆ ಶಿಶು ಮರಣ ದರವೂ ಕಡಿಮೆಯಾಗುತ್ತಾ ಬರುವುದು ಕಂಡು ಬರುತ್ತದೆ. ತಾಯಿಯ ವಯಸ್ಸು ೨೦ರಿಂದ ೨೯ ಇದ್ದಾಗ ಶಿಶು ಮರಣ ದರವು ೪೭ ಹಾಗೂ ೩೦ ರಿಂದ ೩೯ ವಯಸ್ಸಿನ ವಯೋಮಾನದವರಲ್ಲಿ ಇದು ೨೩ ಇರುತ್ತದೆ. ಇದರಿಂದ ತಿಳಿದು ಬರುವುದೇನೆಂ ದರೆ, ಮಹಿಳೆಯರ ಮದುವೆಯ ಕನಿಷ್ಠ ವಯಸ್ಸನ್ನು ಹೆಚ್ಚಳ ಮಾಡುವುದರಿಂದ (೨೦ ವರ್ಷಕ್ಕಿಂತ ಮೆಲ್ಪಟ್ಟು) ಮಗುವಿನ ಜನನದ ಸಮಯದಲ್ಲಿ ತಾಯಿಯ ವಯಸ್ಸು ಕೂಡಾ ಹೆಚ್ಚಾಗುವುದು.
ಜನನ ಕ್ರಮಾಂಕ
ಜಿಲ್ಲಾ ಮಟ್ಟದ ಆರೋಗ್ಯ ಸಮೀಕ್ಷೆಯ (ಡಿಎಲ್ಹೆಚ್ಎಸ್)ಅಂಕಿ ಅಂಶಗಳ ಪ್ರಕಾರ ಜಿಲ್ಲಾವಾರು ಶಿಶು ಮರಣದ ದರ - ಮಾನವ ಅಭಿವೃದ್ಧಿ ವರದಿ-೨೦೦೫ ಗುಲ್ಬರ್ಗ, ರಾಯಚೂರು ಹಾಗೂ ಬಿದರ್ ಜಿಲ್ಲೆಗಳಲ್ಲಿ ಹೆಚ್ಚಾಗಿರುವುದು ಕಂಡು ಬರುತ್ತದೆ. ಗುಲ್ಬರ್ಗದಲ್ಲಿ ೬೭, ರಾಯಚೂರಿನಲ್ಲಿ ೫೯, ಹಾಗೂ ಬಿದರ್ನಲ್ಲಿ ೬೬ ಇರುತ್ತದೆ. ಈ ಜಿಲ್ಲೆಗಳಲ್ಲಿ ಮಗುವಿನ ಜನನ ಕ್ರಮಾಂಕವು ಸಹ (೩ ಮತ್ತು ೩+) ಕ್ರಮವಾಗಿ ಶೇ.೫೧,೪೯, ಹಾಗೂ ೪೨ ರಷ್ಟು ಇದ್ದು ಬೇರೆ ಜಿಲ್ಲೆಗಳಿಗಿಂತ ಹೆಚ್ಚಿದೆ. ಇದಕ್ಕೆ ವಿರುದ್ಧವಾಗಿ ದಕ್ಷಿಣ ಕನ್ನಡ, ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಜನನದ ಕ್ರಮಾಂಕವು ಕಡಿಮೆ ಇದ್ದು ಶೇ. ೨೭, ೨೬ ಹಾಗೂ ೧೮ ರಷ್ಟಿದೆ. ಇಲ್ಲಿ ಶಿಶು ಮರಣ ದರವು ಕ್ರಮವಾಗಿ ಶೇ.೪೪, ೪೫ ರಷ್ಟಿದೆ. ಇದರಿಂದ ಹೆಚ್ಚಿನ ಜನನ ಕ್ರಮಾಂಕದಿಂದ ಹೆಚ್ಚಿನ ಶಿಶು ಮರಣವು ಸಂಭವಿಸುವುದು ಕಂಡು ಬರುತ್ತದೆ.
ಜನನದ ಅಂತರ
ಜನನದ ಅಂತರ ಕಡಿಮೆ ಇದ್ದಾಗ ಅಂದರೆ, ೨ ವರ್ಷಕ್ಕಿಂತ ಕಡಿಮೆ ಇದ್ದಾಗ ಶಿಶು ಮರಣ ದರವು ೭೬ ಕ್ಕಿಂತ ಹೆಚ್ಚಾಗಿದೆ. ಜನನದ ಅಂತರವು ಹೆಚ್ಚಾದಂತೆ ಇದು ಕಡಿಮೆಯಾಗುತ್ತಾ ಹೋಗುತ್ತದೆ. ಹಿಂದಿನ ಮಗುವಿನ ಜನನ ಎರಡು ಮೂರು ವರ್ಷದ ಹಿಂದೆ ಆಗಿದ್ದಾಗ ಶಿಶು ಮರಣ ದರವು ೪೬ ಹಾಗೂ ೪ ವರ್ಷಗಳಿಗಿಂತ ಹೆಚ್ಚಿದಾಗ ಮರಣ ದರ ಬಹಳ ಕಡಿಮೆಯಾಗಿ ೧೮ ಇರುತ್ತದೆ. ಮಗುವಿನ ಜನನದಲ್ಲಿ ಹೆಚ್ಚಿನ ಅಂತರವಿದ್ದಾಗ ಶಿಶು ಮರಣ ದರವೂ ಕಡಿಮೆಯಾಗುತ್ತಾ ಹೋಗುತ್ತದೆ.
ಎದೆ ಹಾಲು ಉಣಿಸುವುದು:
ಅತ್ಯಂತ ಸ್ವಾರಸ್ಯಕರ ವಿಷಯವೇನೆಂದರೆ ಒಂದು ದಿನಕ್ಕಿಂತ ಮುಂಚಿತವಾಗಿ ಅಂದರೆ ಹೆರಿಗೆಯಾದ ೨ ಗಂಟೆಯಿಂದ ಒಂದು ದಿನದ ಒಳಗೆ, ಎದೆ ಹಾಲು ಉಣಿಸಿದ ತಾಯಿಂದಿರಿಗಿಂತ ತಡವಾಗಿ ಹಾಲುಣಿಸಿ ದವರ ಸಂಖ್ಯೆ ಬಾಗಲಕೋಟೆ, ಬಿಜಾಪುರ, ಗುಲ್ಬರ್ಗಾ, ರಾಯಚೂರು, ಕೊಪ್ಪಳ, ಗದಗ, ಧಾರವಾಡ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಹೆಚ್ಚಿದೆ. ಇವೇ ಜಿಲ್ಲೆಗಳಲ್ಲಿ ಶಿಶು ಮರಣ ದರಗಳು ಹೆಚ್ಚಾಗಿರುವುದು ಕಂಡು ಬಂದಿದೆ. ಇದು ಧಾರವಾಡದಲ್ಲಿ ೬೯ ರಿಂದ ರಾಯಚೂರಿನಲ್ಲಿ ೫೯ ರವರಿಗಿದೆ. ಇದಕ್ಕೆ ವಿರುದ್ಧವಾಗಿ ಕೆಲವು ಜಿಲ್ಲೆಗಳಲ್ಲಿ ಮಗುವಿಗೆ ತಡವಾಗಿ ಹಾಲುಣಿಸಿದ ತಾಯಂದಿರಿಗಿಂತ ಬೇಗನೆ ಹಾಲುಣಿಸಿದವರ ಸಂಖ್ಯೆ ಹೆಚ್ಚಾಗಿದೆ. ಇಂತಹ ಜಿಲ್ಲೆಗಳಲ್ಲಿ ಶಿಶು ಮರಣ ದರವು ಕಡಿಮೆಯಿದ್ದು ಇದು ದ.ಕ.ದಲ್ಲಿ ೪೪ ರಿಂದ ಬೆಂಗಳೂರು ನಗರ ಮತ್ತು ಉಡುಪಿ ಜಿಲ್ಲೆಗಳಲ್ಲಿ ೪೫ ರಷ್ಟಿದೆ.
ಮಗುವಿನ ಪೌಷ್ಟಿಕಾಂಶದ ಸ್ಥಿತಿ
ಮಗುವಿನ ಪೌಷ್ಟಿಕಾಂಶ ಸ್ಥಿತಿಯ ಲಭ್ಯವಿರುವ ಅಂಕಿ ಅಂಶಗಳ ಪ್ರಕಾರ ೫ ವರ್ಷಕ್ಕಿಂತ ಕಡಿಮೆ ಇರುವ ಶೇ.೪೫ ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಶೇ.೧೮ರಷ್ಟು ಮಕ್ಕಳ ಬೆಳವಣಿಗೆ ತೀವ್ರ ಕುಂಟಿತವಾಗಿವೆ. ಹಾಗೂ ಶೇ.೩೮ರಷ್ಟು ಮಕ್ಕಳು ಅತಿ ಕಡಿಮೆ ತೂಕದವರಾಗಿದ್ದಾರೆ. ಜಿಲ್ಲಾವಾರು ಪೌಷ್ಟಿಕಾಂಶದ ಅಂಕಿ ಸಂಖ್ಯೆ ಲಭ್ಯವಿಲ್ಲದಿದ್ದರೂ ಜಿಲ್ಲಾವಾರು ಪ್ರತಿವ್ಯಕ್ತಿಯ ಸರಾಸರಿ ವೆಚ್ಚದ ಮಾಹಿತಿ ಲಭ್ಯವಿರುತ್ತದೆ. ರಾಯಚೂರು, ಗುಲ್ಬರ್ಗ,ಹಾವೇರಿ, ಹಾಗೂ ಗದಗ ಬಳ್ಳಾರಿ ಜಿಲ್ಲೆಗಳಲ್ಲಿ ಪ್ರತಿವ್ಯಕ್ತಿ ತಿಂಗಳ ಸರಾಸರಿ ವೆಚ್ಚವು ಅತ್ಯಂತ ಕಡಿಮೆ ಅಂದರೆ ರೂ.೪೦೯ ಇದೆ. ಈ ಜಿಲ್ಲೆಗಳಲ್ಲಿ ಶಿಶು ಮರಣ ದರವು ಹೆಚ್ಚಾಗಿದ್ದು ಅದು ಗುಲ್ಬರ್ಗಾದಲ್ಲಿ ೬೭೮ ರಿಂದ ರಾಯಚೂರಿನಲ್ಲಿ ೫೯ ರವರೆಗಿದೆ.
ಶಿಶು ಮರಣ ದರವನ್ನು ಕಡಿಮೆಗೊಳಿಸಲು..
- ಮದುವೆಯ ಕನಿಷ್ಠ ವಯಸ್ಸನ್ನು 20 ವರ್ಷಕ್ಕೆ ಹೆಚ್ಚಿಸುವುದು.
- ಜನನದ ಕ್ರಮಾಂಕವನ್ನು ೨ ಮಕ್ಕಳಿಗೆ ಸೀಮಿತಗೋಳಿಸುವುದು.
- ಮಕ್ಕಳ ನಡುವಿನ ಅಂತರವನ್ನು ಕನಿಷ್ಠ ೩ ವರ್ಷವಿರುವಂತೆ ಮಾಡುವುದು.
- ಮಗು ಜನಿಸಿದ ೨ ಗಂಟೆಗೊಳಗಾಗಿ ತಾಯಿ ಮಗುವಿಗೆ ಎದೆ ಹಾಲು ಉಣಿಸುವುದು.
- ಕೊನೆಯದಾಗಿ ೫ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಪೌಷ್ಟಿಕಾಂಶದ ಸ್ಥಿತಿಯನ್ನು ಪರಿಗಣಿಸಿ ಇದನ್ನು ತಾಯಿ ಮತ್ತು ಮಗುವಿನ ಆರೈಕೆಯ ಭಾಗವಾಗಿ ಪರಿಗಣಿಸುವುದು.
ಸೌಜನ್ಯ: -ಶಂಶೀರ್, ಬುಡೋಳಿ