ಚಿಕ್ಕಬಳ್ಳಾಪುರ, ನವೆಂಬರ್ ೩೦: ನವೆಂಬರ್ ೧೮ ಹಾಗೂ ನವೆಂಬರ್ ೨೦ ರಂದು ಜಿಲ್ಲಾಧಿಕಾರಿಗಳ ಆದೇಶದನ್ವಯ ಅಪರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಉಪ ನಿರ್ದೇಶಕರು, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಚಿಕ್ಕಬಳ್ಳಾಪುರ ಜಿಲ್ಲೆ ಹಾಗೂ ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರು ತಾಲ್ಲೂಕುಗಳ ತಹಶೀಲ್ದಾರ್ಗಳ ಹಾಗೂ ಸಿಬ್ಬಂದಿಗಳೊಡನೆ ಗೌರಿಬಿದನೂರು ಹಾಗೂ ಚಿಕ್ಕಬಳ್ಳಾಪುರ ತಾಲ್ಲುಕುಗಳಲ್ಲಿನ ಅನೇಕ ನ್ಯಾಯಬೆಲೆ ಅಂಗಡಿಗಳು, ಚಿಲ್ಲರೆ ಸೀಮೆಎಣ್ಣೆ ಪರವಾನಗಿದಾರರು, ಗ್ಯಾಸ್ ಏಜೆನ್ಸಿಗಳ ಮೇಲೆ ದಿಡೀರ್ ದಾಳಿ ಮಾಡಿ ತನಿಖೆ ನಡೆಸಿ, ನ್ಯಾನತೆಗಳು ಕಂಡುಬಂದ ೭ ನ್ಯಾಯಬೆಲೆ ಅಂಗಡಿಗಳು ಹಾಗೂ ೧೩ ಚಿಲ್ಲರೆ ಸೀಮೆಎಣ್ಣೆ ಪರವಾನಗಿದಾರರು ಮತ್ತು ಗ್ಯಾಸ್ ಏಜೆನ್ಸಿ ಮೇಲೆ ಕಾನೂನಿನ ರೀತ್ಯಾ ಕ್ರಮ ಜರುಗಿಸಲಾಗಿದೆ.
ಈ ಸಮಯದಲ್ಲಿ ಜಿಲ್ಲಾಧಿಕಾರಿಗಳು ನ್ಯಾಯಬೆಲೆ ಅಂಗಡಿ ಹಾಗೂ ಚಿಲ್ಲರೆ ಸೀಮೆಎಣ್ಣೆ ಪರವಾನಗಿದಾರರಿಗೆ ಪಡಿತರ ಚೀಟಿದಾರರಿಗೆ ಸರ್ಕಾರ ನಿಗದಿಪಡಿಸಿದ ದಾಸ್ತಾನನ್ನು ನಿಗದಿತ ಸಮಯ, ದರ ಹಾಗೂ ಪ್ರಮಾಣದಲ್ಲಿ ವಿತರಿಸಬೇಕೆಂದು ಜಿಲ್ಲಾಧಿಕಾರಿ ಅನ್ವರ್ ಪಾಷ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.