ಕಾರವಾರ: ಸಾರ್ವಜನಿಕ ವಿತರಣಾ ಪದ್ಧತಿಯಡಿ ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿದಾರರಿಗೆ ಹೆಚ್ಚುವರಿ 5 ಕೆ.ಜಿ ಅಕ್ಕಿಯ ಬದಲಾಗಿ ಪ್ರತಿ ಕೆ.ಜಿ ಗೆ ರೂ.34 ರಂತೆ ಒಬ್ಬ ಸದಸ್ಯರಿಗೆ ರೂ.170 ರಂತೆ ಪಡಿತರ ಚೀಟಿಯಲ್ಲಿ ಎಲ್ಲ ಸದಸ್ಯರಿಗೆ ಸೇರಬೇಕಾದ ಒಟ್ಟು ಮೊತ್ತವನ್ನು ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಡಿ.ಬಿ.ಟಿ ಮೂಲಕ ವರ್ಗಾಯಿಸಲು ಸರ್ಕಾರ ಆದೇಶಿಸಿರುತ್ತದೆ.
ಜಿಲ್ಲೆಯಲ್ಲಿ ಚಾಲ್ತಿಯಲ್ಲಿರುವ ಒಟ್ಟು 3,10,774 ಪಡಿತರ ಚೀಟಿಗಳ ಪೈಕಿ ಸಕ್ರೀಯ ಬ್ಯಾಂಕ್ ಖಾತೆ ಹಾಗೂ ಬ್ಯಾಂಕ್ ಖಾತೆ ಆಧಾರ್ ಜೋಡಣೆ ಆಗಿರುವ ಒಟ್ಟು 2,52,208 ಪಡಿತರ ಚೀಟಿಗಳ ಕುಟುಂಬ ಮುಖ್ಯಸ್ಥರ ಬ್ಯಾಂಕ ಖಾತೆಗೆ ಅಗಸ್ಟ್-2023 ರ ಮಾಹೆಗೆ ಒಟ್ಟು ರೂ.15.27 ಕೋಟಿ ರೂ ಗಳನ್ನು ಜಮಾ ಮಾಡಲಾಗಿರುತ್ತದೆ. ಹಾಗೂ ಮೂರು ತಿಂಗಳಿನಿಂದ ಆಹಾರಧಾನ್ಯವನ್ನು ಪಡೆಯದಿರುವಂತಹ ಫಲಾನುಭವಿಗಳಿಗೆ ಹಣ ಪಾವತಿ ಮಾಡಲಾಗಿರುವುದಿಲ್ಲ. ಇನ್ನುಳಿದಂತೆ ಕೆಲವು ಪಡಿತರ ಚೀಟಿದಾರರ ಬ್ಯಾಂಕ್ ಖಾತೆಗಳು ನಿಷ್ಕ್ರಿಯಗೊಂಡಿರುತ್ತವೆ ಅಥವಾ ಕೆಲವು ಪಡಿತರ ಚೀಟಿದಾರರ ಬ್ಯಾಂಕ್ ಖಾತೆಗಳು ಇರುವುದಿಲ್ಲ ಇಂತಹ ಪಡಿತರ ಚೀಟಿದಾರರ ವಿವರಗಳು ತಾಲೂಕು ಕಚೇರಿಗಳಲ್ಲಿ ಹಾಗೂ ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗಳಲ್ಲಿ ಲಭ್ಯವಿರುತ್ತವೆ.
ಅಂತಹ ಫಲಾನುಭವಿಗಳಲ್ಲಿ ಈವರೆಗೆ ಬ್ಯಾಂಕ್ ಖಾತೆಯನ್ನು ಹೊಂದದೇ ಇರುವ ಫಲಾನುಭವಿಗಳು ಕೂಡಲೇ ತಮ್ಮ ಹತ್ತಿರದ ಬ್ಯಾಂಕ್ ಅಥವಾ ಅಂಚೆ ಕಚೇರಿಗೆ ತೆರಳಿ ತಮ್ಮ ಖಾತೆಯನ್ನು ತೆರೆಯುವುದು ಹಾಗೂ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಲಿಂಕ್ ಮಾಡುವುದು ಹಾಗೂ ಖಾತೆಯನ್ನು ಹೊಂದಿದ್ದು Inactive/Suspend ಆಗಿರುವಂತಹ ಫಲಾನುಭವಿಗಳು ಕಡ್ಡಾಯವಾಗಿ ಆಧಾರ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ಬ್ಯಾಂಕ್ಗೆ ತೆರಳಿ ಬ್ಯಾಂಕ್ ಖಾತೆ E-KYC ಮಾಡಿಸತಕ್ಕದ್ದು. ಹಣ ವರ್ಗಾವಣೆಯಾದ ಬಗ್ಗೆ ಹಾಗೂ ಇತರ ವಿವರಗಳನ್ನು https://ahara.kar.nic.in/status2/status_of_dbt_new.aspx ಪಡೆಯಬಹುದು. ಹೆಚ್ಚಿನ ಮಾಹಿತಿಗೆ ಸಂಬಂಧಪಟ್ಟ ತಾಲೂಕು ಕಚೇರಿಗೆ ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
.