ಭಟ್ಕಳ, ಜನವರಿ 15:ಪ್ರಸಕ್ತ ಪಡಿತರ ವ್ಯವಸ್ಥೆಯು ಹದಗೆಟ್ಟು ಹೋಗಿದ್ದು, ಬಡವರಿಗೆ ಆಹಾರ ವಿತರಣೆಯನ್ನು ನಿಲ್ಲಿಸಲಾಗಿದೆ ಎಂದು ಆಪಾದಿಸಿರುವ ಸಿಪಿಐ(ಎಂ) ಭಟ್ಕಳ ಘಟಕ ಸೋಮವಾರ ಭಟ್ಕಳ ತಹಸೀಲ್ದಾರ ಕಚೇರಿಯ ಎದುರು ಪ್ರತಿಭಟನೆ ನಡೆಸಿತು.
ಕರ್ನಾಟಕದಲ್ಲಿ ಪಡಿತರ ವ್ಯವಸ್ಥೆಯು ಗೊಂದಲದ ಗೂಡಾಗಿದೆ. ೨ರೂಪಾಯಿ ಬೆಲೆಗೆ ೨೦ಕೆಜಿ ಅಕ್ಕಿ ನೀಡುವ ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ ಬೇಡಿಕೆ ಈಡೇರಿಸಲು ಇನ್ನೂ ಹಿಂದೇಟು ಹಾಕುತ್ತಿದೆ. ನೆಮ್ಮದಿ ಕೇಂದ್ರಗಳ ಮೂಲಕ ಲಕ್ಷಾಂತರ ಪಡಿತರ ಚೀಟಿ ನೀಡಲಾಗಿದ್ದು, ತಾತ್ಕಾಲಿಕ ಕಾರ್ಡ ಖಾಯಂಗೊಳಿಸಿ ಆಹಾರದ ಪ್ರಮಾಣವನ್ನು ಹೆಚ್ಚಿಸುವ ಬದಲು ಆಹಾರ ವಿತರಣೆಯನ್ನು ನಿಲ್ಲಿಸಲಾಗಿದೆ. ಸಗಟು ವರ್ತಕರು ಬೆಲೆ ಏರಿಸಿ ಲಾಭವನ್ನು ಕೊಳ್ಳೆ ಹೊಡೆಯಲು ಸರಕಾರವೇ ಮುಂದೆ ನಿಂತು ಅವಕಾಶವನ್ನು ಕಲ್ಪಿಸುತ್ತಿದೆ ಎಂದು ಧರಣಿ ನಿರತರು ಆಕ್ರೋಶ ವ್ಯಕ್ತಪಡಿಸಿದರು. ಸರಕಾರವು ಪಡಿತರದಾರರ ನ್ಯಾಯಯುತ ಬೇಡಿಕೆಯನ್ನು ಈಡೇರಿಸದೇ ಇದ್ದಲ್ಲಿ ಜನೇವರಿ ೨೧ರಂದು ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ಎಚ್ಚರಿಸಿದರು. ತಹಸೀಲ್ದಾರ ಎಸ್.ಎಮ್.ನಾಯ್ಕ ಮನವಿಯನ್ನು ಸ್ವೀಕರಿಸಿದರು. ಸಿಪಿಐ(ಎಂ)ನ ಜಿಲ್ಲಾ ಕಾರ್ಯದರ್ಶಿ ಸುಭಾಶ ಕೊಪ್ಪಿಕರ ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದರು.