ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ಕಡೆಗೂ ರಾಜ್ಯಕ್ಕೆ ಒಲಿದ ಉಕ್ಕಿನ ಘಟಕ

ಬೆಂಗಳೂರು: ಕಡೆಗೂ ರಾಜ್ಯಕ್ಕೆ ಒಲಿದ ಉಕ್ಕಿನ ಘಟಕ

Sat, 28 Nov 2009 03:33:00  Office Staff   S.O. News Service
ಬೆಂಗಳೂರು, ನ.೨೭: ಜಾಗತಿಕ ಆರ್ಥಿಕ ಕುಸಿತದ ಸಂಕಷ್ಟದಲ್ಲಿರುವ ಕರ್ನಾಟಕಕ್ಕೆ ‘ಲಕ್ಷ್ಮೀ’ಕಟಾಕ್ಷ ದಕ್ಕುತ್ತಿದೆ. 

ಕಬ್ಬಿಣ ಮತ್ತು ಉಕ್ಕು ಉತ್ಪಾದನೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರುವ ಲಕ್ಷ್ಮೀನಾರಾಯಣ ಮಿತ್ತಲ್ ಮಾಲೀಕತ್ವದ ಆರ್ಸೆಲರ್ ಮಿತ್ತಲ್ ಕಂಪೆನಿ ಘಟಕ ಉತ್ತರ ಕರ್ನಾಟಕ ಭಾಗದಲ್ಲಿ ಆರಂಭವಾಗಲಿದೆ. 

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೂ ಈ ಯೋಜನೆ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದು, ‘ಆರ್ಸೆಲರ್- ಮಿತ್ತಲ್’ ಕಂಪೆನಿಗೆ ಎಲ್ಲಾ ಸಹಕಾರ ನೀಡುವ ಭರವಸೆ ನೀಡಿದ್ದಾರೆ. 

ಮುಖ್ಯಮಂತ್ರಿ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಶುಕ್ರವಾರ ಆರ್ಸೆಲರ್-ಮಿತ್ತಲ್ ಕಂಪೆನಿಯ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಮಹತ್ವದ ಮಾತುಕತೆಯಲ್ಲಿ ಯೋಜನೆ ಕುರಿತು ಸಕಾರಾತ್ಮಕ ನಿರ್ಧಾರ ಕೈಗೊಳ್ಳುವ ಮುನ್ಸೂಚನೆ ಲಭ್ಯವಾಗಿದೆ.  
 
ಕಂಪೆನಿಯ ಗ್ರೂಪ್ ಮ್ಯಾನೇಜ್‌ಮೆಂಟ್ ಬೋರ್ಡ್ ಸದಸ್ಯ ಸುಧೀರ್ ಮಹೇಶ್ವರಿ, ಕಂಪೆನಿಯ ಚೈನಾ ಮತ್ತು ಭಾರತದ ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಜಯಕುಮಾರ್, ಇಂಡಿಯಾ ಗ್ರೀನ್ ಫೀಲ್ಡ್ ಪ್ರಾಜೆಕ್ಟ್‌ನ ಸಿ‌ಇ‌ಓ ಸನಕ್‌ಮಿಶ್ರಾ, ಆರ್ಸೆಲಾರ್ ಮಿತ್ತಲ್‌ನ ಕಾರ್ಪೊರೇಟ್ ಕಚೇರಿ ಪ್ರಧಾನ ವ್ಯವಸ್ಥಾಪಕ ನರಸಿಂಹ ಹೆಗಡೆ ಸೇರಿದ ಅಧಿಕಾರಿಗಳ ತಂಡ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಕೈಗಾರಿಕಾ ಸಚಿವ ಮುರಿಗೇಶ್ ನಿರಾಣಿ ಅವರೊಂದಿಗೆ ಅರ್ಧಗಂಟೆ ಮಾತುಕತೆ ನಡೆಸಿತು. ನಂತರ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿಶ್ವದ ಅತಿದೊಡ್ಡ ಕಂಪೆನಿಯೊಂದು ಕರ್ನಾಟಕದಲ್ಲಿ ತನ್ನ ಘಟಕ ತೆರೆಯಲು ಮುಂದೆ ಬಂದಿರುವುದು ಖುಷಿತಂದಿದೆ ಎಂದರು. ಒಟ್ಟಾರೆ ಜೂನ್‌ನಲ್ಲಿ ನಡೆಯುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಪೂರ್ವಭಾವಿಯಾಗಿ ಲಕ್ಷ್ಮಿಮಿತ್ತಲ್ ಅವರ ಆರ್ಸೆಲಾರ್ ರಾಜ್ಯದತ್ತ ಆಕರ್ಷಿತವಾಗಿರುವುದು ರಾಜ್ಯ ಸರ್ಕಾರದ ಪಾಲಿಗೆ ದೊಡ್ಡ ಗೆಲುವೇ ಸರಿ. 

ಯೋಜನೆ ಸ್ವರೂಪ ಹೇಗಿರುತ್ತದೆ? 
೧      ಡಿಸೆಂಬರ್ ೩೦ರೊಳಗೆ ಕೈಗಾರಿಕೆ ಸ್ಥಾಪನೆಯಾಗಬೇಕಾದ ಸ್ಥಳ ಅಂತಿಮವಾಗಲಿದೆ. 
೨ ಕಂಪೆನಿಯು ನಿರೀಕ್ಷಿಸಿರುವಂತೆ ೪,೦೦೦ ಎಕರೆ ಜಮೀನು ನೀಡಲು ಸರ್ಕಾರ ಈಗಾಗಲೇ ಸಿದ್ಧವಾಗಿದೆ. 
೩ ಗಣಿಗಾರಿಕೆ ಗುತ್ತಿಗೆ, ಜಮೀನು, ನೀರು ಇವು ಕಂಪೆನಿ ಸರ್ಕಾರದಿಂದ ಅಪೇಕ್ಷಿಸುತ್ತಿರುವ ಸೌಲಭ್ಯಗಳು. 
೪      ಸಿ‌ಎಂ ನೇತೃತ್ವದ ಉನ್ನತ ಮಟ್ಟದ ಸಮಿತಿಯಿಂದ ಎಲ್ಲವೂ ತೀರ್ಮಾನ. ಕಂಪೆನಿ ಬೇಡಿಕೆಗಳ ಪೂರೈಕೆಗೆ ಯತ್ನ. 
೫ ಮುಂದಿನ ೨ರಿಂದ ೩ ವರ್ಷಗಳಲ್ಲಿ ಕಾರ್ಖಾನೆ ಆರಂಭವಾಗುವ ನಿರೀಕ್ಷೆ. 


ಭೂಸ್ವಾಧೀನ ಸಾಧ್ಯವೇ? 
ಕಂಪನಿಗೆ ೪೦೦೦ ಎಕರೆ ಬೇಕಿದೆ. ರಾಜ್ಯ ಸರ್ಕಾರ ಈಗಾಗಲೇ ಕೈಗಾರಿಕೆಗಾಗಿ ಭೂಬ್ಯಾಂಕ್ ಪ್ರಾರಂಭಿಸಿದೆ. ಏಕಗವಾಕ್ಷಿ ಯೋಜನೆ ಇರುವುದರಿಂದ ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗದು. 

ಮಿತ್ತಲ್ ಕಂಪೆನಿಯೊಂದಿಗೆ ಪೂರ್ವಭಾವಿ ಮಾತುಕತೆ ಮುಗಿದಿದೆ. ಸ್ಥಳ ಆಯ್ಕೆ ಅಂತಿಮವಾಗಬೇಕಾಗಿದೆ. ಆದ್ಯತೆ ಮೇರೆಗೆ ಬೇಡಿಕೆ ಪೂರೈಸಲಾಗುತ್ತದೆ. 
ಬಿ.ಎಸ್.ಯಡಿಯೂರಪ್ಪ 

ಕರ್ನಾಟಕ ಅಭಿವೃದ್ಧಿಯತ್ತ ದಾಪುಗಾಲಿಡುತ್ತಿರುವ ರಾಜ್ಯ. ಸರ್ಕಾರದ ಆಹ್ವಾನದಂತೆ ಇಲ್ಲಿ ವಿಶ್ವದರ್ಜೆಯ ಕಬ್ಬಿಣ, ಉಕ್ಕು ಕಾರ್ಖಾನೆ ಆರಂಭಿಸಲು ಉತ್ಸುಕರಾಗಿದ್ದೇವೆ. 
ಎಲ್.ಎನ್.ಮಿತ್ತಲ್ 

ಯೋಜನೆ ಹೈಲೈಟ್ಸ್ 
೧ ೫೦,೦೦೦ ಕೋಟಿ ರುಪಾಯಿ ಬಂಡವಾಳದ, ವರ್ಷಕ್ಕೆ ೬ ಮಿಲಿಯನ್ ಟನ್ ಕಬ್ಬಿಣ ಮತ್ತು ಕಬ್ಬಿಣ ಉತ್ಪಾದಿಸುವ ಬೃಹತ್ ಯೋಜನೆ ಇದಾಗಿದೆ. 
೨ಪ್ರಥಮ ಹಂತದಲ್ಲಿ ೩೦ ಸಾವಿರ ಕೋಟಿ ರುಪಾಯಿ ಹೂಡಿಕೆ ಮಾಡಲಾಗುತ್ತದೆ. ಎರಡನೇ ಹಂತದಲ್ಲಿ ೨೦,೦೦೦ ಕೋಟಿ ಹೂಡಲಾಗುತ್ತದೆ. 
೩ಹೊಸಪೇಟೆ, ಬಳ್ಳಾರಿ, ಕೊಪ್ಪಳ ಅಥವಾ ರಾಯಚೂರು ಈ ಪೈಕಿ ಒಂದು ಕಡೆ ಘಟಕ ಸ್ಥಾಪನೆಗೆ ಗುರಿಹಾಕಿಕೊಳ್ಳಲಾಗಿದೆ. ಒಟ್ಟು ೭ ಸ್ಥಳ ಪರಿಶೀಲಿಸಲಾಗಿದೆ. 
೪ಕಬ್ಬಿಣ ಉತ್ಪಾದನೆ ಜೊತೆಗೆ ೭೫೦ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನಾ ಘಟಕವೂ ಇರುತ್ತದೆ. 

ರಾಜ್ಯಕ್ಕೇನು ಲಾಭ? 
೧ಯೋಜನೆಯಿಂದ ಒಟ್ಟಾರೆ ೧೦,೦೦೦ಕ್ಕೂ ಹೆಚ್ಚು ಜನರಿಗೆ ಉದ್ಯೋಗ ದೊರೆಯುವುದು. ಇದು ಉತ್ತರ ಕರ್ನಾಟಕ ಭಾಗದ ಜನರಿಗೆ ಆಶಾಕಿರಣ 
೨ಉತ್ತರ ಕರ್ನಾಟಕ ಭಾಗದಲ್ಲಿ ಉದ್ಯೋಗ ದೊರೆಯುವುದಲ್ಲದೇ ಉಪ ಉದ್ಯೋಗಗಳು ಸೃಷ್ಟಿಯಾಗಿ ಆರ್ಥಿಕ ಸ್ಥಿತಿ ಬಲಗೊಳ್ಳುವುದು. 
೩ರಾಜ್ಯದಿಂದ ಅದಿರು ವಿದೇಶಕ್ಕೆ ಮಾರಾಟವಾಗುವುದು ಬಹುತೇಕ ನಿಲುಗಡೆಯಾಗುತ್ತದೆ. ಇಲ್ಲಿನ ಅದಿರು ಇಲ್ಲೇ ಕಬ್ಬಿಣವಾಗುತ್ತದೆ. 
೪ಇದರಿಂದಾಗಿ ಭವಿಷ್ಯದಲ್ಲಿ ಜಾಗತಿಕ ಮಟ್ಟದ ದೊಡ್ಡ ದೊಡ್ಡ ಕಂಪೆನಿಗಳೂ ರಾಜ್ಯದತ್ತ ಒಲವು ತೋರಬಹುದು.


ಸೌಜನ್ಯ: ಕನ್ನಡಪ್ರಭ


Share: