ಭಟ್ಕಳ, ಜನವರಿ ೮: ಭಟ್ಕಳ ತಾಲ್ಲೂಕಿನ ಬೆಳ್ಕೆ ಗ್ರಾಮದಲ್ಲಿ ನಿರ್ಮಿಸಲಾಗಿರುವ ನೂತನ ವಿದ್ಯಾರ್ಥಿನಿಲಯವನ್ನು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಉದ್ಘಾಟಿಸಿದರು. ಗ್ರಾಮದ ಹಿಂದುಳಿದ ವರ್ಗದ ಎಸ್ಸೆಸ್ಸೆಲ್ಸಿ ವಿದ್ಯಥಿಗಳಿಗಾಗಿ ನಿರ್ಮಿಸಲಾಗಿರುವ ಈ ವಿದ್ಯಾರ್ಥಿ ನಿಲಯ ಉತ್ತರ ಕನ್ನಡ ಜಿಲ್ಲಾ ಪರಿಷತ್ ಹಾಗೂ ಕಾರವಾರ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ನಿರ್ಮಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಲ್ಲಿ ಕಾರ್ಯಕರ್ತರು ಪಕ್ಷಬೇಧ ಮರೆತು ಕಾರ್ಯನಿರ್ವಹಿಸಬೇಕು, ಇಲ್ಲಿ ರಾಜಕೀಯ ಸಲ್ಲದು ಎಂದು ಕರೆನೀಡಿದರು. ಈ ವಿದ್ಯಾರ್ಧಿ ನಿಲಯವನ್ನು ಸುಮಾರು ಎಂಭತ್ತೆರೆಡು ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾಗಿದ್ದು ಎಂಭತ್ತು ವಿದ್ಯಾರ್ಥಿಗಳಿಗೆ ವಸತಿ ಕಲ್ಪಿಸಲಿದೆ ಎಂದು ಅವರು ತಿಳಿಸಿದರು.
ಕರ್ನಾಟಕದ ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಬೇಕೆಂಬುದೇ ಸರ್ಕಾರದ ಮಹತ್ವಾಕಾಂಕ್ಷೆಯಾಗಿದ್ದು ಈ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ, ಇದರಿಂದ ರಾಜ್ಯದಲ್ಲಿನ ಅನಕ್ಷರಕ್ಷತೆ ಹೋಗಲಾಡಿಸಬಹುದಾಗಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಭಟ್ಕಳ ಎಂ.ಎಲ್.ಎ. ಶ್ರೀ ಶಿವಾನಂದ ನಾಯಕ್, ಜಿಲ್ಲಾ ಪರಿಷತ್ ಅಧ್ಯಕ್ಷ ದಾಮೋದರ ಗರ್ಡೀಕರ್, ತಾಲ್ಲೂಕುಪಂಚಾಯತಿ ಅಧ್ಯಕ್ಷೆ ಗೌರಿ ಮೊಗೇರ, ತಾ.ಪಂ ಸದಸ್ಯ ಪರಮೇಶ್ವರ ದೇವಾಡಿಗ, ಭಟ್ಕಳ ತಹಸೀಲ್ದಾರ್ ಎಸ್. ಎಂ. ನಾಯಕ್, ತಾ.ಪಂ. ಅಧಿಕಾರಿ ಉದಯ ನಾಯಕ್ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು.