ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಕ್ಕೆ ಧಾರವಾಡ ಜಿಲ್ಲಾಡಳಿತ, ಕನ್ನಡ ಸಂಘಟನೆಗಳಿಂದ ಅದ್ದೂರಿ ಸ್ವಾಗತ

ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಕ್ಕೆ ಧಾರವಾಡ ಜಿಲ್ಲಾಡಳಿತ, ಕನ್ನಡ ಸಂಘಟನೆಗಳಿಂದ ಅದ್ದೂರಿ ಸ್ವಾಗತ

Sun, 04 Dec 2022 05:06:04  Office Staff   SO News

ಧಾರವಾಡ : ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು ಬರುವ ಜನವರಿ 6, 7 ಮತ್ತು 8 ರಂದು ಹಾವೇರಿಯಲ್ಲಿ ಆಯೋಜಿಸಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಮಿತ್ತ ಕನ್ನಡದ ಕಂಪಿನ  ಕನ್ನಡ ಜ್ಯೋತಿಯ ಹೊತ್ತ  ಕನ್ನಡ ರಥವು  ಧಾರವಾಡ ನಗರಕ್ಕೆ ಆಗಮಿಸಿತ್ತು.

ನಗರದ ಟೋಲ್ ನಾಕಾ ಹತ್ತಿರ ಧಾರವಾಡ ಜಿಲ್ಲಾ ಆಡಳಿತದಿಂದ ತಹಸಿಲ್ದಾರ ಸಂತೋಷ ಹಿರೇಮಠ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅವರ ನೇತೃತ್ವದಲ್ಲಿ ಕನ್ನಡದ ರಥವನ್ನು ಕಲಾತಂಡಗಳೊಂದಿಗೆ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಕನ್ನಡ ಜ್ಯೋತಿ ಇರುವ ಕನ್ನಡ ರಥವು ಡಿ.1 ರ ಗುರುವಾರದಂದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಭುವಗಿರಿಯಿಂದ ಹೊರಟಿದ್ದು, ಇಂದು ಜಿಲ್ಲೆಯ ಕಲಘಟಗಿ ತಾಲೂಕಿನ ಮೂಲಕ ಧಾರವಾಡ ಜಿಲ್ಲೆಯನ್ನು ಪ್ರವೇಶಿಸಿತು. ಕಲಘಟಗಿ ತಹಸಿಲ್ದಾರ ಯಲ್ಲಪ್ಪ ಗೊಣೆನ್ನವರ ಮತ್ತು ಕನ್ನಡ ಸಂಘಟನೆಗಳು  ಮಧ್ಯಾಹ್ನ ಕನ್ನಡ ರಥದ ಪೂಜೆಯೊಂದಿಗೆ ಜಿಲ್ಲೆಯ ಗಡಿಯಲ್ಲಿ ಬರಮಾಡಿಕೊಂಡರು. ಸಂಜೆ ಹೊತ್ತಿಗೆ ಕನ್ನಡ ರಥ ಧಾರವಾಡ ನಗರವನ್ನು ಪ್ರವೇಶಿಸಿತು.

ಈ ಸಂದರ್ಭದಲ್ಲಿ  ಧಾರವಾಡ ಜಿಲ್ಲಾಡಳಿತದಿಂದ ತಹಸಿಲ್ದಾರ ಸಂತೋಷ ಹಿರೇಮಠ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅವರ ನೇತೃತ್ವದಲ್ಲಿ ಮಾಜಿ ಲೋಕಸಭಾ ಸದಸ್ಯ ಐ.ಜಿ.ಸನದಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೆರಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಗೌರವ ಪ್ರಧಾನ ಕಾರ್ಯದರ್ಶಿಗಳಾದ ಪ್ರೊ.ಕೆ.ಎಸ್.ಕೌಜಲಗಿ, ಪ್ರೊ. ಜಿನದತ್ತ ಹಡಗಲಿ, ಕೋಶಾಧ್ಯಕ್ಷ ಡಾ.ಎಸ್.ಎಸ್.ದೊಡಮನಿ, ಧಾರವಾಡ ತಾಲೂಕಾ ಅಧ್ಯಕ್ಷೆ ಡಾ.ಶರಣಮ್ಮ ಗೊರೆಬಾಳ, ಹುಬ್ಬಳ್ಳಿ ತಾಲೂಕಾ ಅಧ್ಯಕ್ಷ ಗುರುಸಿದ್ದಪ್ಪ ಬಡಿಗೇರ ಹಾಗೂ ಜಿಲ್ಲೆಯ ಎಲ್ಲ ತಾಲೂಕು ಘಟಕಗಳ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ವಿವಿಧ ಕನ್ನಡ ಸಂಘ, ಸಂಸ್ಥೆ, ಸಂಘಟನೆಗಳ ಪ್ರತಿನಿಧಿಗಳು ಕನ್ನಡ ರಥಕ್ಕೆ ಪುಷ್ಪಾರ್ಪಣೆ ಮಾಡಿ, ಸ್ವಾಗತಿಸಿದರು.

ವಿವಿಧ ಕಲಾ ತಂಡಗಳೊಂದಿಗೆ ಕನ್ನಡ ರಥವು ಟೊಲನಾಕಾದಿಂದ  ಕೋರ್ಟ್ ವೃತ್ತ, ಆಲೂರು ವೆಂಕಟರಾವ್ ವೃತ್ತ, ಕಾಲೇಜ ರೋಡ್ ಮೂಲಕ  ಆರ್.ಎನ್.ಶೆಟ್ಟಿ ಕ್ರೀಡಾಂಗಣ ಹತ್ತಿರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ತಲುಪಿತು. 

ನಂತರ ಜಿಲ್ಲಾ ಸಾಹಿತ್ಯ ಪರಿಷತ್ತು ಅಧ್ಯಕ್ಷರ ನೇತ್ರತ್ವದಲ್ಲಿ ಜಿಲ್ಲಾ ಪದಾಧಿಕಾರಿಗಳು, ಸಾಹಿತಿಗಳು, ಸಂಘಟನೆಗಳ ಸದಸ್ಯರು ಮಾಲಾರ್ಪಣೆ ಮಾಡಿ, ಕನ್ನಡ ರಥಕ್ಕೆ ಗೌರವ ಸಲ್ಲಿಸಿದರು.

ಕನ್ನಡ ರಥವು ನಾಳೆ ಬೆಳಿಗ್ಗೆ ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣಕ್ಕೆ ತೆರಳುತ್ತದೆ. ಕನ್ನಡ ರಥವು ಕನ್ನಡ ಸಾಹಿತ್ಯ ಸೇವಕ ನಭಿಸಾಭ ಕುಷ್ಟಗಿ ಅವರ ನೇತೃತ್ವದಲ್ಲಿ ಕನ್ನಡ ರಥವು ರಾಜ್ಯದಾದ್ಯಂತ ಸಂಚರಿಸುತ್ತಿದೆ.


Share: