ಭಟ್ಕಳ: ನಗರದ ಹಳೆ ಬಸ್ ನಿಲ್ದಾಣದ ಬಳಿಯ ಮೀನು ಮತ್ತು ತರಕಾರಿ ಮಾರುಕಟ್ಟೆಯ ಹೊರ ಭಾಗದಲ್ಲಿ ಹುಚ್ಚು ನಾಯಿಯೊಂದು ಐವರನ್ನು ಕಚ್ಚಿ ಗಾಯಗೊಳಿಸಿದ ಘಟನೆ ವರದಿಯಾಗಿದೆ.
ಗಾಯಗೊಂಡ ನಾಲ್ವರನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಗಾಯಗೊಂಡವರನ್ನು ಕರಿಕಲ್ ನಿವಾಸಿ ಮಾದೇವ ಮೊಗೇರ (65), ಸಿದ್ದೀಕ್ ಸ್ಟ್ರೀಟ್ನ ಮುಹಮ್ಮದ್ ಯಾಸೀನ್ (42), ಹನೀಫಾಬಾದ್ನ ಮೌಲ್ವಿ ಅಬುಲ್ ಹಸನ್ ನದ್ವಿ (21) ಮೌಲ್ವಿ ಇಸ್ಮಾಯಿಲ್ ನದ್ವಿ (29) ಎಂದು ಗುರುತಿಸಲಾಗಿದ್ದು ಇನ್ನೋರ್ವ ಮಹಿಳೆಗೆ ಕೂಡಾ ಕಚ್ಚಿದ್ದು ಅವರ ಗುರುತು ಪತ್ತೆಯಾಗಿಲ್ಲ, ಚಿಕಿತ್ಸೆಗೂ ಕೂಡಾ ಸರಕಾರಿ ಆಸ್ಪತ್ರೆಗೆ ಬಂದಿಲ್ಲ ಎನ್ನಲಾಗಿದೆ.
ಸ್ಥಳದಲ್ಲಿದ್ದ ಭಟ್ಕಳ ಮುಸ್ಲಿಂ ಯೂತ್ ಫೆಡರೇಶನ್ ಮಾಜಿ ಪ್ರಧಾನ ಕಾರ್ಯದರ್ಶಿ ನಸೀಫ್ ಖಲೀಫಾ ನಾಯಿಯಿಂದ ದಾಳಿಗೊಳಗಾದವರನ್ನು ರಕ್ಷಿಸಿದರು ಎನ್ನಲಾಗಿದೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಪುರಸಭೆಯ ಸಿಬ್ಬಂದಿಗಳು ಹುಚ್ಚು ನಾಯಿಯನನು ಹಿಡಿಯುವಲ್ಲಿ ಯಶಸ್ವೀಯಾಗಿದ್ದಾರೆ ಎನ್ನಲಾಗಿದ್ದು ಜನರು ಆತಂಕದಿಂದ ದೂರಾದರು.