ಉಚ್ಚಿಲ: ಕರಾವಳಿಯ ಮೀನುಗಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ತಾನು ಅಧ್ಯಯನ ನಡೆಸಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೆ ಪ್ರತೀ ಲೀ, ಡೀಸೆಲ್ಗೆ 25ರೂ, ಸಬ್ಸಿಡಿಯೊಂದಿಗೆ ಪ್ರತಿದಿನ 500 ಲೀ.ಡೀಸೆಲ್, ಸಮಸ್ತ ಮೀನುಗಾರರಿಗೆ 10 ಲಕ್ಷ ರೂ.ಗಳ ವಿಮಾ ಸೌಲಭ್ಯ ಸೇರಿದಂತೆ ನಾಲ್ಕು ಕೊಡುಗೆಗಳನ್ನು ನೀಡುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜಿಲ್ಲೆಯ ಮೀನುಗಾರರಿಗೆ ಭರವಸೆ ನೀಡಿದ್ದಾರೆ.
ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ಕಾಪು ತಾಲೂಕು ಉಚ್ಚಿಲದ ಶ್ರೀಮಹಾಲಕ್ಷ್ಮೀ ದೇವಸ್ಥಾನದ ಆವರಣದಲ್ಲಿರುವ ಶಾಲಿನಿ ಡಾ. ಜಿ.ಶಂಕರ್ ತೆರೆದ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲೆಯ ಮೀನುಗಾರರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಈ ಆಶ್ವಾಸನೆ ನೀಡಿದರು.
ಮೀನುಗಾರರಿಗೆ 10 ಲಕ್ಷ ರೂ. ವಿಮಾ ಸೌಲಭ್ಯದೊಂದಿಗೆ ಮೀನುಗಾರ ಮಹಿಳೆಯರಿಗೆ ಒಂದು ಲಕ್ಷ ರೂ. ಬಡ್ಡಿರಹಿತ ಸಾಲವನ್ನು ನೀಡುವುದಾಗಿಯೂ ಅವರು ತಿಳಿಸಿದರು.
ಮೀನುಗಾರರಿಗೂ ಕೃಷಿಕರ ಸೌಲಭ್ಯ ನಮ್ಮ ರೈತರು ಹೊಲಗಳಲ್ಲಿ ಬೆವರು ಸುರಿಸಿ ಕೃಷಿ ಮಾಡಿದರೆ, ಮೀನುಗಾರರು ಸಮುದ್ರದಲ್ಲಿ ಕೃಷಿ ಮಾಡುತ್ತಾರೆ. ರೈತರಿಗೆ ನೀಡುವ ಪ್ರೋತ್ಸಾಹ ಹೀಗಾಗಿ ಹಾಗೂ ರಕ್ಷಣೆಯನ್ನು ಮೀನುಗಾರರಿಗೂ ವಿಸ್ತರಿಸುವುದಕ್ಕೆ ತಾನು ಬದ್ಧನಿದ್ದೇನೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ಖಂಡಿತ ಇದನ್ನು ಈಡೇರಿಸುತ್ತದೆ ಎಂದು ನಾನು ನಿಮಗೆ ಆಶ್ವಾಸನೆ ನೀಡುತ್ತೇನೆ ಎಂದರು.