ಭಟ್ಕಳ, ನ.29: ಸಿದ್ಧಾಪುರದ ಲಾಡ್ಜ್ ಒಂದರಲ್ಲಿ ಶುಕ್ರವಾರ ದಂದು ತಾನು ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದೆ ಎಂಬುದು ಪೊಲೀಸರು ರಾಜಕೀಯ ಹಾಗೂ ಮತೀಯ ಶಕ್ತಿಗಳ ಕುತಂತ್ರಕ್ಕೆ ಒಳಗಾಗಿ ಮಾಡಿರುವ ಆರೋಪ ಎಂದು ಹಿಂದೂ ಜಾಗರಣ ವೇದಿಕೆಯ ಉತ್ತರ ಪ್ರಾಂತದ ಸಂಚಾಲಕ ಗೋವಿಂದ ನಾಯಕ್ ಆರೋಪಿಸಿದ್ದಾರೆ.
ಭಟ್ಕಳದಲ್ಲಿ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಹಿಂದೂ ಜಾಗರಣಾ ವೇದಿಕೆಯು ಗೋ ಹತ್ಯೆಗೆ ಸಂಬಂಧಿಸಿದಂತೆ ಪ್ರಬಲ ಹೋರಾಟ ನಡೆಸುತ್ತಿದ್ದು, ಅದರ ಬಲವನ್ನು ಕುಗ್ಗಿಸಲು ಮತೀಯ ಶಕ್ತಿಗಳು ಹೂಡಿದ ಕುತಂತ್ರ ಇದಾಗಿದೆ. ನಮ್ಮ ಪರಿಚಯದವರೇ ಆದ ಮಹಿಳೆಯು ನನ್ನ ಬಳಿ ಸಹಾಯ ಕೇಳಲು ಬಂದಾಗ ಪೊಲೀಸರು ದಾಳಿ ಮಾಡಿ ಅದನ್ನು ವೇಶ್ಯಾವಾಟಿಕೆ ಎಂದು ಬಿಂಬಿಸಿದ್ದಾರೆಂದು ಪೊಲೀಸರ ಮೇಲೆ ಕಿಡಿಕಾರಿದರು.
ಈ ಸಂದರ್ಭದಲ್ಲಿ ಹಿಂದೂ ಜಾಗರಣಾ ವೇದಿಕೆಯ ಗಿರೀಶ್ ನಾಯ್ಕ ಮತ್ತಿತರ ಮುಖಂಡರು ಹಾಜರಿದ್ದರು.