ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಅನಧಿಕೃತ ರೈಲ್ವೆ ಟಿಕೆಟ್ ಬುಕಿಂಗ್: 3 ಆರೋಪಿಗಳ ಬಂಧನ

ಅನಧಿಕೃತ ರೈಲ್ವೆ ಟಿಕೆಟ್ ಬುಕಿಂಗ್: 3 ಆರೋಪಿಗಳ ಬಂಧನ

Thu, 07 Sep 2023 04:55:40  Office Staff   SO News

ಶಿವಮೊಗ್ಗ : ರೈಲ್ವೆ ಪ್ರಯಾಣಿಕರಿಗೆ ಆಗುತ್ತಿರುವ ಅನಾನುಕೂಲತೆಗಳು ಮತ್ತು ಶೋಷಣೆಯನ್ನು ಗಮನದಲ್ಲಿರಿಸಿಕೊಂಡು ಮೈಸೂರು ವಿಭಾಗದ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ವತಿಯಿಂದ ತಾಳಗುಪ್ಪದಲ್ಲಿ ಅನಧಿಕೃತ ರೈಲ್ವೆ ಟಿಕೆಟ್ ಬುಕ್ ಮಾಡುವ ಟ್ರಾವೆಲ್ ಏಜೆಂಟ್‍ರ ವಿರುದ್ಧ ದಾಳಿ ನಡೆಸಿ 3 ಆರೋಪಿಗಳನ್ನು ಬಂಧಿಸಲಾಗಿದೆ.

     ವಿಶೇಷ ದಾಳಿ ವೇಳೆ ತಾಳಗುಪ್ಪದ 3 ಜನ ಗಣೇಶ್ ರಾಮ್ ನಾಯಕ್, 31 ವರ್ಷ (ಶ್ರೀ ರೇಣುಕಾ ಸೈಬರ್ ಸೆಂಟರ್) ರೇವಣ್ಣಪ್ಪ, 36 ವರ್ಷ (ಶ್ರೀ ಸಂವಹನ ಮೊಬೈಲ್ ಮಾರಾಟ) ಮತ್ತು ಪ್ರಶಾಂತ್ ಹೆಗಡೆ, 46 ವರ್ಷ (ಆರ್ಯ ಸೈಬರ್ ವಲಯ) ಇವರನ್ನು ಬಂಧಿಸಲಾಗಿದೆ.

      ಮುಂಬರುವ ಹಬ್ಬಗಳ ಸಮಯದಲ್ಲಿ ಪ್ರಯಾಣಿಕರಿಗೆ ಆಗುವ ಅನಾನುಕೂಲತೆಯನ್ನು ಗಮನದಲ್ಲಿಟ್ಟುಕೊಂಡು ಮತ್ತು  ಪ್ರಯಾಣಿಕರಿಗೆ ಆಗುವ ಶೋಷಣೆಯನ್ನು ತಡೆಯುವ ಉದ್ದೇಶದಿಂದ ಮೈಸೂರು ವಿಭಾಗದ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ವತಿಯಿಂದ ಅನಧಿಕೃತ ರೈಲ್ವೆ ಟಿಕೆಟ್ ಬುಕ್ ಮಾಡುವ ಟ್ರಾವೆಲ್ ಏಜೆಂಟ್ ವಿರುದ್ಧ ಯೋಜನೆ ರೂಪಿಸಿದೆ.

      ಜೆ ಕೆ ಶರ್ಮಾ, ಐಆರ್‍ಪಿಎಫ್‍ಎಸ್, ವಿಭಾಗೀಯ ಭದ್ರತಾ ಆಯುಕ್ತರು, ಆರ್‍ಫಿಎಫ್ ಮೈಸೂರು ಇವರ ನಿರ್ದೇಶನದಂತೆ, ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಯಿತು. ತಂಡದಲ್ಲಿ ಅಪರಾಧ ನಿರೀಕ್ಷಕ ಎಂ ನಿಶಾದ್, ಸಬ್ ಇನ್ಸ್‍ಪೆಕ್ಟರ್ ಬಿ ಚಂದ್ರಶೇಖರ್, ಸಹಾಯಕ ಸಬ್ ಇನ್ಸ್‍ಪೆಕ್ಟರ್‍ಗಳಾದ ವೆಂಕಟೇಶ್ ಮತ್ತು ಈಶ್ವರ್ ರಾವ್, ಹೆಡ್ ಕಾನ್‍ಸ್ಟೆಬಲ್ ಡಿ ಚೇತನ್ ಮತ್ತು ಸಿಬ್ಬಂದಿ ವತಿಯಿಂದ ಶಿವಮೊಗ್ಗದ ವ್ಯಾಪ್ತಿಯಲ್ಲಿ  ಬೃಹತ್ ದಾಳಿ ನಡೆಸಲಾಗಿತ್ತು.

       3 ಸೈಬರ್ ವಲಯಗಳ ಮೇಲೆ ದಾಳಿ ನಡೆಸಿ ಅನಧಿಕೃತ ಟಿಕೆಟಿಂಗ್ ಬುಕ್ ಮಾಡುವ ಗ್ಯಾಂಗ್ ಗಳನ್ನು ಪತ್ತೆಹಚ್ಚಲಾಯಿತು.  ಪ್ರಯಾಣಿಕರಿಗೆ ವಿಪರೀತ ಶುಲ್ಕ ವಿಧಿಸುವ ಮೂಲಕ ಇ-ಟಿಕೆಟ್‍ಗಳನ್ನು ಉತ್ಪಾದಿಸಲು ಬಳಸುತ್ತಿದ್ದ ಒಟ್ಟು ರೂ 2.5 ಲಕ್ಷ ಮೌಲ್ಯದ ರೈಲ್ವೆ ಇ-ಟಿಕೆಟ್‍ಗಳು ಮತ್ತು 1.25 ಲಕ್ಷಕ್ಕೂ ಹೆಚ್ಚು ಮೌಲ್ಯದ ಕಂಪ್ಯೂಟರ್, ಪ್ರಿಂಟರ್, ಮೊಬೈಲ್ ಪೋನ್‍ಗಳಂತಹ ಗ್ಯಾಜೆಟ್‍ಗಳನ್ನು ವಶಪಡಿಸಿಕೊಳ್ಳಲಾಯಿತು. ಹಬ್ಬ ಹರಿದಿನದಂತಹ ಒತ್ತಡದ ಸಮಯದಲ್ಲಿ  ಬೇರೆ ಬೇರೆ ಪೋನ್ ಸಂಖ್ಯೆಗಳಿಗೆ ಲಿಂಕ್ ಆದ ಬಹುವ್ಯಕ್ತಿ ಐಡಿಗಳನ್ನು  ಮತ್ತು ಅನಧಿಕೃತವಾಗಿ ಇ-ಟಿಕೆಟ್ ಜನರೇಟ್ ಮಾಡಿ ಜನರಿಂದ ಹೆಚ್ಚಿನ ಕಮಿಷನ್‍ನನ್ನು ಚಾರ್ಜ್ ಮಾಡುವುದು ಈ ಗ್ಯಾಂಗ್‍ಗಳ ಕೆಲಸವಾಗಿದೆ.

      ಆದ್ದರಿಂದ ಮೈಸೂರು ರೈಲ್ವೆ ವಿಭಾಗದ  ವಿಭಾಗೀಯ ರೈಲ್ವೆ ಮ್ಯಾನೇಜರ್ ಶಿಲ್ಪಿ ಅಗರ್ವಾಲ್, ಐಆರ್‍ಎಎಸ್, ಇವರು, ರೈಲ್ವೆ ಪ್ರಯಾಣಿಕರನ್ನು ಗುರಿಯಾಗಿಸುವ ಅನಧಿಕೃತ ಟ್ರಾವೆಲ್ ಏಜೆಂಟ್‍ಗಳ ವಿರುದ್ಧ ಇಂತಹ ಬೃಹತ್ ದಾಳಿಗಳನ್ನು ಮುಂದುವರಿಸಲಾಗುವುದು ಮತ್ತು ಪ್ರಯಾಣಿಕರಿಗೆ ಆಗುವ ಅನಾನುಕೂಲದಿಂದ ರಕ್ಷಿಸಲು ಎಲ್ಲಾ ಪ್ರಯತ್ನಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.  ಇಂತಹ ಟ್ರಾವೆಲ್ ಏಜೆಂಟ್‍ಗಳೊಂದಿಗೆ ಜಾಗರೂಕರಾಗಿರಿ ಮತ್ತು ಅವರ ದುರಾಸೆಗೆ ಬೀಳದಂತೆ ಪ್ರಯಾಣಿಕರಿಗೆ ಎಚ್ಚರಿಸಿದ್ದಾರೆ.


Share: