ಅಂಕೋಲಾ: ತಾಲೂಕಿನ ವಜ್ರಳ್ಳಿ ಬಳಿ ರಾ ಹೆದ್ದಾರಿ 63ರಲ್ಲಿ ರಾಸಾಯನಿಕ ತುಂಬಿದ ಲಾರಿಯೊಂದಕ್ಕೆ ಬೆಂಕಿ ತಾಗಿದೆ. ಪರಿಣಾಮವಾಗಿ ಲಾರಿ ಸಂಪೂರ್ಣ ಸುಟ್ಟು ಕರಕಲಾದ ಘಟನೆ ಶುಕ್ರವಾರ ನಡೆದಿದೆ.
ಘಟನೆಯಲ್ಲಿ ಅದೃಷ್ಟವಶಾತ್ ಲಾರಿ ಕ್ಲೀನರ್ ಹಾಗೂ ಡ್ರೈವರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾಸಾಯನಿಕ ತುಂಬಿದ ಲಾರಿ ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆಗೆ ತೆರಳುತಿತ್ತು. ರಾಸಾಯನಿಕ ತುಂಬಿದ್ದ ಲಾರಿ ಮಂಗಳೂರಿಗೆ ತೆರಳುತ್ತಿತ್ತು.
ವಜ್ರಳ್ಳಿ ಬಳಿ ಆಕಸ್ಮಿಕವಾಗಿ ಲಾರಿಗೆ ಬೆಂಕಿ ಕಾಣಿಸಿಕೊಂಡಿದ್ದರಿಂದ ಚಾಲಕ ಲಾರಿಯನ್ನು ರಸ್ತೆಯಂಚಿಗೆ ಕೊಂಡೊಯ್ದಿದ್ದಾನೆ. ಈ ವೇಳೆ ಬೆಂಕಿ ತೀವ್ರಗೊಂಡಿದ್ದರಿಂದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಸಿಬ್ಬಂದಿಗಳು, ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ಬಂದರು. ಅಷ್ಟರೊಳಗೆ ಬೆಂಕಿ ಇಡೀ ಲಾರಿಯನ್ನೇ ವ್ಯಾಪಿಸಿತ್ತು. ಬೆಂಕಿಯ ಕೆನ್ನಾಲಿಗೆಯಿಂದಾಗಿ ಸುತ್ತಮುತ್ತಲಿನ ಪ್ರದೇಶಕ್ಕೂ ಬೆಂಕಿ ತಗುಲಿತ್ತು. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರ ಸಾಹಸ ಪಡಬೇಕಾಯಿತು. ಅಂಕೋಲಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.