ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಅ. 8 ರಂದು ಐಟಾ ದ.ಕ. ಜಿಲ್ಲಾ ಶೈಕ್ಷಣಿಕ ಸಮ್ಮೇಳನ

ಅ. 8 ರಂದು ಐಟಾ ದ.ಕ. ಜಿಲ್ಲಾ ಶೈಕ್ಷಣಿಕ ಸಮ್ಮೇಳನ

Fri, 06 Oct 2023 23:26:16  Office Staff   SOnews

ಮಂಗಳೂರು: ಅಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್(ಐಟಾ) ಶಿಕ್ಷಕರ ರಾಷ್ಟ್ರ ಮಟ್ಟದ ಸಂಘಟನೆಯಾಗಿದ್ದು ಇದರ ವತಿಯಿಂದ 'ಬೋಧನಾ ಪ್ರಬುದ್ಧತೆ, ಪ್ರತಿಭಾ ಶೋಷಣೆ, ಸಮಾಜ ಪರಿವರ್ತನೆ" ಎಂಬ ಧೈಯವಾಕ್ಯದಡಿ ರಾಷ್ಟ್ರೀಯ ಶೈಕ್ಷಣಿಕ ಅಭಿಯಾನವನ್ನು  ಸೆ. 24ರಿಂದ ಅ. 15ರ ವರೆಗೆ ಹಮ್ಮಿಕೊಳ್ಳಲಾಗಿದೆ. ಈ ಪ್ರಯುಕ್ತ ಹಿರಾ ಕಾಲೇಜು ಸಭಾಂಗಣ ಬಬ್ಬುಕಟ್ಟೆ ತೊಕ್ಕೊಟ್ಟಿನಲ್ಲಿ ಅ.8 ರಂದು ಬೆಳಗ್ಗೆ 9:30 ರಿಂದ ಮಧ್ಯಾಹ್ನ 1:00 ರ ವರೆಗೆ ದಕ್ಷಿಣ ಕನ್ನಡ ಜಿಲ್ಲಾ ಶೈಕ್ಷಣಿಕ ಸಮಾವೇಶ ಮತ್ತು ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಐಟಾ ಉಳ್ಳಾಲ ಅಧ್ಯಕ್ಷ ಡಾ. ಮುಹಮ್ಮದ್ ಮುಬೀನ್ ಹೇಳಿದರು.

ನಗರದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಐಟಾ ಕರ್ನಾಟಕ ರಾಜ್ಯಾಧ್ಯಕ್ಷ ಮುಹಮ್ಮದ್ ರಝಾ ಮಾನ್ವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು, ಪಿ.ಎ. ಪ್ರಥಮ ದರ್ಜೆ ಕಾಲೇಜು, ನಡುಪದವು ಪ್ರಾಂಶುಪಾಲ ಡಾ. ಸರ್ಫಾರ ಜೆ ಹಾಕಿಂ, ಶೈಕ್ಷಣಿಕ ಮಾರ್ಗದರ್ಶನ ಮಾಡುವರು. ಜಮೀಯ್ಯತುಲ್ ಫಲಾಹ್ ದ.ಕ ಮತ್ತು ಉಡುಪಿ ಜಿಲ್ಲಾಧ್ಯಕ್ಷ ಕೆ.ಕೆ. ಶಾಹುಲ್‌ ಹಮೀದ್‌, ಬದ್ರಿಯಾ ಪದವಿ ಪೂರ್ವ ಕಾಲೇಜು ನಿವೃತ್ತ ಪ್ರಾಂಶುಪಾಲ ಡಾ.ಎನ್. ಇಸ್ಮಾಈಲ್ ಹಿರಾ ಮಹಿಳಾ ಕಾಲೇಜು ಪ್ರಾಂಶುಪಾಲೆ ಫಾತಿಮ ಮೆಹರೂನ್, ಸಮನ್ವಯ ಶಿಕ್ಷಕರ ಸಂಘ ದ.ಕ. ಜಿಲ್ಲಾಧ್ಯಕ್ಷ ಅಬ್ದುಲ್‌ ಮಜೀದ್‌ ಎಸ್‌ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. `ಆದರ್ಶ ಶಿಕ್ಷಕ-ತಮ್ಮ ಅನುಭವದ ಆಧಾರದಲ್ಲಿ ವಿಷಯದಲ್ಲಿ ವಿಚಾರಗೋಷ್ಠಿ ನಡೆಯಲಿದ್ದು ಇದರಲ್ಲಿ ಟಿಪ್ಪು ಸುಲ್ತಾನ್ ವಿದ್ಯಾಸಂಸ್ಥೆ, ಕೋಟೆಪುರ, ನಿವೃತ್ತ ಮುಖ್ಯೋಪಾಧ್ಯಾಯ ಎಂ.ಹೆಚ್, ಮಲಾರ್‌, ಸರಕಾರಿ ಪ್ರೌಢಶಾಲೆ ಸುಜೀರ್ ನಿವೃತ್ತ ಶಿಕ್ಷಕ ಬಿ. ಮೊಹಮ್ಮದ್ ತುಂಬೆ, ಸರಕಾರಿ ಪ್ರೌಢಶಾಲೆ ಸಜೀಪ ಮೂಡ ನಿವೃತ್ತ ಶಿಕ್ಷಕ ಅಮಾನುಲ್ಲಾಹ್ ಖಾನ್ ಭಾಗವಹಿಸುವರು. ಹತ್ತು ಮಂದಿ ನಿವೃತ್ತ ಶಿಕ್ಷಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಿದ್ದು ಅಭಿನಂದನಾ ಭಾಷಣವನ್ನು ಸೈಯ್ಯದ್ ಮದನಿ ಹಿ.ಪ್ರಾ. ಶಾಲೆ ಹಳೆಕೋಟೆ ಮುಖ್ಯ ಶಿಕ್ಷಕ ಕೆ.ಎಂ.ಕೆ. ಮಂಜನಾಡಿ ನಿರ್ವಹಿಸುವರು. ಸಮ್ಮೇಳನದಲ್ಲಿ ಶಿಕ್ಷಕರು, ಶಿಕ್ಷಣ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಪಾಲಕರು ಭಾಗವಹಿಸಲಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಐಟಾ ದ.ಕ ಜಿಲ್ಲಾಧ್ಯಕ್ಷ ಮುಹಮ್ಮದ್ ಹನೀಫ್, ಐಟಾ ಉಳ್ಳಾಲ ಕಾರ್ಯದರ್ಶಿ ಕೆ.ಎಂ.ಕೆ. ಮಂಜನಾಡಿ, ಹಿರಾ ಶಿಕ್ಷಣ ಸಂಸ್ಥೆಯ ಕರೆಸ್ಪಾಂಡೆಂಟ್ ರಹ್ಮತುಲ್ಲಾಹ್ ಉಪಸ್ಥಿತರಿದ್ದರು.


Share: