ಚಿಕ್ಕಬಳ್ಳಾಪುರ ಡಿ.೮ : ಗ್ರಾಮೀಣ ಭಾಗದಲ್ಲಿನ ಮೂಲಭೂತ ಸಮಸ್ಯೆಗಳ ಹಾಗೂ ಇನ್ನಿತರೆ ಸ್ಥಳಿಯ ಸಮಸ್ಯೆಗಳ ನಿವಾರಣೆಗಾಗಿ ಪಕ್ಷ ಬೇದವಿಲ್ಲದೆ ಎಲ್ಲಾ ಸ್ಥಳೀಯ ಸಂಸ್ಥೆಗಳು ಹಾಗೂ ಚುನಾಯಿತ ಪ್ರತಿನಿಧಿಗಳು ತಮಗೆ ಮತನೀಡಬೇಕೆಂದು ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಂದ ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯ ಬಿಜೆಪಿ ಪಕ್ಷದ ಅಭ್ಯರ್ಥಿ ವೈ.ಸುರೇಂದ್ರ ಗೌಡ ಮನವಿ ಮಾಡಿದರು.
ಅವರು ನಗರದ ಸಿಟಿಜನ್ ಕ್ಲಬ್ನಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡುತ್ತಾ, ಪ್ರಸ್ತುತ ವಿಧಾನ ಪರಿಷತ್ ಸದಸ್ಯರಾಗಿರುವ ನಸೀರ್ ಅಹ್ಮದ್ ಕಳೆದ ಅವಧಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಯಾವುದೇ ಕಾರ್ಯಕ್ರಮಗಳಿಗೆ ಪಾಲ್ಗೊಂಡಿಲ್ಲ ಎಂದು ಟೀಕೆ ಮಾಡಿದರು.
ಗ್ರಾಮೀಣ ಭಾಗಕ್ಕೆ ಅನುದಾನವು ಸರಿಯಾಗಿ ವಿತರಣೆ ಯಾಗದೆ ವ್ಯರ್ಥವಾಗಿದೆ. ಸಮಸ್ಯೆಗಳ ಬಗ್ಗೆ ವಿಧಾನಪರಿಷತ್ನಲ್ಲಿ ಚರ್ಚೆಯನ್ನೇ ನಡೆಸದ ಇಂತಹವರಿಗೆ ಪುನಃ ಮತವನ್ನು ನೀಡಬೇಡಿ ಎಂದು ಅವರು ಮನವಿ ಮಾಡಿದರು.
ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳು ಎರಡೂ ಜಿಲ್ಲೆಗಳು ಬರದಿಂದ ಕೂಡಿವೆ. ಶಾಶ್ವತ ನೀರಾವರಿ ಯೋಜನೆಯು ಜಾರಿಗೆ ಬರಬೇಕು. ರೈತರ ಸಮಸ್ಯೆಗಳಾದ ಬಿತ್ತನೆ ಬೀಜ, ನೀರು, ವಿದ್ಯುತ್ ಪೂರೈಕೆ ಹಾಗೂ ಇನ್ನಿತರೆ ಸಮಸ್ಯೆಗಳ ಬಗ್ಗೆ ತಮಗೆ ತಿಳಿದಿರುವುದಾಗಿ ಅವರು ತಿಳಿಸಿದರು.
ಕಳೆದ ೨೫ ವರ್ಷಗಳಿಂದ ಗ್ರಾಮೀಣ ಭಾಗದ ಜನತೆಯ ಸಮಸ್ಯೆಗಳಿಗೆ ಸ್ಫಂದಿಸುತ್ತಿದ್ದು, ಬಡ ವಿದ್ಯಾರ್ಥಿಗಳಿಗಾಗಿ ತಮ್ಮ ಶಿಕ್ಷಣ ಸಂಸ್ಥೆಯ ವತಿಯಿಂದ ಉಚಿತ ಶಿಕ್ಷಣ ಹಾಗೂ ಪ್ರತಿ ವರ್ಷ ಮುಳಬಾಗಿಲು ತಾಲೂಕಿನಲ್ಲಿ ಉಚಿತ ಸಾಮೂಹಿಕ ವಿವಾಹಗಳನ್ನು ನಡೆಸುತ್ತಿರುವುದಾಗಿ ತಿಳಿಸಿದ ಅವರು ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷ ಬೇದವಿಲ್ಲದೆ ಎಲ್ಲರೂ ತಮ್ಮನ್ನು ಬೆಂಬಲಿಸಬೇಕೆಂದು ಕೋರಿದರು.
ಘೋಷ್ಠಿಯಲ್ಲಿ ಬಿ.ಜೆ.ಪಿ ವಕ್ತಾರ ಲೋಕೇಶ್, ಎಪಿಎಂಸಿ ಅಧ್ಯಕ್ಷ ಚಂದ್ರಶೇಖರ್, ಉಪಾಧ್ಯಕ್ಷ ಮೋಹನ್ ಮುರಳಿ, ಮುಖಂಡರಾದ ಪಿ.ಎಂ.ರಘು ಮುಂತಾದವರು ಉಪಸ್ಥಿತರಿದ್ದರು.