ಮಂಗಳೂರು, ಅಕ್ಟೋಬರ್ 26:ಆಸ್ಟ್ರೇಲಿಯಾದಷ್ಟೇ ಪ್ರಭಾವಶಾಲಿಯಾದ ವ್ಯಾಸಂಗ ವ್ಯವಸ್ಥೆ ಭಾರತದಲ್ಲೇ ಇರುವ ಕಾರಣ ಭಾರತೀಯ ವಿದ್ಯಾರ್ಥಿಗಳು ಆಸ್ಟ್ರೇಲಿಯಾಕ್ಕೆ ಮುಗಿಬೀಳಬೇಕಾಗಿಲ್ಲ ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಕಿವಿಮಾತುಹೇಳಿದ್ದಾರೆ.
ನಗರದಲ್ಲಿ ಭಾನುವಾರ ಮಾತನಾಡಿದ ಅವರು ಅನವಶ್ಯಕವಾಗಿ ಆಸ್ಟ್ರೇಲಿಯಾಕ್ಕೆ ತೆರಳಿ ಭಾರತೀಯ ವಿದ್ಯಾರ್ಥಿಗಳು ತೊಂದರೆಗೆ ಸಿಲುಕಿಕೊಳ್ಳಬೇಕಾಗಿಲ್ಲ ಎಂದರು. ‘ಆಸ್ಟ್ರೇಲಿಯಾಗೆ ತೆರಳುವ ವಿದ್ಯಾರ್ಥಿಗಳು ಅಲ್ಲೇ ನೆಲೆನಿಲ್ಲುವ ಉದ್ದೇಶ ಹೊಂದಿರುವುದು ಕಳವಳಕಾರಿ. ಪ್ರಸ್ತುತ ೮೩ ಸಾವಿರ ಭಾರತೀಯ ವಿದ್ಯಾರ್ಥಿಗಳು ಆಸ್ಟ್ರೇಲಿಯಾದಲ್ಲಿ ಕಲಿಯುತ್ತಿದ್ದಾರೆ. ಅಲ್ಲಿಗೆ ಶಿಕ್ಷಣಕ್ಕಾಗಿ ಹೋಗುವುದಕ್ಕೆ ಉತ್ತೇಜನ ನೀಡಬಾರದು’ ಎಂದರು.
ತಾನು ಆಸ್ಟ್ರೇಲಿಯಾಕ್ಕೆ ಭೇಟಿ ನೀಡಿ ಸರ್ಕಾರದ ಜತೆ ಮಾತುಕತೆ ನಡೆಸಿದ್ದೇನೆ, ಈಗ ಭಾರತೀಯ ವಿದ್ಯಾರ್ಥಿಗಳ ಮೇಲೆ ಹಲ್ಲೆ ಪ್ರಕರಣ ಕಡಮೆಯಾಗಿದೆ ಎಂದೂ ಕೃಷ್ಣ ತಿಳಿಸಿದರು.
ಚೀನಾದೊಂದಿಗೆ ಸೌಹಾರ್ದ: ಅರುಣಾಚಲ ಪ್ರದೇಶದ ತವಾಂಗ್ ಪ್ರಾಂತ್ಯಕ್ಕೆ ದಲೈ ಲಾಮಾ ಭೇಟಿ ನೀಡುವುದಕ್ಕೆ ಅಪಸ್ವರ ಎತ್ತಿರುವ ಚೀನಾದ ಹೊಸ ವರಸೆಯಿಂದ ಕೃಷ್ಣ ಚಿಂತಿತರಾಗಿಲ್ಲ.
ಅವರ ಪ್ರಕಾರ ಥಾಯ್ಲ್ಯಾಂಡ್ನಲ್ಲಿ ನಡೆದ ಸಮಾವೇಶದ ಸಂದರ್ಭದಲ್ಲಿ ಚೀನಾ ಮತ್ತು ಭಾರತ ಪ್ರಧಾನಿಗಳು ಮಾತುಕತೆ ನಡೆಸಿದ್ದು, ಉಭಯ ದೇಶಗಳ ಸೌಹಾರ್ದ ಸಂಬಂಧ ಮುಂದುವರಿಯಲಿದೆ. ಅರುಣಾಚಲ ಪ್ರದೇಶ, ದಲೈಲಾಮಾ ವಿಚಾರವಾಗಿ ಭಾರತ ಈಗಾಗಲೇ ತನ್ನ ನಿಲವನ್ನು ಪ್ರದರ್ಶಿಸಿದೆ ಎಂದರು.
ಸೌಜನ್ಯ: ಕನ್ನಡಪ್ರಭ