ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಹೊರಬಂದ ಕುಟುಂಬಗಳಿಗೆ ಸರಕಾರದಿಂದ ಪರಿಹಾರ ವಿತರಣೆ:

ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಹೊರಬಂದ ಕುಟುಂಬಗಳಿಗೆ ಸರಕಾರದಿಂದ ಪರಿಹಾರ ವಿತರಣೆ:

Mon, 08 Mar 2010 18:28:00  Office Staff   S.O. News Service
ಬೆಳ್ತಂಗಡಿ, ಮಾ.೮: ಕುದುರೆಮುಖ ರಾಷ್ಟೀಯ ಉದ್ಯಾನವನದ ಒಳಗಿನ ನಕ್ಸಲ್ ಪೀಡಿತ ಪ್ರದೇಶದ ನಿವಾಸಿಗಳಾಗಿರುವ ಕುಟುಂಬಗಳು ಸರಕಾರ ನೀಡಿದ  ಪರಿಹಾರವನ್ನು ಸ್ವೀಕರಿಸಿ  ಅರಣ್ಯದಿಂದ ಹೊರಬಂದಿದ್ದಾರೆ. ಬೆಳ್ತಂಗಡಿಯಲ್ಲಿ ಇಂದು ನಡೆದ ಸರಳ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರ  ಈ ಪರಿಹಾರವನ್ನು  ವಿತರಿಸಿದರು. ತಾಲೂಕಿನ ನಾವೂರು ಗ್ರಾಮದ  ಆರು ಕುಟುಂಬಗಳು ಹಾಗೂ ಕುತ್ಲೂರು ಗ್ರಾಮದ ೫ ಕುಟುಂಬಗಳು ಪರಿಹಾರ ಸ್ವೀಕರಿಸಿದರು. ಕುಟುಂಬ ಗಳಿಗೆ ಒಟ್ಟು ೮೨ ಲಕ್ಷ ರೂ. ವಿತರಿಸಲಾಯಿತು.

ಪರಿಹಾರ ವಿತರಿಸಿ ಮಾತನಾಡಿದ ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರ, ಸರಕಾರ ಪರಿಹಾರವನ್ನು ಕೇವಲ ಹತ್ತು ಲಕ್ಷಕ್ಕೆ ಸೀಮಿತಗೊಳಿಸಿರುವುದು ಸರಿಯಲ್ಲ. ಮೂಲನಿವಾಸಿಗಳು ಹೊರಗೆ ಬಂದು ಬದುಕುರೂಪಿಸಲು ಅಗತ್ಯವಿರುವ ಹಣ ಒದಗಿಸಬೇಕು ಎಂದು ಒತ್ತಾಯಿಸಿದರು. 

ಅರಣ್ಯದಲ್ಲಿ ಬದುಕುವುದು ಮೂಲನಿ ವಾಸಿಗಳ ಹಕ್ಕು. ಅವರ ರಸ್ತೆಗೆ, ಕುಡಿಯುವ ನೀರಿಗೆ ತಡೆಯೊಡ್ಡಬೇಡಿ. ಅರಣ್ಯದಲ್ಲಿಯೇ ಬದುಕುತ್ತೇವೆ ಎಂದು ಹೇಳುವವರಿಗೆ ತೊಂದರೆ ನೀಡಲು ಮುಂದಾಗ ಬೇಡಿ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಎಚ್ಚರಿಸಿದರು.

ಈ ಸಂದರ್ಭದಲ್ಲಿ  ನಾವೂರು ಗ್ರಾಮದ ಬಾಬು, ರಪ್ಪ, ದೂಮಯ್ಯ,  ಸತೀಶ, ವಾರಿಜ, ಲೋಕಯ್ಯ ಹಾಗೂ ಕುತ್ಲೂರು ಗ್ರಾಮದ ಸುಂದರ, ವೆಂಕಪ್ಪ, ಅಪ್ಪಿ, ಸುರೇಶ್, ಹೊನ್ನಮ್ಮ ಪರಿಹಾರ ಸ್ವೀಕರಿಸಿ ಹೊರ ಬಂದರು. ಪುತ್ತೂರು ಸಹಾಯಕ ಕಮಿಷನರ್ ಡಾ.ಹರೀಶ್ ಕುಮಾರ್, ಅರಣ್ಯ ಇಲಾಖೆಯ ವನ್ಯಜೀವ ವಿಭಾಗದ ಅಧಿಕಾರಿಗ ಳಾದ ಪ್ರಕಾಶ್ ಹಾಗೂ ಅಬ್ಬಾಸ್ ಉಪಸ್ಥಿತರಿದ್ದರು.

ನಕ್ಸಲರ ಹೆಸರಿನಲ್ಲಿ ಪೊಲೀಸರು ನೀಡುತ್ತಿರುವ ಕಿರುಕುಳ ಅತಿಯಾಗಿದ್ದು, ಈ ಕಾರಣದಿಂದಾಗಿಯೇ ಜನ ಹೊರಬರಲು ಸಿದ್ಧರಾಗುತ್ತಿದ್ದಾರೆ ಎಂದ ಶಾಸಕರು, ಜನರ ಹೋರಾಟ ಎಂದಿಗೂ ನ್ಯಾಯ ಯುತವಾಗಿರಲಿ ಅನಗತ್ಯವಾಗಿ ನಕ್ಸಲಿಸಂನಂತಹ  ದಾರಿಗೆ ತೆರಳಿ ಜೀವ ಕಳೆದು ಕೊಳ್ಳಬೇಡಿ ಎಂದು ಯುವಕರಿಗೆ ಸಲಹೆ ನೀಡಿದರು.

Share: