ಕಾರವಾರ, ನವೆಂಬರ್ 29: ಕೈಗಾ ಅಣುಸ್ಥಾವರದಲ್ಲಿ ಘಟಕ-೧ ರ ನಿರ್ವಹಣೆಯ ವೇಳೆ ಕರ್ತವ್ಯದಲ್ಲಿದ್ದ ಸಿಬ್ಬಂದಿಯ ಆರೋಗ್ಯ ತಪಾಸಣೆ ಮಾಡಲಾಗಿದೆ. ಸಾಮಾನ್ಯಕ್ಕಿಂತ ಕೊಂಚ ಅಸ್ವಸ್ಥತೆ ಕಾಣಿಸಿಕೊಂಡ ಕಾರಣ ಕೈಗಾ ಸ್ಥಾವರಕ್ಕೆ ಸೇರಿದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಆರೋಗ್ಯ ತಪಾಸಣೆ ನಡೆದಿದೆ. ಆದರೆ ಆತಂಕ ಪಡುವಂಥದೇನಿಲ್ಲ ಎಂದು ಕೈಗಾ ಅಣುಸ್ಥಾವರ ಕೇಂದ್ರದ ನಿರ್ದೇಶಕರು ಜಿಲ್ಲಾಡಳಿತಕ್ಕೆ ಸ್ಪಷ್ಟಪಡಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಎನ್.ಎಸ್.ಚೆನ್ನಪ್ಪಗೌಡ ತಿಳಿಸಿದ್ದಾರೆ.
ಇಂದು ದೂರವಾಣಿ ಮುಖಾಂತರ ಜಿಲ್ಲಾಧಿಕಾರಿಗಳನ್ನು ಪತ್ರಿಕೆ ಸಂಪರ್ಕಿಸಿದಾಗ ‘ಕೈಗಾ ಅಣುಸ್ಥಾವರಕ್ಕೆ ಉಗ್ರರ ನೆರಳು ಸಹ ಇಲ್ಲ. ಭಯಪಡುವ ಆತಂಕವಿಲ್ಲ. ಅಣುವಿಕರಣದ ಭಯ ಬೇಡ’ ಎಂದು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ. ಕರ್ತವ್ಯ ನಿರತ ಸಿಬ್ಬಂದಿಯಲ್ಲಿ ವಿಕಿರಣ ಪ್ರಮಾಣ ಹೆಚ್ಚಳದ ಬಗ್ಗೆ ತನಿಖೆ ನಡೆಯುತ್ತಿದೆ. ಘಟಕ ನಿರ್ವಹಣೆಯಲ್ಲಿದ್ದ ಸಿಬ್ಬಂದಿ ಆರೋಗ್ಯದಿಂದ ಇದ್ದಾರೆ. ಆಸ್ಪತ್ರೆಯಲ್ಲಿ ತಪಾಸಣೆಗೆ ಬಂದವರು ಮನೆಗೆ ಮರಳಿದ್ದಾರೆಂದು ನಿನ್ನೆ ಸಂಜೆ ಜಿಲ್ಲಾಡಳಿತಕ್ಕೆ ಕೈಗಾ ಸ್ಥಾವರ ಅಧಿಕಾರಿಗಳಿಂದ ಬಂದಿದೆ ಎಂದು ಹೇಳಿದರು.
ಭಾರಜಲ ಅಥವಾ ಮತ್ತೊಂದು ರೀತಿಯ ಲೀಕೇಜ್ ಘಟಕದ ಒಳಗೆ ಕಾಣಿಸಿಕೊಂಡದ್ದು ನಿಜವೇ? ಎಂದು ವಿಜ್ಞಾನಿಗಳು ತಂಡ ಪತ್ತೆ ಹಚ್ಚಲಿದೆ. ಭಯೋತ್ಪಾದಕರು ಏನಾದರೂ ಘಟಕದ ಒಳ ನುಸುಳಿ ಇಂಥ ಕೃತ್ಯ ಎಸಗಿದರು ಎಂಬ ಕಲ್ಪನೆ ಮಾಡುವುದು ಬೇಡ ಎಂದ ಅವರು ಕೈಗಾ ಅಣುಸ್ಥಾವರಕ್ಕೆ ಅತ್ಯಂತ ಬಿಗಿ ಭದ್ರತೆ ಇದೆ. ಸಣ್ಣ ಪ್ರಮಾಣದ ತಪ್ಪು ನಡೆಯದಂತೆ ಎಚ್ಚರವಹಿಸಲು ಸೂಚಿಸಲಾಗಿದೆ.
ಕೈಗಾ ಅಣುಸ್ಥಾವರದ ಒಳಗಿನ ಸುರಕ್ಷತತೆ ಬಗ್ಗೆ ವಿಜ್ಞಾನಿಗಳು ಕಾಳಜಿ ವಹಿಸುತ್ತಿದ್ದಾರೆ ಎಂದರು. ಈಗ ಆಗಿರುವ ದೋಷದ ಬಗ್ಗೆ ಸಹ ತನಿಖೆ ನಡೆದಿದೆ ಎಂದು ಅವರು ತಿಳಿಸಿದರು.
ವರದಿ: ನಾಗರಾಜ್ ಹರಪನಹಳ್ಳಿ, ಕಾರವಾರ.