ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕೆ.ಎಸ್.ಸಿ.ಎ ಅಂತರ್ ವಲಯ ಕ್ರಿಕೆಟ್ ಮಂಗಳೂರು ವಲಯ ಪ್ರಥಮ ಸ್ಥಾನ

ಕೆ.ಎಸ್.ಸಿ.ಎ ಅಂತರ್ ವಲಯ ಕ್ರಿಕೆಟ್ ಮಂಗಳೂರು ವಲಯ ಪ್ರಥಮ ಸ್ಥಾನ

Wed, 28 Sep 2022 01:02:52  Office Staff   SO News

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಸರೆಯಲ್ಲಿ ಬೆಂಗಳೂರಿನ ವಿವಿಧ ಮೈದಾನಗಳಲ್ಲಿ ಜರುಗುತ್ತಿರುವ 19 ವರ್ಷ ಕೆಳಹರೆಯದವರ ಅಂತರ್ ವಲಯ ಕ್ರಿಕೆಟ್ ಪಂದ್ಯಾಟದಲ್ಲಿ ಮಂಗಳೂರು ವಲಯ ತಂಡವು ತಾನಾಡಿದ ಐದೂ ಪಂದ್ಯಗಳಲ್ಲಿ ಮೇಲ್ಗೈನ್ನು ಸಾಧಿಸಿ ಗುಂಪಿನಲ್ಲಿ ಪ್ರಥಮ ಸ್ಥಾನಿಯಾಗಿ ಅಭೂತಪೂರ್ವ ಸಾಧನೆ ಗೈದಿತು.

ಪ್ರಬಲ ಧಾರವಾಡ ವಲಯದೊಂದಿಗೆ ನಡೆದ ಅಂತಿಮ ಪಂದ್ಯದಲ್ಲಿ ಧಾರವಾಡ ವಲಯವು ಪ್ರಥಮ ಇನ್ನಿಂಗ್ಸ್‌ನಲ್ಲಿ ಆಶೀಷ್ ನಾಯಕ್‍ರವರ ಮಾರಕ ಆಫ್ ಸ್ಪಿನ್ ದಾಳಿಗೆ ಸಿಲುಕಿ 203 ರನ್‍ಗಳ ಮೊತ್ತಕ್ಕೆ ಸರ್ವ ಪತನವನ್ನು ಕಂಡಿತು. ಆಶೀಷ್‍ರವರು 56 ರನ್‍ಗಳಿಗೆ 7 ವಿಕೇಟುಗಳನ್ನು ಪಡೆದರು. ಎರಡನೆಯ ದಿನದಾಟದಲ್ಲಿ ಮಂಗಳೂರು ವಲಯವು ನಿಶ್ಚಿತ್ ಪೈ ರವರ ಜವಾಬ್ದಾರಿಯುತ 49 ರನ್, ಋಷಿತ್ 36, ಋಷಿ 33 ಇವರ ಬ್ಯಾಟಿಂಗ್ ನೆರವಿನಿಂದ 208 ರನ್‍ಗಳ ಮೊತ್ತವನ್ನು ಗಳಿಸಿ ಅಮೂಲ್ಯ ಪ್ರಥಮ ಇನ್ನಿಂಗ್ಸ್ ಮುನ್ನಡೆಯನ್ನು ಪಡೆಯಿತು.

ಹಿಂದಿನ ಪಂದ್ಯಗಳಲ್ಲಿ ಮಂಗಳೂರು ವಲಯವು ಬೆಂಗಳೂರು ಸಿಟಿ ಇಲೆವೆನ್, ಪ್ರೆಸಿಡೆಂಟ್ ಇಲೆವೆನ್, ರಾಯಚೂರು, ಸೆಕ್ರೆಟರಿ ಇಲೆವೆನ್ ತಂಡಗಳ ವಿರುದ್ಧ ಡ್ರಾ ಗೊಂಡ ಪಂದ್ಯಗಳಲ್ಲಿ ಪ್ರಥಮ ಇನ್ನಿಂಗ್ಸ್ ಮುನ್ನಡೆಯನ್ನು ಸಾಧಿಸಿ ಮೇಲುಗೈಯನ್ನು ಸಾಧಿಸಿತ್ತು. ಬೆಂಗಳೂರು ಸಿಟಿ ಇಲೆವೆನ್ ವಿರುದ್ಧದ ಪಂದ್ಯದಲ್ಲಿ ಮಂಗಳೂರು ವಲಯವು ರಯಾನ್‍ರವರ ಅಜೇಯ ಶತಕದ ಮೂಲಕ 90 ಓವರುಗಳಲ್ಲಿ 7 ವಿಕೇಟುಗಳ ನಷ್ಟಕ್ಕೆ 337 ರನ್‍ಗಳ ಉತ್ತಮ ಮೊತ್ತವನ್ನು ಗಳಿಸಿದರೆ ದಿಟ್ಟ ಉತ್ತರ ನೀಡಿದ ಬೆಂಗಳೂರು ತಂಡವು 90 ಓವರುಗಳಲ್ಲಿ 8 ವಿಕೇಟುಗಳನ್ನು ಕಳೆದುಕೊಂಡು 325 ರನ್‍ಗಳನ್ನಷ್ಟೆ ಗಳಿಸಲು ಶಕ್ತವಾಯಿತು.


Share: