ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / 'ಗಂಧದ ಗುಡಿ' ಬೈಕ್ ರ್ಯಾಲಿಗೆ ಚಾಲನೆ

'ಗಂಧದ ಗುಡಿ' ಬೈಕ್ ರ್ಯಾಲಿಗೆ ಚಾಲನೆ

Mon, 17 Oct 2022 01:05:43  Office Staff   ANI


ಬೆಂಗಳೂರು: ಪ್ರಕೃತಿ ಮತ್ತು ಮನುಷ್ಯನ ನಡುವಿನ ಗಾಢ ಸಂಬಂಧವನ್ನು ನಟ ಪುನೀತ್ ರಾಜಕುಮಾರ್ ತಮ್ಮ ಜೀವಿತಾವಧಿಯಲ್ಲಿ ತೋರಿಸಿದ್ದು, ನಮಗೆ ಮಾದರಿಯಾಗಿ ಹೋಗಿದ್ದಾರೆ ಎಂದು ಉನ್ನತ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ನೆನಪಿಸಿಕೊಂಡಿದ್ದಾರೆ.
ಅರಣ್ಯ ಭವನದಲ್ಲಿ ಏರ್ಪಡಿಸಿದ್ದ ಗಂಧದ ಗುಡಿ ಬೈಕ್ ರ್ಯಾಲಿ ಉದ್ಘಾಟನೆ ಮತ್ತು ಸಸಿ ನೆಡುವಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಅರಣ್ಯ ಭವನದಿಂದ ಕಾವೇರಿ ಚಿತ್ರಮಂದಿರದವರೆಗೆ ಸಚಿವರು ಸ್ವತಃ ಬೈಕ್ ಚಾಲನೆ ಮಾಡಿ ರ್ಯಾಲಿಗೆ ಚಾಲನೆ ನೀಡಿದರು.
ಗಂಧದ ಗುಡಿ ಸಿನಿಮಾದ ಟೀಸರ್ ಬಿಡುಗಡೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಟ್ವಿಟರ್ ಮೂಲಕ ಶುಭ ಹಾರೈಸಿದ್ದಾರೆ. ಈ ಸಿನಿಮಾ ಕನ್ನಡ ನಾಡಿನ ನಿಸರ್ಗ ವೈಭವವನ್ನು ಸೆರೆ ಹಿಡಿದಿದೆ ಎಂದು ಅವರು ಬಣ್ಣಿಸಿದರು.
ಇತ್ತೀಚೆಗೆ ಹವಾಮಾನ ಬದಲಾವಣೆ ದೊಡ್ಡ ಸಮಸ್ಯೆ ಆಗಿದೆ. ನಮ್ಮಲ್ಲಿ ಕೂಡ ಇತ್ತೀಚೆಗೆ ಅಕಾಲಿಕ ಮಳೆ ವಿಪರೀತವಾಗಿದೆ. ಪ್ರಕೃತಿಯನ್ನು ಗೌರವಿಸುವುದೇ ಇದಕ್ಕೆ ಪರಿಹಾರ ಎಂದು ಅವರು ನುಡಿದರು.
ಪುನೀತ್ ಅವರು ಸಮಾಜಮುಖಿ ವ್ಯಕ್ತಿಯಾಗಿದ್ದರು. ಸದ್ದಿಲ್ಲದೆ ಕೆಲಸ ಮಾಡುತ್ತಿದ್ದ ಅವರು, ಹಲವು ಮೌಲ್ಯಗಳನ್ನು ಅಳವಡಿಸಿ ಕೊಂಡಿದ್ದರು. ಸಾದಾಸೀದಾ ಆಗಿದ್ದ ಅವರು ಒಂದು ಮೇಲ್ಪಂಕ್ತಿಯನ್ನು ಬಿಟ್ಟು ಹೋಗಿದ್ದಾರೆ ಎಂದು ಅವರು ತಿಳಿಸಿದರು.
ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸುವುದು ನಮ್ಮ ಗುರಿ ಆಗಬೇಕು. ಜತೆಗೆ ಪ್ರತಿಯೊಂದು ವಿಚಾರದಲ್ಲೂ ಸಾಮಾಜಿಕ ಬದ್ಧತೆ ಇರಬೇಕು. ಇದೇ ಪುನೀತ್ ಅವರಿಗೆ ಸಲ್ಲಿಸುವ ಗೌರವವಾಗಿದೆ ಎಂದು ಸಚಿವರು ಹೇಳಿದರು.
ಕಾರ್ಯಕ್ರಮದಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್, ಚಿತ್ರದ ನಿರ್ದೇಶಕ ಜೆ. .ಎಸ್. ಅಮೋಘವರ್ಷ ಮುಂತಾದವರು ಉಪಸ್ಥಿತರಿದ್ದರು.

 


Share: