ಭಟ್ಕಳ, ಜನವರಿ ೩೦: ಜಿಲ್ಲಾ ಮಟ್ಟದ ಟ್ವೆಂಟಿ20 ಕ್ರಿಕೆಟ್ ಪಂದ್ಯಾವಳಿ - 'ಟಿಪ್ಪೂ ಸುಲ್ತಾನ್ ಟ್ರೋಫಿ' ಯನ್ನು ನಿನ್ನೆ ಭಟ್ಕಳ ಎಂ.ಎಲ್.ಎ. ಶ್ರೀ ಜೆ.ಡಿ ನಾಯಕ್ ರವರಿಂದ ಉದ್ಘಾಟಿಸಲ್ಪಟ್ಟಿತು.
ನಗರದ ವೈಎಂ.ಎಸ್.ಎ. ಮೈದಾನದಲ್ಲಿ ನಡೆಯಲಾಗುತ್ತಿರುವ ಈ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ಆಟದ ಹೊತ್ತಿನಲ್ಲಿ ಕ್ರೀಡಾಪಟುಗಳು ಸಂಪೂರ್ಣ ಗಮನ ನೀಡಬೇಕೆಂದು ಸಲಹೆ ನೀಡಿದರು. ಈಗ ಜೆಲ್ಲಾ ಮಟ್ಟದಲ್ಲಿ ನಡೆಯುತ್ತಿರುವ ಪಂದ್ಯಾವಳಿಗೆ ರಾಜ್ಯಮಟ್ಟದ ದರ್ಜೆ ನೀಡಲು ತಮ್ಮ ಕೈಲಾದ ಪ್ರಯತ್ನ ಹಾಗೂ ಸಹಕಾರವನ್ನು ನೀಡಲಿದ್ದೇನೆ ಎಂದು ಅವರು ಘೋಷಿಸಿದರು. ಭಟ್ಕಳ ನಗರದಲ್ಲಿ ಸುಜಜ್ಜಿತ ಕ್ರೀಡಾಂಗಣವೊಂದನ್ನು ನಿರ್ಮಿಸಲು ಈಗಾಗಲೇ ಹಣ ಬಿಡುಗಡೆಯಾಗಿದ್ದು ಸಾಧ್ಯವಾದಷ್ಟು ಬೇಗನೇ ಉಪಯೋಗಿಸಿಕೊಳ್ಳಲಾಗುವುದು ಎಂದು ನುಡಿದರು. ಪ್ರಸ್ತುತ ಆಟ ನಡೆಯುತ್ತಿರುವ ವೈಎಮ್ ಎಸ್ ಎ ಮೈದಾನದಲ್ಲಿಯೇ ಕ್ರೀಡಾಂಗಣ ನಿರ್ಮಿಸಲು ಸಾಧ್ಯವೇ ಎಂದು ಅವರು ನೆರೆದಿದ್ದ ಗಣ್ಯರಲ್ಲಿ ಪ್ರಶ್ನಿಸಿದರು. ಒಂದು ವೇಳೆ ಈ ಮೈದಾನದಲ್ಲಿ ಕ್ರೀಡಾಂಗಣ ನಿರ್ಮಿಸಲು ಅಸಾಧ್ಯವಾದರೆ ಬಿಡುಗಡೆಯಾದ ಹಣ ಬೇರೆಡೆಗೆ ವರ್ಗಾವಣೆಯಾಗುವ ಸಂಭವವಿದೆ ಎಂದು ತಿಳಿಸಿದರು.
ಭಟ್ಕಳ ಮುನಿಸಿಪಾಲಿಟಿ ಅಧ್ಯಕ್ಷ ಪರ್ವೇಜ್ ಕಾಶಿಂಜೀಯವರು ನಾಣ್ಯ ಚಿಮ್ಮುವ ಮೂಲಕ ಪ್ರಥಮ ಬ್ಯಾಟಿಂಗ್ ನಡೆಸುವ ತಂಡವನ್ನು ಆಯ್ಕೆ ಮಾಡಿದರೆ ಶ್ರೀ ಜೆ.ಡಿ. ನಾಯ್ಕರು ಪ್ರಥಮ ಬೌಲಿಂಗ್ ಎದುರಿಸುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದರು.
ಪಂದ್ಯಾವಳಿಯಲ್ಲಿ ಜಿಲ್ಲೆಯ ಒಟ್ಟು ಹದಿನಾರು ತಂಡಗಳು ಆಗಮಿಸಿದ್ದು ಉತ್ತಮ ಸ್ಪರ್ಧೆ ನೀಡುವ ತವಕದಲ್ಲಿವೆ.
ಈ ಸಂದರ್ಭದಲ್ಲಿ ಮುಹಮ್ಮದ್ ಇಕ್ಬಾಲ್ ಕೋಲಾ, ಇಸ್ಮಾಯಿಲ್ ಹಲ್ಲಾರೆ, ಅಬ್ದುಸ್ ಸತ್ತಾರ್ ಕಾಝಿಯಾ, ಗಿರೀಶ್ ನಾಯಕ್ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು.
ಉದ್ಘಾಟನಾ ಸಮಾರಂಭ ಉಮೈರ್ ಸಿದ್ದಿಬಾಪಾರವರ ಕುರಾನ್ ಪಠಣದೊಂದಿಗೆ ಪ್ರಾರಂಭವಾಯಿತು. ರಿಜ್ವಾನ್, ಉಮೈರ್ ಹಾಗೂ ಉಜ್ಮಾನ್ ರವರು ಸುಲ್ತಾನ್ ವೆಲ್ಫೇರ್ ಅಸೋಸಿಯೇಶನ್ ಗೀತೆಯನ್ನು ಹಾಡಿದರು. ಅಬ್ದುಸ್ ಸಮಿ ಮಾದಿಕಲ್ ಸ್ವಾಗತಿಸಿದರೆ ಮುಬಾಶಿರ್ ಹಲ್ಲಾರೆಯವರು ಕಾರ್ಯಕ್ರಮದ ನಿರೂಪಣೆ ನೀಡಿದರು ಹಾಗೂ ಅವರೇ ವಂದನಾರ್ಪಣೆಯನ್ನೂ ಸಲ್ಲಿಸಿದರು.