ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆದ ಚನ್ನಪಟ್ಟಣ ಹನುಮಾನ ದೇವರ ಬ್ರಹ್ಮ ರಥೋತ್ಸವ

ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆದ ಚನ್ನಪಟ್ಟಣ ಹನುಮಾನ ದೇವರ ಬ್ರಹ್ಮ ರಥೋತ್ಸವ

Fri, 31 Mar 2023 12:40:43  Office Staff   so news

ಭಟ್ಕಳ: ಇಲ್ಲಿನ ಗ್ರಾಮ ದೇವ ಶ್ರೀ ಚೆನ್ನಪಟ್ಟಣ ಹನುಮಂತ ದೇವರ ರಥೋತ್ಸವವು ಗುರುವಾರದಂದು ರಾಮನವಮಿಯ ಪರ್ವಕಾಲದಲ್ಲಿ ಭಕ್ತರ ಹರ್ಷೋದ್ಘಾರಗಳೊಂದಿಗೆ ಅದ್ದೂರಿಯಾಗಿ ಸುಸಂಪನ್ನಗೊಂಡಿತು.
ಶ್ರೀ ಚೆನ್ನಪಟ್ಟಣ ಹನುಮಂತ ದೇವರ ರಥೋತ್ಸವಕ್ಕೆ ಯುಗಾದಿಯ ಮಾರನೆಯ ದಿನದಂದು ಆರಂಭಗೊಳ್ಳುವ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಗರುಡನ ಪಟವನ್ನು ಧ್ವಜಸ್ತಂಭಕ್ಕೆ ಕಟ್ಟುವ ಮೂಲಕ ಚಾಲನೆ ನೀಡಲಾಗಿತ್ತು.
ಪ್ರತಿ ದಿನವೂ ಕೂಡಾ ಒಂದೊಂದು ಉತ್ಸವವಾದಿಗಳು ನಡೆದು, ಸಪ್ತಮಿ ಹಾಗೂ ಅಷ್ಟಮಿಯಂದು ಹೂವಿನ ರಥೋತ್ಸವ ಸಹಸ್ರಾರು ಭಕ್ರವ್ರಂದದೊಂದಿಗೆ ನಡೆಯಿತು. 
ರಾಮನವಮಿ ಯಂದು ಬೆಳಿಗ್ಗೆ ದೇವರು ರಥಾರೋಹಣ ಮಾಡುವ ಮೂಲಕ ಬೆಳಿಗ್ಗೆ ರಥೋತ್ಸವಕ್ಕೆ ಚಾಲನೆ ನೀಡಲಾಗಿದ್ದು ಗುರುವಾರದಂದು ಸಂಜೆ ಸಹಸ್ರಕ್ಕೂ ಅಧಿಕ ಭಕ್ತರ ಹರ್ಷೋದ್ಘಾರಗಳ ನಡುವೆ ರಾಮ ಭಕ್ತನ ಹನುಮನ ರಥೋತ್ಸವ ಜರುಗಿತು. ಸಂಪ್ರದಾಯದಂತೆ  ಜೈನ ಹಾಗು ಮುಸ್ಲಿಂ ಕುಟುಂಬಕ್ಕೆ ಆಹ್ವಾನ ನೀಡುವುದರ ಮೂಲಕ ಜಾತ್ರೆಗೆ ಚಾಲನೆ ನೀಡಲಾಯಿತು.
ಸಹಸ್ರಾರು ಭಕ್ತ ಸಮೂಹದ ಹರ್ಷೊದ್ಘಾರದ ಮಧ್ಯೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರಥವನ್ನ ಕಂಡು ಭಕ್ತರು ಪುನೀತರಾಗಿದ್ದು, ದೇವರಿಗೆ ನಿಂತಲ್ಲಿಯೇ ಕೈ‌ಮುಗಿದು ನಮಸ್ಕರಿಸಿದರು. 
ಯಾವುದೇ ಅಹಿತಕರ ಘಟನೆ ನಡೆಯದಂತೆ  ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಏರ್ಪಡಿಸಿತ್ತು.
ಪ್ರತಿವರ್ಷ ರಾಮನವಮಿಯಂದು  ಜರುಗುವ ಜಾತ್ರೆಯಲ್ಲಿ ಪರಸ್ಪರ ಸೌಹಾರ್ಧತೆಗೆ ಭಟ್ಕಳ ರಥೋತ್ಸವ ಪ್ರಮುಖವಾದದ್ದು. ಗುರುವಾರ ಸಂಜೆ ದೇವರ ಬ್ರಹ್ಮರಥೋತ್ಸವಕ್ಕೂ ಮುನ್ನ ಸಂಪ್ರದಾಯದಂತೆ ದೇವಸ್ಥಾನದ ಆಡಳಿತ ಮಂಡಳಿಯವರು ವಾದ್ಯಘೋಷಗಳ ಮೂಲಕ ತೆರಳಿ ಮುಸ್ಲಿಂ, ಜೈನ ಹಾಗೂ ಪ್ರಭು ಕುಟುಂಬಕ್ಕೆ ವೀಳ್ಯ ಸಮೇತ ಆಹ್ವಾನ ನೀಡಿದ್ದು ಆ ಬಳಿಕ ರಥದಲ್ಲಿ ಹನುಮಂತ ವಿರಾಜಮಾನರಾಗಿ ಕುಳಿತು ಪೂಜಾ ವಿಧಿ ವಿಧಾನದ ನಂತರ ಸಹಸ್ರಾರು ಭಕ್ತರು ಜೈ ಶ್ರೀ ರಾಮ ಘೋಷಣೆ ಕೂಗುತ್ತಾ ರಥವನ್ನು ಎಳೆದು ಹನುಮಂತನ ಸವಾರಿಯ ಮೂಲಕ ರಥೋತ್ಸವ ನಡೆಯಿತು.
ಮುಸ್ಲಿಂ ಸಮುದಾಯದ ಚರ್ಕಿನ್ ಕುಟುಂಬದ ಮೊಹಮ್ಮದ್ ಅನ್ಸಾರಿ, ಇನಾಯತ್ ಉಲ್ಲಾ ಶಾಬಂದ್ರಿ ಹಾಗೂ ಜೈಲಾನಿ ಶಾಬಂದ್ರಿ, ಜೈನ ಸಮುದಾಯದ ಉದಯಕುಮಾರ್ ಜೈನ್, ಪ್ರಭು ಕುಟುಂಬದ ವಾಮನ್ ಪ್ರಭು ದೇಗುಲದ ಆಹ್ವಾನ ಸ್ವೀಕರಿಸಿದರು. ಇದೇ ರೀತಿ ಪ್ರತಿ ವರ್ಷವೂ ಹಿಂದು- ಮುಸ್ಲಿಂ, ಜೈನರಾದಿಯಾಗಿ ಎಲ್ಲ ಧರ್ಮದವರೂ ಪಾಲ್ಗೊಳ್ಳುವುದು ಭಟ್ಕಳ ಜಾತ್ರೆಯ ವಿಶೇಷವಾಗಿದೆ.
ಇನ್ನು ಬ್ರಹ್ಮರಥವನ್ನ ಹೂವಿನ ಪೇಟೆ, ಮುಖ್ಯ ರಸ್ತೆ ಮಾರ್ಗ, ರಥಬೀದಿಯ ಮೂಲ ದೇವಾಲಯದ ಮುಂಭಾಗದವರೆಗೂ ಎಳೆಯಲಾಯಿತು. 
ಜಾತ್ರೆಯಲ್ಲಿ ಪಾಲ್ಗೊಳ್ಳುವ ಸಹಸ್ರಾರು ಸಂಖ್ಯೆಯ ಭಕ್ತರು ರಥವನ್ನ ಎಳೆದು ಪುನೀತರಾಗುವರದ ಜೊತೆಗೆ ಉತ್ಸಾಹದಿಂದ ಪಾಲ್ಗೊಂಡರು. ಭಟ್ಕಳ ಶಾಸಕ ಸುನೀಲ ನಾಯ್ಕ ಕೂಡ ಪಾಲ್ಗೊಂಡು ಯುವಕರೊಂದಿಗೆ ಡಿಜೆ ಸೌಂಡಿಗೆ ಕುಣಿದು ಕುಪ್ಪಳಿಸಿದರು. 
ರಥೋತ್ಸವದ ಸಂದರ್ಬದಲ್ಲಿ ಸುಮಾರು 20 ಸಾವಿಕ್ಕೂ ಅಧಿಕ ಭಕ್ತಾಧಿಗಳು ಪಾಲ್ಗೊಂಡಿದ್ದರು ಎಂದು ಅಂದಾಜಿಸಲಾಗಿದೆ ವಾದ್ಯಗೊಷ್ಟಿ, ತಟ್ಟಿರಾಯ, ಹುಲಿವೇಷ, ಚಂಡೆವಾದ್ಯಗಳು ಬ್ರಹ್ಮರಥೋತ್ಸವಕ್ಕೆ ಮೆರುಗು ತಂದವು. 
ದೇವಸ್ಥಾನದ ಆಡಳಿತಾಧಿಕಾರಿ ಹಾಗೂ ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್. ಅವರು ರಥೋತ್ಸವದ ಕಾರ್ಯಗಳು ಸಾಂಗವಾಗಿ ನೆರವೇರುವಂತೆ ನೋಡಿಕೊಂಡರು. 
ದೇವಸ್ಥಾನದ ರಥೋತ್ಸವ ಕಾರ್ಯದ ಧಾರ್ಮಿಕ ವಿಧಿ ವಿದಾನಗಳನ್ನು ವೇ.ಮೂ. ರಮಾನಂದ ಅವಭೃತ ಅವರ ನೇತೃತ್ವದ ಅರ್ಚಕರ ತಂಡ ನೆರವೇರಿಸಿದರು. ದೇವಸ್ಥಾನದ ಅರ್ಚಕ ಪ್ರಮೋದ ಶಂಕರ ಭಟ್ ಬಚ್ಚೋಡಿ ಅವರು ದೇವರ ಪೂಜಾ ಕಾರ್ಯಗಳನ್ನು ನೆರವೇರಿಸಿದರು.
ರಥೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಸುನಿಲ ನಾಯ್ಕ, ಮಾಜಿ ಶಾಸಕ ಮಂಕಾಳ ಎಸ್. ವೈದ್ಯ, ಬ್ಲಾಕ ಕಾಂಗ್ರೆಸ್ ಮಾಜಿ ಅಧ್ಯಕ್ಷ ವಿಠಲ್ ನಾಯ್ಕ,ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀಧರ ಮೊಗೇರ, ಶಿವರಾಮ ನಾಯ್ಕ,ನಾಗೇಶ ಪೈ, ಪ್ರಮುಖರಾದ ಸುರೇಂದ್ರ ಭಟ್ಕಳ, ಗೋವಿಂದ ನಾಯ್ಕ, ರಾಜೇಶ ನಾಯ್ಕ, ಈಶ್ವರ ಎನ್. ನಾಯ್ಕ, ಕೃಷ್ಣಾ ನಾಯ್ಕ ಆಸರಕೇರಿ,ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ ಅವರ ಮಾರ್ಗದರ್ಶನದಲ್ಲಿ ಜಿಲ್ಲಾ ಪೋಲಿಸ್ ಹೆಚ್ಚುವರಿ ವರಿಷ್ಠಾಧಿಕಾರಿ ಸಿ.ಟಿ.ಜಯಕುಮಾರ, ಭಟ್ಕಳ ಉಪ ವಲಯ ಪೋಲೀಸ್ ನಿರೀಕ್ಷಕ ಶ್ರೀಕಾಂತ ಕೆ. ಅವರ ನೇತ್ರತ್ವದಲ್ಲಿ 400 ಕ್ಕೂ ಅಧಿಕ ಪೋಲಿಸರು ಬಂದೋಬಸ್ತ ವ್ಯವಸ್ಥೆ ನೀಡಿದರು.


Share: