ಕುಂದಾಪುರ, ಮಾ. ೫: ಬೈಂದೂರಿನ ಮೀನುಗಾರರ ಹಲವಾರು ವರ್ಷದ ಬೇಡಿಕೆಗೆ ಸರಕಾರ ಸ್ಪಂದಿಸಿದೆ. ನಾಗೂರು ಬಳಿಯ ನದಿ-ಸಮುದ್ರ ಸಂಗಮದ ಕೊಡೇರಿಯಲ್ಲಿ ಕಿರುಬಂದರು ನಿರ್ಮಾಣಕ್ಕೆ ರಾಜ್ಯ ಸರಕಾರ ೨೦೧೦-೧೧ನೇ ಸಾಲಿನ ಬಜೆಟ್ನಲ್ಲಿ ೧೦ ಕೋಟಿ ರೂ. ವೆಚ್ಚದಲ್ಲಿ ಕಿರು ಬಂದರು ನಿರ್ಮಾಣಕ್ಕೆ ಬಜೆಟ್ನಲ್ಲಿ ಹಣ ಕಾದಿರಿಸಿ ಹಸಿರು ನಿಶಾನೆ ತೋರಿಸಿದೆ.
ಕಳೆದ ೧೫ ವರ್ಷಗಳಿಂದಲೂ ಕೊಡೇರಿ ಬಂದರು ನಿರ್ಮಾಣದ ಬಗ್ಗೆ ಮೀನುಗಾರರು ಬೇಡಿಕೆ ಮಂಡಿಸುತ್ತಲೇ ಇದ್ದರೂ ಈವರೆಗೆ ಸರಕಾರ ಸ್ಪಂದಿಸಿರಲಿಲ್ಲ. ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ನವೀನ್ಚಂದ್ರ ಉಪ್ಪುಂದ ಹಾಗೂ ಮೀನುಗಾರರ ಮುಖಂಡರು ಸರಕಾರಕ್ಕೆ ಈ ಹಿಂದೆ ೧೨ ಕೋಟಿ ರೂ. ವೆಚ್ಚದ ಕಿರು ಬಂದರು ನಿರ್ಮಾಣದ ಬಗ್ಗೆ ಪ್ರಾಸ್ತಾವನೆ ಸಲ್ಲಿಸಿದ್ದರು.
ಸುಮಾರು ೩೦ ಸಾವಿರಕ್ಕೂ ಅಧಿಕ ಮೀನುಗಾರರು ಈ ವ್ಯಾಪ್ತಿಯಲ್ಲಿದ್ದು, ಮೀನುಗಾರಿಕೆಗಾಗಿ ಬಹುತೇಕ ಗಂಗೊಳ್ಳಿ, ಭಟ್ಕಳ, ಹೊನ್ನಾವರ ಮೊದಲಾದ ಬಂದರುಗಳನ್ನು ಅವಲಂಬಿಸಿದ್ದರು. ನಾಡದೋಣಿ, ಟ್ರಾಲ್ ಹಾಗೂ ಪರ್ಸಿನ್ ಸೇರಿದಂತೆ ೩೦೦ಕ್ಕೂ ಅಧಿಕ ದೋಣಿಗಳು ಈ ಪ್ರದೇಶ ದಲ್ಲಿವೆ.
ಮೀನುಗಾರರ ಬೇಡಿಕೆಯಂತೆ ಈ ಬಾರಿ ಸರಕಾರ ಬಜೆಟ್ನಲ್ಲಿ ಸರಕಾರ ಕಾದಿರಿಸಿರುವ ೧೦ ಕೋಟಿ ರೂ.ಗಳಲ್ಲಿ ಕಿರುಬಂದರಿಗೆ ಪೂರಕವಾದ ಬ್ರೇಕ್ ವಾಟರ್ ಯೋಜನೆ, ಡ್ರಿಜ್ಜಿಂಗ್, ಸಾಂಪ್ರ ದಾಯಕ ನಾಡದೋಣಿಗಳು ತಂಗುವ ಜಟ್ಟಿಗಳು, ಕೂಡು ರಸ್ತೆಗಳು, ಹರಾಜು ಪ್ರಾಂಗಣಗಳು ನಿರ್ಮಾಣವಾಗಲಿವೆ. ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರ ಚುನಾವಣಾ ಪೂರ್ವ ಆಶ್ವಾಸನೆ ಈ ಬಜೆಟ್ನಲ್ಲಿ ಈಡೇರಿದಂತಾಗಿದೆ.