ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ವಿಶ್ವ ಬೈಸಿಕಲ್ ದಿನ ಮತ್ತು ವಿಶ್ವ ಪರಿಸರ ದಿನ: ಜನಜಾಗೃತಿ ಜಾಥಾ ಆಯೋಜನೆ

ವಿಶ್ವ ಬೈಸಿಕಲ್ ದಿನ ಮತ್ತು ವಿಶ್ವ ಪರಿಸರ ದಿನ: ಜನಜಾಗೃತಿ ಜಾಥಾ ಆಯೋಜನೆ

Tue, 07 Jun 2022 05:04:50  Office Staff   SO News

ಧಾರವಾಡ :  'ಇರುವುದೊಂದೆ ಭೂಮಿ' ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಸುಸ್ಥಿರವಾಗಿ ಬದುಕೋಣ ಎಂಬ ಧ್ಯೇಯ ವಾಕ್ಯದೊಂದಿಗೆ ವಿಶ್ವ ಬೈಸಿಕಲ್ ದಿನ ಮತ್ತು ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಜನಜಾಗೃತಿ ಜಾಥಾ ಜರುಗಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ನೆಹರು ಯುವ ಕೇಂದ್ರ, ರಾಷ್ಟ್ರೀಯ ಸೇವಾ ಸಂಘ ಮತ್ತು ಸ್ಥಳೀಯ ಸಂಸ್ಥೆಗಳ ಸಹಯೋಗದೊಂದಿಗೆ ಇಂದು ಬೆಳಿಗ್ಗೆ ಡಿಎಚ್‍ಓ ಕಾರ್ಯಾಲಯದ ಆವರಣದಲ್ಲಿ ಆರಂಭಗೊಂಡ ಜನಜಾಗೃತಿ ಜಾಥಾಕ್ಕೆ  ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ಸಿ ಕರಿಗೌಡರ ಚಾಲನೆ ನೀಡಿದರು.

ನಂತರ  ಮಾತನಾಡಿದ ಅವರು, ಎಲ್ಲ ಜೀವರಾಶಿಗಳಿಗೂ ಪರಿಸರವೇ ಮೂಲಾಧಾರವಾಗಿದೆ. ಪರಿಸರ ಮತ್ತು ಮಾನವ ಇವರೆಡು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಪರಿಸರವನ್ನು ನಾವು ಎಷ್ಟು ಸ್ವಚ್ಛವಾಗಿಟ್ಟುಕೊಳ್ಳುತ್ತೇವೋ ಹಾಗೆ ಅಷ್ಟು ಸುರಕ್ಷಿತವಾಗಿರಬಹುದು. ಪರಿಸರ ರಕ್ಷಣೆ, ಗಿಡಮರಗಳನ್ನು ನೆಡುವುದು, ಪರಿಸರಕ್ಕೆ ಹಾನಿ ಆಗದ ಹಾಗೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ಕ್ಷೇತ್ರ ಶಿಕ್ಷಣಧಿಕಾರಿ ಗಿರೀಶ ಪದಕಿ ಮಾತನಾಡಿ, ಪರಿಸರ ರಕ್ಷಣೆ ನಮ್ಮ ಆದ್ಯಕರ್ತವ್ಯವಾಗಿದೆ. ಮುಂದಿನ ಜನಾಂಗಕ್ಕೆ ಪರಿಸರವನ್ನು ಉಳಿಸಬೇಕಾದ ಹೊಣೆಗಾರಿಕೆ ನಮ್ಮ ಮೇಲಿದೆ. ಪ್ರತಿಯೊಬ್ಬರೂ ಈ ಕೆಲಸ ಮಾಡಬೇಕು. ಕಾಡು ಉಳಿಸಿದರೆ ನಮ್ಮ ನಾಡನ್ನು ಕಾಪಾಡಿಕೊಳ್ಳಬಹುದು ಎಂದರು.

ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಗೌತಮ್ ರೆಡ್ಡಿ,  ಜಿಲ್ಲಾ ಕುಷ್ಟರೋಗ ನಿರ್ಮೂಲನಾಧಿಕಾರಿ ಡಾ. ಶಶಿ ಪಾಟೀಲ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ಸುಜಾತಾ ಹಸವಿಮಠ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರೇಖಾ ಬಾಡಗಿ, ತಾಲೂಕಾ ಆರೋಗ್ಯಧಿಕಾರಿ ಡಾ. ತನುಜಾ ಕೆ.ಎನ್, ಜಿಲ್ಲಾ ಆರ್.ಸಿ.ಎಚ್.ಓ. ಡಾ.ಎಸ್.ಎಂ. ಹೊನಕೇರಿ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಮಂಜುನಾಥ ಎಸ್, ಮನೋವೈದ್ಯರಾದ ಡಾ. ವೈಶಾಲಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಆರ್. ಪಾತ್ರೋಟ, ಕೆ.ಕೆ ಚವ್ಹಾಣ, ಎಮ್.ಎನ್. ಅಗಡಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರು ಹಾಗೂ ಪ್ರಜೇಂಟೇಷನ್ ಶಾಲೆಯ ವಿದ್ಯಾರ್ಥಿಗಳಿ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಜನಜಾಗೃತಿ ಜಾಥಾ ಅಭಿಯಾನವು ಜಿಲ್ಲಾ ಆರೋಗ್ಯ ಇಲಾಖೆ ಕಚೇರಿಯಿಂದ  ಪ್ರಾರಂಭವಾಗಿ ಹಳೆಯ ಎಸ್.ಪಿ. ಸರ್ಕಲ್, ಎಲ್.ಇ.ಎ. ಕ್ಯಾಂಟೀನ ರಸ್ತೆ, ಎಚ್.ಡಿ.ಎಂ.ಸಿ ಆಸ್ಪತ್ರೆ, ಶಿವಾಜಿ ಸರ್ಕಲ್, ಬಿ,ಆರ್.ಟಿ.ಎಸ್ ಬಸ್ ಸ್ಟ್ಯಾಂಡ್ ಮತ್ತು ಜ್ಯುಬಿಲಿ ವೃತ್ತ ಮತ್ತಿತರ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿತು.


Share: