ಅಂಕೋಲಾ : ಲಂಚ ಪಡೆಯುತ್ತಿದ್ದ ಅಬಕಾರಿ ಮಹಿಳಾ ಅಧಿಕಾರಿಯೋರ್ವರು ಎಸಿಬಿ ಬಲೆಗೆ ಬಿದ್ದ ಘಟನೆ ಮಂಗಳವಾರ ಅಂಕೋಲಾದಲ್ಲಿ ನಡೆದಿದೆ.
ಪ್ರೀತಿ ರಾಠೋಡ್ ಬಲೆಗೆ ಬಿದ್ದ ಅಬಕಾರಿ ನಿರೀಕ್ಷಕಿಯಾಗಿದ್ದಾರೆ. ಪ್ರಕರಣವೊಂದರ ಸಂಬಂಧ ಲಂಚ ಪಡೆಯುತ್ತಿರುವ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದಾರೆ. ಕಾರವಾರದ ಎಸಿಬಿ ಡಿ.ವೈ.ಎಸ್.ಪಿ ಪ್ರಕಾಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಕೆಲ ದಿನಗಳ ಹಿಂದೆ ಅಂಕೋಲಾದ ಹಾರವಾಡದಲ್ಲಿ ಕಾರವಾರ ಮೂಲದ ಮುಸ್ತಾಕ್ ಎಂಬುವವರು ದ್ವಿಚಕ್ರ ವಾಹನವನ್ನ ಮದ್ಯ ಸಾಗಿಸುತ್ತಿದ್ದ ಆರೋಪದ ಮೇಲೆ ಜಪ್ತಿಮಾಡಲಾಗಿತ್ತು. ಮುಸ್ತಾಕ್ ಹಸನ್ ಎಂಬುವವರ ಮೇಲೆ ಪ್ರಕರಣ ದಾಖಲಿಸಲಾಗಿತ್ತು.
ದ್ವಿಚಕ್ರ ವಾಹನವು ಮುಸ್ತಾಕ್ ಎಂಬುವವರ ಸ್ನೇಹಿತನದ್ದಾಗಿದ್ದು ಆತನ ವಿರುದ್ದವೂ ಪ್ರಕರಣ ದಾಖಲಿಸುವುದಾಗಿ ಪ್ರೀತಿ ರಾಥೋಡ್ ಬೆದರಿಸಿದ್ದರು ಎಸ್ ನ್ನಲಾಗಿದೆ. ವಾಹನ ಮತ್ತು ಮೂಲ ದ್ವಿಚಕ್ರ ವಾಹನದ ವಾರಸುದಾರನನ್ನು ಪ್ರಕರಣದಿಂದ ಕೈ ಬಿಡಲು 50 ಸಾವಿರ ರೂ. ಲಂಚ ಕೇಳಿದ್ದರು. ಇದಲ್ಲದೇ ಹಲವು ಬಾರಿ ಆರೋಪಿಗೆ ದೂರವಾಣಿ ಕರೆಮಾಡಿ ಹಣ ನೀಡುವಂತೆ ದಮ್ಕಿ ಹಾಕಿದ್ದರು.
ಈ ಕುರಿತು ಮುಸ್ತಾಕ್ ಎಸಿಬಿ ಕಚೇರಿಗೆ ದೂರು ನೀಡಿದ ಹಿನ್ನಲೆಯಲ್ಲಿ ಮಂಗಳವಾರ ಕಚೇರಿಯಲ್ಲಿ ಹಣ ಸ್ವೀಕರಿಸುವಾಗ ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.