ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮುಡೇಶ್ವರದ ಆರ್.ಎನ್.ಎಸ್. ಸಭಾ ಭವನದಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಮುಡೇಶ್ವರದ ಆರ್.ಎನ್.ಎಸ್. ಸಭಾ ಭವನದಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

Wed, 22 Jun 2022 05:26:47  Office Staff   SO NEWS

ಭಟ್ಕಳ: ಮುಡೇಶ್ವರದ ಆರ್.ಎನ್.ಎಸ್. ಸಭಾ ಭವನದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ನಿಮಿತ್ತ ಏರ್ಪಡಿಸಲಾಗಿದ್ದ ಯೋಗ ದಿನಾಚರಣೆಯನ್ನು ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್. ಅವರು ಉದ್ಘಾಟಿಸಿದರು. 
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಮ್ಹಾತೋಬಾರ ಮುರುಡೇಶ್ವರ ದೇವಸ್ಥಾನ, ನೇತ್ರಾಣಿ ಅಡ್ವಂಚರ್ಸ್ ಮುರ್ಡೇಶ್ವರ, ಪತಂಜಲಿ ಯೋಗ ಸಮಿತಿ, ಲಯನ್ಸ್ ಕ್ಲಬ್ ಮುರ್ಡೇಶ್ವರ, ಆಯುರ್ವೇದ ಫೆಡರೇಶನ್ ಆಫ್ ಇಂಡಿಯಾ, ರೋಟರಿ ಕ್ಲಬ್ ಹಾಗೂ ಇತರೇ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. 
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್. ಅವರು ಈ ವರ್ಷದ ಯೋಗ ದಿನಾಚರಣೆಯನ್ನು "ಮಾನವೀಯತೆಗಾಗಿ ಯೋಗ" ಎನ್ನುವ ಧ್ಯೇಯ ವಾಕ್ಯದೊಂದಿಗೆ ಆಚರಿಸಲಾಗುತ್ತಿದ್ದು ಪ್ರತಿಯೊಬ್ಬರೂ ಕೂಡಾ ಈ ಸಂದೇಶದೊಂದಿಗೆ ಯೋಗ ದಿನಾಚರಣೆಯನ್ನು ಮಾಡಬೇಕು ಎಂದು ಕರೆ ನೀಡಿದರು. 
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದ ಹಿರಿಯ ವಿಭಾಗದ ಸಿವಿಲ್ ನ್ಯಾಯಾಧೀಶೆ ರೇಣುಕಾ ರಾಯ್ಕರ್ ಅವರು ಮಾತನಾಡಿ ಯೋಗವನ್ನು ಅಂತಾರಾಷ್ಟ್ರೀಯ ಮಟ್ಟದ ತನಕವೂ ನಮ್ಮ ಪ್ರಧಾನಿಯವರು ತಲುಪಿಸಿದ್ದು, ತಮ್ಮ ವಿದೇಶ ಪ್ರವಾಸದಲ್ಲಿ ಯೋಗದ ಬಗ್ಗೆ ವಿದೇಶಿಯರಿಗೂ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವೀಯಾಗಿದ್ದಾರೆ. ಇಂದಿನ ದಿನಗಳಲ್ಲಿ ನಾವು ಪಾಶ್ಚಿಮಾತ್ಯರನ್ನು ಅನುಸರಿಸುವಾಗ ಪಾಶ್ಚಿಮಾತ್ಯರು ನಮ್ಮ ಯೋಗವನ್ನು ಅಳವಡಿಸಿಕೊಳ್ಳುತ್ತಿರುವುದು ದೇಶದ ಹೆಮ್ಮೆಯ ಸಂಗತಿಯಾಗಿದೆ ಎಂದರು. 
ತಾಲೂಕಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಚಿಕ್ಕನಮನೆ ಮಾತನಾಡಿದರು. ವೇದಿಕೆಯಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶ ವಿನೋದ ಬಾಳ ನಾಯ್ಕ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಫವಾಜ್ ಪಿ.ಎ., ತಹಸೀಲ್ದಾರ್ ಡಾ. ಸುಮಂತ್ ಬಿ.ಇ., ದೇವಸ್ಥಾನದ ವ್ಯವಸ್ಥಾಪಕ ಮಂಜುನಾಥ ಶೆಟ್ಟಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾದೇವಿ ಮೊಗೇರ, ಲಯನ್ಸ್ ಕ್ಲಬ್ ಪ್ರಮುಖ ಎಂ.ವಿ.ಹೆಗಡೆ, ಎ.ಎಫ್.ಐ. ಅಧ್ಯಕ್ಷ ಡಾ. ವಾದಿರಾಜ ಭಟ್ಟ, ಪತಂಜಲಿ ಯೋಗ ಕೇಂದ್ರದ ದುರ್ಗಾದಾಶ ನಾಯ್ಕ ಉಪಸ್ಥಿತರಿದ್ದರು. 
ಯೋಗ ದಿನಾಚರಣೆಯ ಪ್ರಭಾರಿ ಕುಮಟಾ ಆಯುಷ್ ವೈದ್ಯೆ ಡಾ. ಭಾರತಿ ಪಿ.ಬಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಯಲ್ಲಾಪುರದ ಆಯುಷ್ ವೈದ್ಯ ಡಾ. ಮಂಜುನಾಥ ಭಟ್ಟ ಸ್ವಾಗತಿಸಿದರು. ಹೊನ್ನಾವರ ಆಯುಷ್ ವೈದ್ಯ ಪ್ರವೀಣ ಜಿ.ಎನ್. ನಿರೂಪಿಸಿದರು. ಭಟ್ಕಳದ ಆಯುಷ್ ವೈದ್ಯ ಡಾ. ಕುಮಾರ ಮೊಗೇರ ವಂದಿಸಿದರು. 
ನಂತರ ಆರ್.ಎನ್.ಎಸ್. ಪದವಿ ಕಾಲೇಜು, ನರ್ಸಿಂಗ್ ಕಾಲೇಜು, ಪಾಲಿಟೆಕ್ನಿಕ್ ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು, ವಿವಿಧ ಇಲಾಖೆಯ ಅಧಿಕಾರಿಗಳು, ಸಂಘ ಸಂಸ್ಥೆಗಳ ಸದಸ್ಯರುಗಳು, ಸಿಬ್ಬಂದಿಗಳು ಸೇರಿದಂತೆ 700ಕ್ಕೂ ಹೆಚ್ಚು ಜನರು ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡರು. ಯೋಗ ಗುರು ಗೋವಿಂದ ಹೆಬಳೆ ಅವರು ಯೋಗ ಪ್ರಾತ್ಯಕ್ಷಿತೆಯನ್ನು ನೀಡಿದರು.


Share: